ಐಆರ್ಸಿಟಿಸಿ(IRCTC) ಹಗರಣದ ಆರೋಪದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಯಾದವ್, ಅವರ ಪುತ್ರ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಮತ್ತು ಲಾಲೂ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧ ದೆಹಲಿ ಕೋರ್ಟ್ ದೋಷಾರೋಪವನ್ನು ಹೊರಿಸಿದೆ. ಬಿಹಾರ ಚುನಾವಣೆಗೆ ಕೆಲವೇ ವಾರಗಳ ಮುನ್ನ ನಡೆದ ಈ ಬೆಳವಣಿಗೆ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗುತ್ತಿದೆ.
ಐಆರ್ಸಿಟಿಸಿ ಹೊರಡಿಸಿದ ಟೆಂಡರ್ಗಳನ್ನು ವಿತರಿಸುವಾಗ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಪ್ರಕರಣಗಳಡಿ ಲಾಲೂ ಕುಟುಂಬದ ವಿರುದ್ಧ ವಿಚಾರಣೆ ನಡೆಯುತ್ತಿದೆ. “ನೀವು ನಿಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತೀರಾ” ಎಂದು ಕೋರ್ಟ್ ಪ್ರಶ್ನಿಸಿದ್ದು, ಲಾಲೂ ಕುಟುಂಬ ನಾವು ತಪ್ಪಿತಸ್ಥರಲ್ಲ ಎಂದು ವಾದಿಸಿದೆ.
ಇದನ್ನು ಓದಿದ್ದೀರಾ? ಇಂದಿರಾ ಗಾಂಧಿ ನಮ್ಮನ್ನು ಜೈಲಿಗೆ ಹಾಕಿದ್ದರು, ಆದರೆ ಯಾವತ್ತೂ ನಿಂದಿಸಲಿಲ್ಲ: ಲಾಲೂ ಯಾದವ್
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(IRCTC) ಭಾರತೀಯ ರೈಲ್ವೆ ಇಲಾಖೆಯ ಅಂಗಸಂಸ್ಥೆಯಾಗಿದ್ದು, 1999ರಲ್ಲಿ ಸ್ಥಾಪಿಸಲಾಗಿದೆ. ರೈಲು ಟಿಕೆಟ್ ಬುಕ್ಕಿಂಗ್, ರೈಲ್ವೆ ಕ್ಯಾಟರಿಂಗ್ ಸೇವೆ ಮತ್ತು ಪ್ರವಾಸೋದ್ಯಮದಂತಹ ವಿವಿಧ ಸೇವೆಗಳನ್ನು ನೀಡುತ್ತದೆ.
ಏನಿದು IRCTC ಹೋಟೆಲ್ ಹಗರಣ?
2004ರಿಂದ 2009ರವರೆಗೆ ಲಾಲೂ ಯಾದವ್ ರೈಲ್ವೆ ಸಚಿವರಾಗಿದ್ದರು. ಈ ವೇಳೆ ರಾಂಚಿ ಮತ್ತು ಪುರಿಯಲ್ಲಿರುವ ಐಆರ್ಸಿಟಿಸಿ ಹೋಟೆಲ್ಗಳ ನಿರ್ವಹಣೆಗಾಗಿ ನಡೆದ ಟೆಂಡರ್ ಪ್ರಕ್ರಿಯೆಯ ಮೇಲೆ ನೇರವಾಗಿ ಪ್ರಭಾವ ಬೀರಿದ್ದರು ಎಂದು ಆರೋಪಿಸಲಾಗಿದೆ. ವಿಜಯ್ ಮತ್ತು ವಿನಯ್ ಕೊಚಾರ್ ಎಂಬವರ ಒಡೆತನದ ಸುಜಾತಾ ಹೋಟೆಲ್ ಎಂಬ ಖಾಸಗಿ ಸಂಸ್ಥೆಗೆ ಈ ಟೆಂಡರ್ ಮಾಡಿಕೊಡಲು ಲಾಲೂ ಅವರು ಶೆಲ್ ಕಂಪನಿ ಮೂಲಕ ಪಟನಾದಲ್ಲಿ ಮೂರು ಎಕರೆ ಭೂಮಿಯನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ಭೂಮಿಯನ್ನು ತೇಜಸ್ವಿ ಯಾದವ್ ಮತ್ತು ರಾಬ್ರಿ ದೇವಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಸುಜಾತಾ ಹೋಟೆಲ್ ಮತ್ತು ಇನ್ನೊಂದು ಕಾರ್ಪೊರೇಟ್ ಸಂಸ್ಥೆಯನ್ನೂ ಈ ಪ್ರಕರಣದಲ್ಲಿ ಹೆಸರಿಸಲಾಗಿದೆ.
[BREAKING] Delhi court frames charges against Lalu Yadav, Tejashwi Yadav, Rabri Devi in IRCTC scam case
— Bar and Bench (@barandbench) October 13, 2025
report by @prashantjha996 https://t.co/TlBDmT6w50
ಕೇಂದ್ರ ತನಿಖಾ ದಳ(ಸಿಬಿಐ) 2006ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. ಆದರೆ 2017ರ ಜುಲೈವರೆಗೆ ಲಾಲೂ ಯಾದವ್ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ತನಿಖೆ ಭಾಗವಾಗಿ ಸಿಬಿಐ ಪಟನಾ, ದೆಹಲಿ, ರಾಂಚಿ ಮತ್ತು ಗುರುಗ್ರಾಮದಲ್ಲಿರುವ ಲಾಲೂ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.
ದೆಹಲಿಯ ರೌಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಲಾಲೂ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಸಿಬಿಐ ಹೇಳಿಕೊಂಡಿದೆ. ಆದರೆ ಈ ಒಪ್ಪಂದವನ್ನು ನ್ಯಾಯಯುತವಾಗಿ ನಡೆಸಲಾಗಿದೆ ಎಂದು ಲಾಲೂ ಕುಟುಂಬ ವಾದಿಸಿದೆ. ಇಂದು ಬೆಳಿಗ್ಗೆ ತೀರ್ಪು ನೀಡಿದ ಕೋರ್ಟ್ ‘ನಡೆದಿರಬಹುದು ಎನ್ನಲಾದ ವಂಚನೆಯನ್ನು ವಂಚನೆ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕು’ ಎಂದು ಹೇಳಿದೆ. ಯಾದವ್ ಕುಟುಂಬದ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಮತ್ತು 120ಬಿ (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ಹಸ್ತಾಂತರಕ್ಕೆ ಪ್ರೇರೇಪಿಸುವುದು) ಪ್ರಕರಣ ದಾಖಲಾಗಿದೆ. ಈ ಆರೋಪಗಳ ಅಡಿಯಲ್ಲಿ ಏಳು ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಸದ್ಯ ದೋಷಾರೋಪ ಹೊರಿಸಲಾಗಿದ್ದು, ನ್ಯಾಯಾಲಯವು ಲಾಲೂ ಯಾದವ್ ಮತ್ತು ಇತರ ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ಪರಿಶೀಲಿಸಲಿದೆ. ಕೋರ್ಟ್ ಮುಂದಿನ ದಿನಾಂಕ ನಿಗದಿಪಡಿಸಿದ ನಂತರ ಔಪಚಾರಿಕ ವಿಚಾರಣೆ ಪ್ರಾರಂಭವಾಗಲಿದೆ.





