ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೌನವನ್ನು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. “ಈ ಮೌನವು ‘ತಟಸ್ಥ’ ನಿಲುವಲ್ಲ. ಬದಲಿಗೆ, ಅದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೃತ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಅವರು ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಲೇಖನ ಬರೆದಿದ್ದಾರೆ. ಅದರಲ್ಲಿ, “ಟೆಹ್ರಾನ್ ಜೊತೆಗಿನ ದೆಹಲಿಯ ಸಂಬಂಧವು ನಾಗರಿಕತೆಯಷ್ಟೇ ಪುರಾತನವಾದದ್ದು. ಕಾರ್ಯತಂತ್ರದ ದೃಷ್ಟಿಯಿಂದ ಮುಖ್ಯವಾದದ್ದು. ಇರಾನ್ ಹಲವಾರು ಸಂದರ್ಭಗಳಲ್ಲಿ ಭಾರತದ ನೆರವಿಗೆ ಧಾವಿಸಿದ್ದನ್ನು ಮೋದಿ ಸರ್ಕಾರ ಮರೆಯಬಾರದು” ಎಂದಿದ್ದಾರೆ.
“ಮಾರ್ಚ್ 1 ರಂದು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಉದ್ದೇಶಿತ ದಾಳಿಗಳಲ್ಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ. ಸಂಧಾನಗಳು ನಡೆಯುತ್ತಿರುವ ಮಧ್ಯೆಯೇ ಅಧಿಕಾರದಲ್ಲಿರುವ ರಾಷ್ಟ್ರದ ಮುಖ್ಯಸ್ಥರೊಬ್ಬರನ್ನು ಹತ್ಯೆ ಮಾಡುವುದು ಸಮಕಾಲೀನ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಬಿರುಕನ್ನು ಸೂಚಿಸುತ್ತದೆ. ಈ ವಿಚಾರದಲ್ಲಿ ದೆಹಲಿಯ ಮೌನವು ಅಷ್ಟೇ ಎದ್ದು ಕಾಣುತ್ತಿದೆ” ಎಂದು ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಆರಂಭದಲ್ಲಿ, ಅಮೆರಿಕ-ಇಸ್ರೇಲ್ನ ಬೃಹತ್ ಆಕ್ರಮಣ ನಡೆಸಿದಾಗ ಮೌನಕ್ಕೆ ಜಾರಿದ್ದ ಪ್ರಧಾನಿ (ನರೇಂದ್ರ ಮೋದಿ), ಯುಎಇ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯನ್ನು ಮಾತ್ರವೇ ಖಂಡಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಅದಕ್ಕಿಂತ ಮೊದಲು ನಡೆದ ಘಟನೆಗಳ ಬಗ್ಗೆ ಅವರು ಮಾತನಾಡಲಿಲ್ಲ. ನಂತರ, ಅವರು ‘ತೀವ್ರ ಕಳವಳ’ ಎಂಬ ಹಳೆಯ ಮಾತುಗಳನ್ನಷ್ಟೇ ಆಡಿದರು. ‘ಸಂವಾದ ಹಾಗೂ ರಾಜತಾಂತ್ರಿಕತೆ’ಯ ಬಗ್ಗೆ ಮಾತನಾಡಿದರು – ಇಸ್ರೇಲ್ ಮತ್ತು ಅಮೆರಿಕ ಪ್ರಚೋದನೆಯಿಲ್ಲದೆ ಬೃಹತ್ ದಾಳಿಗಳನ್ನು ನಡೆಸುವ ಮೊದಲು ಇದೇ ಸಂವಾದ ಮತ್ತು ರಾಜತಾಂತ್ರಿಕತೆಯ ಪ್ರಕ್ರಿಯೆ ನಡೆಯುತ್ತಿತ್ತು,” ಎಂದು ಗಾಂಧಿ ಹೇಳಿದ್ದಾರೆ.
“ವಿದೇಶಿ ನಾಯಕರೊಬ್ಬರ ಉದ್ದೇಶಿತ ಹತ್ಯೆಯಾದಾಗ ನಮ್ಮ ದೇಶದಿಂದ ಸಾರ್ವಭೌಮತ್ವ ಅಥವಾ ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ರಕ್ಷಣೆಯ ಮಾತುಗಳು ಕಾಣಲಿಲ್ಲ. ನಾವು ನಿಷ್ಪಕ್ಷಪಾತವನ್ನು ಕೈಬಿಟ್ಟಾಗ, ಅದು ನಮ್ಮ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂಶಯಗಳನ್ನು ಹುಟ್ಟುಹಾಕುತ್ತದೆ” ಎಂದು ಅವರು ಹೇಳಿದ್ದಾರೆ.
“ಯಾವುದೇ ಔಪಚಾರಿಕ ಯುದ್ಧ ಘೋಷಣೆಯಿಲ್ಲದೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಹತ್ಯೆಯನ್ನು ಮಾಡಲಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಿಂದ ಇಂತಹ ಕೃತ್ಯಗಳಿಗೆ ತಾತ್ವಿಕ ವಿರೋಧ ವ್ಯಕ್ತವಾಗದಿದ್ದರೆ, ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಯನ್ನು ಸಾಮಾನ್ಯೀಕರಿಸುವುದು ಸುಲಭವಾಗುತ್ತದೆ” ಎಂದು ಸೋನಿಯಾ ಗಾಂಧಿ ಎಂದು ಬರೆದಿದ್ದಾರೆ.
“ಈ ಘಟನೆಯ ಸಮಯವು ಆತಂಕವನ್ನು ಹೆಚ್ಚಿಸಿದೆ. ಹತ್ಯೆಗೆ ಕೇವಲ 48 ಗಂಟೆಗಳ ಮೊದಲು ಪ್ರಧಾನಿಯವರು ಇಸ್ರೇಲ್ ಪ್ರವಾಸದಿಂದ ಹಿಂದಿರುಗಿದ್ದರು. ಅಲ್ಲಿ ಅವರು ಬೆಂಜಮಿನ್ ನೆತನ್ಯಾಹು ಸರ್ಕಾರಕ್ಕೆ ಅಚಲ ಬೆಂಬಲವನ್ನು ಪುನರುಚ್ಚರಿಸಿದ್ದರು. ಗಾಜಾ ಸಂಘರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವು-ನೋವುಗಳ ಪ್ರಮಾಣವು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದರೂ ಈ ಬೆಂಬಲ ವ್ಯಕ್ತವಾಗಿತ್ತು,” ಎಂದು ಕಿಡಿಕಾರಿದ್ದಾರೆ.
ಕಾಶ್ಮೀರದ ಬಗ್ಗೆ ನೆನಪಿಸಿದ ಸೋನಿಯಾ ಗಾಂಧಿ, “1994 ಲ್ಲಿ, ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಕೆಲವು ವಿಭಾಗಗಳು ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಭಾರತದ ವಿರುದ್ಧ ನಿರ್ಣಯವನ್ನು ಮಂಡಿಸಲು ಪ್ರಯತ್ನಿಸಿದ್ದವು. ಆಗ, ಆ ಪ್ರಯತ್ನವನ್ನು ತಡೆಯುವಲ್ಲಿ ಇರಾನ್ ನಿರ್ಣಾಯಕ ಪಾತ್ರ ವಹಿಸಿತ್ತು. ಭಾರತದ ಆರ್ಥಿಕ ಹಾದಿಯ ಆ ಸಂಕಷ್ಟದ ಸಮಯದಲ್ಲಿ ಕಾಶ್ಮೀರ ವಿಷಯವು ಅಂತರರಾಷ್ಟ್ರೀಕರಣಗೊಳ್ಳುವುದನ್ನು ತಡೆಯಲು ಆ ಮಧ್ಯಸ್ಥಿಕೆ ಸಹಾಯ ಮಾಡಿತ್ತು,” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?
“ಇರಾನ್ ಪಾಕಿಸ್ತಾನದ ಗಡಿಯ ಸಮೀಪವಿರುವ ಜಹೇದಾನ್ನಲ್ಲಿ ಭಾರತದ ರಾಜತಾಂತ್ರಿಕ ಉಪಸ್ಥಿತಿಗೆ ಅವಕಾಶ ನೀಡಿದೆ. ಇದು ಗ್ವಾದರ್ ಬಂದರು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅಭಿವೃದ್ಧಿಗೆ ವ್ಯೂಹಾತ್ಮಕ ಪ್ರತಿಯಾಗಿ ಕಾರ್ಯನಿರ್ವಹಿಸುತ್ತದೆ,” ಎಂದು ಅವರು ಬರೆದಿದ್ದಾರೆ.
“2001ರ ಏಪ್ರಿಲ್ನಲ್ಲಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟೆಹ್ರಾನ್ಗೆ ಅಧಿಕೃತ ಭೇಟಿ ನೀಡಿದಾಗ, ಇರಾನ್ನೊಂದಿಗೆ ಭಾರತ ಹೊಂದಿರುವ ನಾಗರಿಕ ಮತ್ತು ಸಮಕಾಲೀನ ನಿಕಟ ಸಂಬಂಧಗಳನ್ನು ಆತ್ಮೀಯವಾಗಿ ಪುನರುಚ್ಚರಿಸಿದ್ದರು ಎಂಬುದನ್ನು ಪ್ರಸ್ತುತ ಸರ್ಕಾರ ನೆನಪಿಟ್ಟುಕೊಳ್ಳಬೇಕು. ಅಂತಹ ದೀರ್ಘಕಾಲದ ಸಂಬಂಧಗಳ ಬಗ್ಗೆ ಅವರಿಗಿದ್ದ ಗೌರವವು ನಮ್ಮ ಪ್ರಸ್ತುತ ಸರ್ಕಾರಕ್ಕೆ ಯಾವುದೇ ಪ್ರಸ್ತುತತೆಯನ್ನು ಹೊಂದಿಲ್ಲದಂತೆ ತೋರುತ್ತಿದೆ” ಎಂದು ಗಾಂಧಿ ಕಿಡಿಕಾರಿದ್ದಾರೆ.
“ಭಾರತದ ಸಂಬಂಧವು ಇಸ್ರೇಲ್ನೊಂದಿಗೆ ಇತ್ತೀಚಿನ ವರ್ಷಗಳಲ್ಲಿ ರಕ್ಷಣೆ, ಕೃಷಿ ಹಾಗೂ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ವಿಸ್ತರಿಸಿದೆ. ಭಾರತವು ಟೆಹ್ರಾನ್ ಮತ್ತು ಟೆಲ್ ಅವಿವ್ ಎರಡರ ಜೊತೆಗೂ ಸಂಬಂಧವನ್ನು ಹೊಂದಿರುವುದರಿಂದಲೇ, ಸಂಯಮಕ್ಕಾಗಿ ಒತ್ತಾಯಿಸುವ ರಾಜತಾಂತ್ರಿಕ ಅವಕಾಶವನ್ನು ಅದು ಹೊಂದಿದೆ. ಆದರೆ, ಅಂತಹ ಅವಕಾಶವು ವಿಶ್ವಾಸಾರ್ಹತೆಯ ಮೇಲೆ ಅವಲಂಬಿತವಾಗಿರುತ್ತದೆ. ವಿಶ್ವಾಸಾರ್ಹತೆಯು ಭಾರತವು ತನ್ನ ಅನುಕೂಲಕ್ಕೆ ತಕ್ಕಂತೆ ಅಲ್ಲದೆ, ತತ್ವಗಳ ಆಧಾರದ ಮೇಲೆ ಮಾತನಾಡುತ್ತದೆ ಎಂಬ ಅಭಿಪ್ರಾಯದ ಮೇಲೆ ನಿಂತಿದೆ” ಎಂದು ಅವರು ವಿವರಿಸಿದ್ದಾರೆ.




