ಬಿಜೆಪಿ ಎಂಎಲ್ಸಿ ಸಿ ಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮಧ್ಯಂತರ ಹೈಕೋರ್ಟ್ ಆದೇಶ ನೀಡಿದೆ. ತನಿಖಾಧಿಕಾರಿ ಸೂಚಿಸಿದಾಗ ರವಿ ತನಿಖೆಗೆ ಹಾಜರಾಗಬೇಕು ಎಂಬ ನ್ಯಾಯಾಲಯ ಷರತ್ತು ವಿಧಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಿ ಟಿ ರವಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠದಿಂದ ಶುಕ್ರವಾರ ವಿಚಾರಣೆ ನಡೆಯಿತು. ರವಿ ಅವರ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಸಂದೇಶ್ ಚೌಟ ಅವರು ‘ರವಿ ಅವರನ್ನು ಬಂಧಿಸಿರುವುದೇ ಅಕ್ರಮ. ನಾನು ತಕ್ಷಣ ರವಿ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ, ನಿಂದಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಪೊಲೀಸರು ಕರೆತರುತ್ತಿದ್ದಾರೆ. ಬೆಳಗಾವಿ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಜಡ್ಜ್ ಸ್ಪರ್ಷಾ ಡಿ.ಸೋಜ ಅವರು ಶುಕ್ರವಾರ ಪ್ರಕರಣವನ್ನು ಬೆಳಗಾವಿಯಿಂದ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಿದ ಬಳಿಕ ಬೆಂಗಳೂರಿಗೆ ರವಿ ಅವರನ್ನು ಕರೆತರಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ(ಬಿಎನ್ಎಸ್) ಕಲಂ 75ರಡಿ (ಲೈಂಗಿಕ ಕಿರುಕುಳ) ಹಾಗೂ ಬಿಎನ್ಎಸ್ ಕಲಂ 79ರಡಿ (ಮಹಿಳೆಯ ಮಾನಕ್ಕೆ ಕುಂದು ಉಂಟು ಮಾಡುವ ಉದ್ದೇಶವಿರುವ ಪದ ಬಳಕೆ ಸನ್ನೆ ಅಥವಾ ಕೃತ್ಯ) ಪ್ರಕರಣ ದಾಖಲಾಗಿದೆ. ಈ ಕಲಂಗಳಡಿ ದಾಖಲಾಗುವ ಪ್ರಕರಣಗಳು ಸಾಬೀತಾದರೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.





