‘ಝಂಡಾ ಯೂನಿಯನ್’ಗಳಿಂದ ಕೈಗಾರಿಕಾ ಬೆಳವಣಿಗೆ ಸ್ಥಗಿತವಾಗುತ್ತಿದೆ ಎಂಬ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯು ಸದ್ಯ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. “ಕೈಗಾರಿಕಾ ಬೆಳವಣಿಗೆ ಸ್ಥಗಿತಕ್ಕೆ ಕಾರ್ಮಿಕರ ಹಕ್ಕಿಗಾಗಿ ನಡೆಯುವ ಹೋರಾಟಗಳಲ್ಲ, ಬದಲಾಗಿ ಕಾರ್ಪೊರೇಟ್ ವೈಫಲ್ಯಗಳು ಕಾರಣ” ಎಂದು ಸಂಘಟನೆಗಳು ಹೇಳಿಕೊಂಡಿದೆ.
ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯು ಕುಂಠಿತವಾಗಲು ಇಂತಹ ‘ಝಂಡಾ’ ಯೂನಿಯನ್ಗಳ ಅಂದರೆ ಟ್ರೇಡ್ ಯೂನಿಯನ್ಗಳ ಸಿದ್ಧಾಂತವೇ ಮುಖ್ಯ ಕಾರಣ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಿಸಿದ್ದಾರೆ. “ಇಂತಹ ಸಂಘಟನೆಗಳಿಂದಾಗಿಯೇ ಅನೇಕ ಸಾಂಪ್ರಾದಾಯಿಕ ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಈ ಸಂಘಟನೆಗಳು ಕೆಲಸಕ್ಕಿಂತ ಹೆಚ್ಚಾಗಿ ಪ್ರತಿಭಟನೆಗೆ ಒತ್ತು ನೀಡಿರುವುದರಿಂದಾಗಿ ಹಲವು ಕೈಗಾರಿಕೆಗಳಿಗೆ ಸಮಸ್ಯೆಯಾಗಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ದೇಶದಲ್ಲಿ ಕೈಗಾರಿಕಾ ಬೆಳವಣಿಗೆ ತಡೆಗೆ ಟ್ರೇಡ್ ಯೂನಿಯನ್ ಸಿದ್ಧಾಂತ ಕಾರಣ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ನ ಈ ಆರೋಪದ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಂಘಟನೆ ಸಿಐಟಿಯು ಮುಖಂಡೆ ಎಸ್.ವರಲಕ್ಷ್ಮಿ, “ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಕೈಗಾರಿಕಾ ಮಂದಗತಿಗೆ ಕಾರ್ಮಿಕ ಸಂಘಗಳನ್ನು ಹೊಣೆಗಾರರನ್ನಾಗಿ ಮಾಡಿರುವುದು ಹಾಗೂ ಗೃಹಕಾರ್ಮಿಕರ ಕನಿಷ್ಠ ವೇತನವನ್ನು ಪ್ರಶ್ನಿಸಿರುವ ಇತ್ತೀಚಿನ ಹೇಳಿಕೆಗಳನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ. ಈ ಹೇಳಿಕೆಗಳು ಕಾರ್ಮಿಕರ ಹೋರಾಟಗಳನ್ನು ದುರ್ಬಲಗೊಳಿಸಲು ಹಾಗೂ ಸಂವಿಧಾನಾತ್ಮಕವಾಗಿ ಭದ್ರಪಡಿಸಲಾದ ಕಾರ್ಮಿಕ ಹಕ್ಕುಗಳನ್ನು ನಾಶಪಡಿಸಲು ಪ್ರಯತ್ನಿಸುವ ನವ-ಉದಾರವಾದಿ ಮನೋಭಾವದ ಪ್ರತಿಬಿಂಬ” ಎಂದು ಹೇಳಿದ್ದಾರೆ.
“ಕಾರ್ಮಿಕ ಸಂಘಗಳು ಐತಿಹಾಸಿಕವಾಗಿ ಕಾರ್ಮಿಕರ ಗೌರವ, ನ್ಯಾಯಸಮ್ಮತ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಡುತ್ತಾ ಬಂದಿವೆ. ಅದರಲ್ಲೂ ಶೇಷವಾಗಿ ಅಸಂಘಟಿತ ವಲಯದಲ್ಲಿರುವ ಮಹಿಳಾ ಕಾರ್ಮಿಕರ ಪರವಾಗಿ ಹೋರಾಡುತ್ತಾ ಬಂದಿವೆ. ಅಷ್ಟಕ್ಕೂ ಸಂವಿಧಾನವೇ ನಮಗೆ ಸಂಘಟಿಸುವ ಹಕ್ಕು ನೀಡಿರುವುದು. ಕಾರ್ಮಿಕ ಸಂಘಗಳನ್ನು ಅಭಿವೃದ್ಧಿಗೆ ಅಡ್ಡಿಯೆಂದು ಚಿತ್ರಿಸುವುದು ಈ ಹಕ್ಕಿಗೆ ಮಾಡಿದ ಅವಮಾನ” ಎಂದು ಅಭಿಪ್ರಾಯಿಸಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ವಿವಾದಗಳು ತೀವ್ರವಾಗಿ ಇಳಿಕೆಯಾಗಿರುವುದನ್ನು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ. ಕೈಗಾರಿಕೆ ಮುಚ್ಚಲು ಕಾರ್ಮಿಕರ ಹಕ್ಕುಗಳ ಹೋರಾಟ ಕಾರಣವಲ್ಲ, ಕಾರ್ಪೊರೇಟ್ ವೈಫಲ್ಯಗಳು, ಹಣ ಬಾಕತನ, ಎಂಎಸ್ಎಂಇಗಳ ಮೇಲೆ ನೀತಿಯ ಒತ್ತಡ ಹಾಗೂ ಕಲ್ಯಾಣ ಕ್ರಮಗಳನ್ನು ಹಿಂಪಡೆಯವುದೇ ಪ್ರಮುಖ ಕಾರಣಗಳು” ಎಂದು ಹೇಳಿದ್ದಾರೆ.
ಇನ್ನು ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ‘ಮೂಲಭೂತ ಹಕ್ಕು’ ಎಂದು ಘೋಷಿಸಬೇಕು ಮತ್ತು ದೇಶಾದ್ಯಂತ ಕಡ್ಡಾಯಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. “ವೇತನ ನಿಗದಿಯಾದರೆ ಪ್ರತಿ ಮನೆಯೂ ಕಾನೂನು ಸಂಘರ್ಷದಲ್ಲಿ ಸಿಲುಕಬಹುದು. ಕಾರ್ಮಿಕ ಸಂಘಟನೆಗಳು ಪ್ರತಿ ಮನೆಯನ್ನೂ ನ್ಯಾಯಾಲಯಕ್ಕೆ ಎಳೆದು ತರಬಹುದು. ಅಷ್ಟಕ್ಕೂ ವೇತನ ನಿಗದಿ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಕಾರ್ಮಿಕ ವಿರೋಧಿ ಸಂಹಿತೆ ಜಾರಿ: ಕೇಂದ್ರ ಸರ್ಕಾರದ ವಿರುದ್ಧ ಎಐಯುಟಿಯುಸಿ ಆಕ್ರೋಶ
ಈ ಹೇಳಿಕೆಯ ಬಗ್ಗೆಯೂ ಪ್ರತಿಕ್ರಿಯಿಸಿರು ಕಾರ್ಮಿಕ ಮುಖಂಡೆ ಎಸ್.ವರಲಕ್ಷ್ಮಿ, “ಈ ಹೇಳಿಕೆಗಳು ಆತಂಕಕಾರಿ. ಇದು ಹೆಚ್ಚಾಗಿ ಮಹಿಳಾಕೇಂದ್ರಿತ ವಲಯ ಮತ್ತು ಹೆಚ್ಚಾಗಿ ಶೋಷಣೆ ನಡೆಯುತ್ತದೆ. ಗೌರವಯುತ ಜೀವನ ಹಾಗೂ ಜೀವನೋಪಾಯಕ್ಕಾಗಿ ಕನಿಷ್ಠ ವೇತನ ಅನಿವಾರ್ಯ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ವಿರುದ್ಧ ಫೆಬ್ರವರಿ 12ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಸಾಮಾನ್ಯ ಮುಷ್ಕರದ ಮುನ್ನವೇ ಈ ಹೇಳಿಕೆಗಳು ಬಂದಿರುವುದು ಅತ್ಯಂತ ಕಳವಳಕಾರಿ” ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ಜಿತ್ ಕೌರ್, “ನ್ಯಾಯಾಂಗವು ಕಾರ್ಮಿಕರ ಸಾಮಾಜಿಕ ನ್ಯಾಯ ಮತ್ತು ಘನತೆಯ ಪರವಾಗಿರಬೇಕೇ ಹೊರತು, ಹೋರಾಟಗಳನ್ನು ಹತ್ತಿಕ್ಕುವಂತಿರಬಾರದು. ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಇನ್ನು “ನ್ಯಾಯಾಂಗವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಬದಲು ಮಾಲೀಕರು ಮತ್ತು ಕಾರ್ಪೊರೇಟ್ ಪರವಾಗಿ ಮಾತನಾಡುತ್ತಿದೆ. ಈ ಹೇಳಿಕೆಯು ನ್ಯಾಯಾಲಯದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ. ಲಕ್ಷಾಂತರ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಕೆಂಪು ಬಾವುಟ ಹಿಡಿದು ಹೋರಾಡುತ್ತಿದ್ದಾರೆ. ಅಂತಹ ಹೋರಾಟವನ್ನು ‘ಝಂಡಾ ಯೂನಿಯನ್’ ಎಂದು ಕರೆಯುವುದು ಅವರ ಘನತೆ ಮತ್ತು ತ್ಯಾಗಕ್ಕೆ ಮಾಡಿದ ಅಪಮಾನ AICCTU ಸಂಘಟನೆ ಹೇಳಿದೆ.
ಇನ್ನು ಎಲ್ಲ ಸಂಘಟನೆಗಳು ಸುಪ್ರೀಂ ಕೋರ್ಟ್ನ ಈ ವಿವಾದಾತ್ಮಕ ಹೇಳಿಕೆಯ ವಿರುದ್ಧ ಮತ್ತು ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ತಿಳಿಸಿದೆ.





