ಸಮಾಜವಾದಿ, ಕನ್ನಡಪರ ಹೋರಾಟಗಾರ ಕೋಣಂದೂರು ಲಿಂಗಪ್ಪನವರಿಗೆ 25.2.2026ರಂದು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ವತಿಯಿಂದ ಗೌರವ ಸಮರ್ಪಣೆ ಹಮ್ಮಿಕೊಳ್ಳಲಾಗಿದೆ. ಅದರ ನೆಪದಲ್ಲಿ ಲಿಂಗಪ್ಪನವರ ಕುರಿತ ಬರೆಹ...
ತೊಂಬತ್ತರ ಹರೆಯದ ಕೋಣಂದೂರು ಲಿಂಗಪ್ಪ ಅವರು ಸಮಾಜವಾದಿ ಹೋರಾಟಗಾರರಾಗಿ, ಕನ್ನಡಪರ ಹೋರಾಟಗಾರರಾಗಿ ನಾಡು-ನುಡಿಗೆ ಸಲ್ಲಿಸಿದ ಸೇವೆಯ ಕುರಿತು ಅವರ ಸಮಕಾಲೀನರು, ನಂತರದ ತಲೆಮಾರಿನವರು ಹಲವು ಆಯಾಮಗಳಲ್ಲಿ, ತಮ್ಮ ಕಣ್ಣೋಟದಲ್ಲಿ ದಾಖಲಿಸಿದ್ದಾರೆ. ಶಿವಮೊಗ್ಗದ ನಗರದಂಚಿನ ಮನೆಯಲ್ಲಿ ಕುಟುಂಬದೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ಲಿಂಗಪ್ಪನವರು ನಮ್ಮ ಜತೆ ಇರುವ ಅಪರೂಪದ ನಾಡಿನ ನೈತಿಕ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ಕುಂದದ ಅವರ ಜೀವನೋತ್ಸಾಹ, ನಾಡು-ನುಡಿ ಕುರಿತ ಕಾಳಜಿ ಪ್ರಜ್ಞಾವಂತರ ಎದೆಗೆ ತಾಕುವಂತಿವೆ.
ಕೋಣಂದೂರು ಅವರ ಜನಪರ ವ್ಯಕ್ತಿತ್ವವನ್ನು ಬಹುಷಃ ಎಲ್ಲೂ ದಾಖಲಾಗದ ಘಟನೆಯೊಂದನ್ನು ಹಿರಿಯ ಸಮಾಜವಾದಿ ಹೋರಾಟಗಾರರಾದ ಕಲ್ಲೂರು ಮೇಘರಾಜ್ ಅವರು ಹಂಚಿಕೊಂಡಿದ್ದಾರೆ.
ಅದು ಕೋಣಂದೂರು ಲಿಂಗಪ್ಪ ಅವರು ತೀರ್ಥಹಳ್ಳಿ ಶಾಸಕರಾಗಿದ್ದ 1972-77 ನಡುವಿನ ಅವಧಿ. ಇದೇ ಅವಧಿಯಲ್ಲಿ ಪಕ್ಕದ ಹೊಸನಗರ ಕ್ಷೇತ್ರದಲ್ಲಿ ಶೀರ್ನಾಳಿ ಚಂದ್ರಶೇಖರ್ ಶಾಸಕರಾಗಿದ್ದರು. ಹೊಸನಗರ ಕ್ಷೇತ್ರದ ವ್ಯಾಪ್ತಿಗೆ ಬರುವ ಕಲ್ಲೂರು, ಹುಂಚಾ ಹೋಬಳಿಯ ಪ್ರದೇಶದಲ್ಲಿ ಕುಮಧ್ವತಿ ನದಿ ಹರಿಯುತ್ತಿದ್ದು ಅದಕ್ಕೆ ಅಡ್ಡಲಾಗಿ ಸೇತುವೆಯೊಂದು ನಿರ್ಮಾಣವಾದರೆ ಸುತ್ತಮುತ್ತಲಿನ ಜನರ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸಿದ ಊರಿನ ಯುವಕರಾದ ಚಂದಪ್ಪಗೌಡರು, ಸಿ.ಈರಪ್ಪ, ಹೂವಪ್ಪಗೌಡರು ಮತ್ತು ದುಗ್ಗಪ್ಪಗೌಡರು ಕೂಡಿ ಕ್ಷೇತ್ರದ ಶಾಸಕರಾದ ಶೀರ್ನಾಳಿ ಚಂದ್ರಶೇಖರ್ ಅವರ ಬಳಿ ತೆರಳಿ ಮನವಿ ಸಲ್ಲಿಸಿದರು. ಆದರೆ ಅವರು ಈ ಬಾರಿಯ ಬಜೆಟ್ ಆಗಲೇ ಸಿದ್ಧವಾಗಿದ್ದು ಮುಂದಿನ ಬಾರಿ ಪ್ರಯತ್ನಿಸೋಣ ಎಂದು ಮನವಿ ಹಿಡಿದು ಬಂದವರನ್ನು ವಾಪಸು ಕಳಿಸಿದರು.
ಹೇಗಾದರೂ ಮಾಡಿ ಸೇತುವೆ ಮಾಡಿಸಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದ ಹುಂಚಾ ಹೋಬಳಿಯ ಯುವಕರು ಆಗ ಬೆಂಗಳೂರಿನ ಹರಿಶ್ಚಂದ್ರ ಘಾಟ್ ಬಳಿ ಬಾಡಿಗೆ ರೂಮ್ ಮಾಡಿಕೊಂಡು ಎಂ.ಎ ಓದುತ್ತಿದ್ದ ಕಲ್ಲೂರು ಮೇಘರಾಜರನ್ನು ಭೇಟಿಯಾಗಿ ವಿಷಯ ತಿಳಿಸಿದರು. ಮೇಘರಾಜ್ ಅವರು ಆಗಲೇ ಕೋಣಂದೂರು ಅವರಿಗೆ ಪರಿಚಿತರೇ ಆಗಿದ್ದರು. ಆ ಯುವಕರನ್ನು ಮೇಘರಾಜ್ ಶಾಸಕರ ಭವನದಲ್ಲಿದ್ದ ಕೋಣಂದೂರು ಅವರ ಬಳಿ ಕರೆದೊಯ್ದರು. ಹಾಗೆ ನೋಡಿದರೆ ಹಂಚಾ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ನೆಪವೊಡ್ಡಿ ಬಂದ ಊರಿನವರನ್ನು ಕೋಣಂದೂರು ಅವರು ವಾಪಸು ಕಳಿಸಲಿಲ್ಲ. ಇವರನ್ನೆಲ್ಲ ಕರೆದುಕೊಂಡು ನೇರವಾಗಿ ಅಂದಿನ ಲೋಕೋಪಯೋಗಿ ಮಂತ್ರಿಗಳಾಗಿದ್ದ ಎಚ್.ಎಂ. ಚನ್ನಬಸಪ್ಪ ಅವರ ಬಳಿ ಹೋದರು. ಕೋಣಂದೂರು ಅವರ ವಿನಂತಿಯನ್ನು ತಕ್ಷಣವೇ ಮಾನ್ಯ ಮಾಡಿದ ಮಂತ್ರಿಗಳು ಸೇತುವೆ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೂಡಲೇ ಮಂಜೂರು ಮಾಡಿದರು.
ಇಂತಹ ಹಲವಾರು ಘಟನೆಗಳು ಕೋಣಂದೂರು ಲಿಂಗಪ್ಪನವರ ಜನಪರ ಕಾಳಜಿಯನ್ನು ಸಾರಿ ಹೇಳುತ್ತವೆ. ತೊಂಬತ್ತರ ಹರೆಯದಲ್ಲಿರುವ ಕೋಣಂದೂರರು ಶತಕ ಪೂರೈಸಿ ಮುನ್ನುಗ್ಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.


ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು




