ಕೆಲವು ವಾರಗಳಿಂದ ಚರ್ಚೆಯಲ್ಲಿರುವ ಊಹಾಪೋಹಗಳು ಮತ್ತು ಅಸಮಾಧಾನಗಳ ನಡುವೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗುರುವಾರ ತಮ್ಮ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಕೇರಳ ಮೂಲದವರಾದ ಶಶಿ ತರೂರ್ ಕೇರಳ ಚುನಾವಣೆಗೂ ಮುನ್ನ ನಡೆಸಿರುವ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ. ಅವರು ಕಾಂಗ್ರೆಸ್ ತೊರೆಯಬಹುದೆಂಬ ವದಂತಿಗಳಿಗೂ ತೆರೆಬಿದ್ದಿದೆ.
ಕಾಂಗ್ರೆಸ್ ನಾಯಕರೊಂದಿಗೆ ತರೂರ್ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. “ಎಲ್ಲ ವಿಚಾರಗಳನ್ನು ಸೌಹಾರ್ದಯುತವಾಗಿ ಮತ್ತು ರಚನಾತ್ಮಕವಾಗಿ ಚರ್ಚಿಸಲಾಗಿದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವ ಸಹೋದ್ಯೋಗಿಗಳು. ಇವರು ನನ್ನ ಇಬ್ಬರು ನಾಯಕರು. ನಾವು ಒಗ್ಗಟ್ಟಿನಿಂದ ಮುಂದುವರೆಯುತ್ತೇವೆ” ಎಂದು ಸಭೆಯ ಬಳಿಕ ತರೂರ್ ಹೇಳಿದ್ದಾರೆ.
ಅಲ್ಲದೆ, ಕೇರಳ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಅವರು ಆಕಾಂಕ್ಷೆ ಹೊಂದಿದ್ದಾರೆಂಬ ಚರ್ಚೆಯನ್ನು ತರೂರ್ ತಳ್ಳಿಹಾಕಿದ್ದಾರೆ. “ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ, ನಾನು ಮುಖ್ಯಮಂತ್ರಿ ಅಭ್ಯರ್ಥಿಯಲ್ಲ. ನಾನು ತಿರುವನಂತಪುರಂನ ಸಂಸದ, ಅಲ್ಲಿನ ಜನರ ಹಿತಾಸಕ್ತಿ ರಕ್ಷಿಸುವುದು ನನ್ನ ಜವಾಬ್ದಾರಿ” ಎಂದಿದ್ದಾರೆ.
ಅಂದಹಾಗೆ, ಕೇರಳ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದೊಳಗೆ ತಮಗೆ ಮನ್ನಣೆ ಮತ್ತು ರಾಜಕೀಯ ಸ್ಥಾನಮಾನಗಳ ವಿಚಾರದಲ್ಲಿ ತರೂರು ಅಸಮಾಧಾನಗೊಂಡಿದ್ದರು. ನಾಲ್ಕು ಬಾರಿ ಸಂಸದರಾಗಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರೂ ತಮ್ಮ ಸ್ಥಾನಮಾನ ಮತ್ತು ಕೊಡುಗೆಯನ್ನು ಸಮರ್ಪಕವಾಗಿ ಗುರುತಿಸಲಾಗುತ್ತಿಲ್ಲ ಎಂಬ ಭಾವನೆ ಅವರಲ್ಲಿ ಬೇರೂರಿತ್ತು. ಅವರ ಅಸಮಾಧಾನ ಮತ್ತು ಪಕ್ಷದ ಜೊತೆಗಿನ ಭಿನ್ನಮತವು 2025ರ ಏಪ್ರಿಲ್ನಲ್ಲಿ ಬಹಿರಂಗಗೊಂಡಿತ್ತು. ಆ ಸಂದರ್ಭದಲ್ಲಿ, ಭಾರತವು ಭಯೋತ್ಪಾದನೆ ವಿರುದ್ಧ ತನ್ನ ನಿಲುವನ್ನು ತಿಳಿಸಲು ಮಿತ್ರರಾಷ್ಟ್ರಗಳಿಗೆ ಕಳಿಸಲಾದ ನಿಯೋಗಗಳನ್ನು ರಚಿಸಿತ್ತು. ಆ ನಿಯೋಗಕ್ಕೆ ಕಾಂಗ್ರೆಸ್ನಿಂದ ಗೌರವ್ ಗೊಗೊಯ್ ಮತ್ತು ಸೈಯದ್ ನಸೀರ್ ಹುಸೇನ್ ಅವರನ್ನು ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಕಾಂಗ್ರೆಸ್ ಪಟ್ಟಿಯಲ್ಲಿ ಹೆಸರಿಸಿದ್ದ ಶಶಿ ತರೂರ್ ಅವರನ್ನು ಆಯ್ಕೆ ಮಾಡಿತು. ಆ ನಂತರ, ತರೂರ್ ಅವರು ಬಿಜೆಪಿ ಎಡೆಗೆ ವಾಲುತ್ತಿದ್ದಾರೆ ಎಂಬ ಚರ್ಚೆಗಳು ಕೂಡ ಮನ್ನೆಲೆ ಬಂದಿದ್ದವು.
ಆ ನಂತರ, ತರೂರ್ ನೀಡಿದ ಕೆಲವು ಹೇಳಿಕೆಗಳು ಕಾಂಗ್ರೆಸ್ನ ನಿಲುವಿಗೆ ವಿರುದ್ಧವಾಗಿದ್ದವೆಂದು ಪರಿಗಣಿಸಲಾಗಿತ್ತು. ಆ ಕಾರಣಕ್ಕಾಗಿ, ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ‘ತರೂರ್ ಹೇಳಿಕೆಗಳು ಅವರ ವೈಯಕ್ತಿಕ, ಪಕ್ಷಕ್ಕೆ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ತರೂರ್ ಅವರಿಗೆ ಕಾಂಗ್ರೆಸ್ ಎಚ್ಚರಿಕೆಯನ್ನೂ ನೀಡಿತು. ಕೆಲವು ಕಾಂಗ್ರೆಸಿಗರು ‘ತರೂರ್ ಪಕ್ಷದ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಿಂದ ಅಧಿಕೃತವಾಗಿ ದೂರ ಸರಿಯುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಲವರು ಭಾವಿಸಿದ್ದರು ಕೇರಳ ಕಾಂಗ್ರೆಸ್ ನಾಯಕರು ತರೂರು ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು.
ತಮ್ಮ ವಿರುದ್ಧದ ಅಸಮಾಧಾನಕ್ಕೆ ಪುಷ್ಠಿ ನೀಡುವಂತೆ, ಕೇರಳ ವಿಧಾನಸಭಾ ಚುನಾವಣೆ ಸಂಬಂಧ ಕೆಲವೇ ವಾರಗಳ ಹಿಂದೆ ನಡೆದ ಕಾಂಗ್ರೆಸ್ ಸಭೆಗಳಿಗೂ ತರೂರ್ ಗೈರಾಗಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ, ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದವರಿಗೆ ಅಭಿನಂದಿಸಲು ಜನವರಿ 19ರಂದು ಕೊಚ್ಚಿಯಲ್ಲಿ ‘ಮಹಾ ಪಂಚಾಯತ್’ ರ್ಯಾಲಿ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ವೇದಿಕೆಯಲ್ಲಿದ್ದ ಹಲವಾರು ನಾಯಕರೊಂದಿಗೆ ಕೈಕುಲುಕಿದ್ದರು. ಆದರೆ, ವೇದಿಕೆಯಲ್ಲೇ ಇದ್ದ ಶಶಿ ತರೂರ್ ಮತ್ತು ರಾಹುಲ್ ಗಾಂಧಿ ಪರಸ್ಪರರನ್ನು ಸಂಧಿಸಲಿಲ್ಲ. ರಾಹುಲ್ ಗಾಂಧಿ ಅವರೇ ತಮ್ಮನ್ನು ಮಾತನಾಡಿಸಬೇಕಿತ್ತು, ಆದರೆ, ಅವರು ತಮ್ಮ ಬಳಿ ಬರಲಿಲ್ಲವೆಂದು ತರೂರ್ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ.
ಇದೆಲ್ಲದರ ನಡುವೆ, ತರೂರ್, ತಾವು ಪಕ್ಷದ ನಿಲುವಿಗೆ ಬದ್ಧವಾಗಿರುವುದಾಗಿಯೂ, ಸಂಸತ್ತಿನಲ್ಲಿ ಪಕ್ಷದ ನಿಲುವನ್ನು ಎಂದೂ ಉಲ್ಲಂಘಿಸಿಲ್ಲವೆಂದೂ, ಆಪರೇಷನ್ ಸಿಂಧೂರ ವಿಚಾರದಲ್ಲಿ ಮಾತ್ರವೇ ಭಿನ್ನಾಭಿಪ್ರಾಯಗಳು ಇದ್ದವೆಂದೂ ಇತ್ತೀಚೆಗೆ ಹೇಳಿಕೊಂಡಿದ್ದರು.
ಈ ಲೇಖನ ಓದಿದ್ದೀರಾ?: ಇರಾನ್ ಮೇಲೆ ಮರುದಾಳಿಗೆ ಸಜ್ಜಾಗಿದೆ ಅಮೆರಿಕ- ಇಸ್ರೇಲ್ ಯುದ್ಧಕೋರ ಜೋಡಿ
ಇದೀಗ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ತರೂರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಮ್ಮಲ್ಲಿದ್ದ ಎಲ್ಲ ಅಸಮಾಧಾನಗಳು, ಬೇಸರಗಳ ಕುರಿತು ತರೂರ್ ಹೇಳಿಕೊಂಡಿದ್ದಾರೆ. ಅವೆಲ್ಲವುಗಳ ಬಗ್ಗೆ ಚರ್ಚೆಗಳು ನಡೆದಿವೆ. ಪಕ್ಷದೊಳಗಿನ ತಮ್ಮ ಪಾತ್ರ, ಕೇರಳ ಘಟಕದೊಂದಿಗಿನ ಸಮನ್ವಯ ಹಾಗೂ ವಿಧಾನಸಭಾ ಚುನಾವಣೆಗೆ ಅವರ ಜವಾಬ್ದಾರಿಗಳ ಕುರಿತು ಚರ್ಚಿಸಲಾಗಿದೆ. ತರೂರ್ ಅವರಿಗೆ ಪಕ್ಷದಲ್ಲಿ ಅವರ ಪಾತ್ರ ಮತ್ತು ಪ್ರಾಮುಖ್ಯತೆಯ ಕುರಿತು ರಾಹುಲ್ ಗಾಂಧಿ ಮನವರಿಕೆ ಮಾಡಿದ್ದಾರೆ. ಎಲ್ಲ ಹಿರಿಯ ನಾಯಕರು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಸಭೆಯನ್ನು ‘ಮುಕ್ತ’ ಮತ್ತು ‘ಸಮಗ್ರ’ವೆಂದು ತರೂರ್ ಬಣ್ಣಿಸಿದ್ದಾರೆ.
“ಸಭೆಯಿಂದಾಗಿ ನಾನು ತೃಪ್ತನಾಗಿದ್ದೇನೆ. ವಿವಿಧ ವಿಷಯಗಳ ಕುರಿತು ನನ್ನೊಂದಿಗೆ ಚರ್ಚಿಸಿದ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ಭಾರತದ ಜನರ ಸೇವೆಯಲ್ಲಿ ಮುಂದುವರೆಯುತ್ತಿರುವ ನಾವೆಲ್ಲರೂ ಒಂದೇ ಮಗ್ಗುಲಿನಲ್ಲಿದ್ದೇವೆ” ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ‘ಪ್ರಾಮಾಣಿಕ ವ್ಯಕ್ತಿ’. ಅವರು ದೇಶದಲ್ಲಿ ಕೋಮುವಾದ, ದ್ವೇಷ ಮತ್ತು ವಿಭಜನೆಯ ರಾಜಕೀಯದಂತಹ ವಿವಿಧ ವಿಷಯಗಳ ವಿರುದ್ಧ ಬಲವಾದ ಧ್ವನಿಯಾಗಿದ್ದಾರೆ. ಎಲ್ಲರೂ ಅವರನ್ನು ಇಷ್ಟಪಡುತ್ತಾರೆ” ಎಂದೂ ಹೇಳಿದ್ದಾರೆ.




