ಆರ್ಎಸ್ಎಸ್ ಒಂದು ಅನಧಿಕೃತ ಸಂಘಟನೆ. ಒಂದು ವೇಳೆ, ಆ ಸಂಘಟನೆ ದೇಶದ ಕಾನೂನಿನ ಅಡಿಯಲ್ಲಿ ತನ್ನ ನೋಂದಣಿ ಮಾಡಿಕೊಂಡಿದ್ದಾರೆ, ಅದರ ದಾಖಲೆಗಳನ್ನು ಸಾಬೀತುಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಯಾವುದೇ ಸಂಘಟನೆ ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಂಡಿದ್ದರೆ, ಆ ಸಂಘಟನೆ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಅದಕ್ಕೆ ಯಾರು ಹಣ ಕೊಡುತ್ತಾರೆ. ಯಾವ ಮೂಲದಿಂದ ಹಣ ಬರುತ್ತದೆ ಎಂಬುದು ಗೊತ್ತಾಗುತ್ತದೆ. ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕಾಗಿ ಆರ್ಎಸ್ಎಸ್ ಈವರೆಗೆ ನೋಂಡಣಿ ಮಾಡಿಕೊಂಡಿಲ್ಲ” ಎಂದು ಹೇಳಿದ್ದಾರೆ.
“ಅನಧಿಕೃತ ಸಂಘಟನೆಯಾಗಿರುವ ಆರ್ಎಸ್ಎಸ್ಗೆ ಹಣ ಎಲ್ಲಿಂದ ಬರುತ್ತದೆ? ಗಣವಸ್ತ್ರಗಳ ಖರೀದಿ ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಯಾರು ಹಣ ಕೊಡುತ್ತಿದ್ಧಾರೆ ಎಂಬುದನ್ನು ಆರ್ಎಸ್ಎಸ್ ಬಹಿರಂಗಪಡಿಬೇಕು. ನೋಂದಣಿ ಮಾಡಿಕೊಂಡಿರುವ ಬಗ್ಗೆ ದಾಖಲೆ ತೋರಿಸಿದರೆ, ಅದರ ಹಣದ ಮೂಲದ ಬಗ್ಗೆ ನಾವು ಪ್ರಶ್ನಿಸುವುದಿಲ್ಲ” ಎಂದಿದ್ದಾರೆ.
“ಚಾಮರಾಜನಗರ, ಚಿತ್ತಾಪುರ ಸೇರಿದಂತೆ ಹಲವೆಡೆ ಭೀಮ್ ಆರ್ಮಿ ಮತ್ತು ಇತರ ಸಂಘಟನೆಗಳು ಪಥ ಸಂಚಲನಕ್ಕೆ ಅನುಮತಿ ಹೇಳಿವೆ. ಹೈಕೋರ್ಟ್ ಆದೇಶದಂತೆ ವಾತಾವರಣ ಸುಗಮವಾಗಿದ್ದರೆ ಅವರೂ ಮಾಡಲಿ. ಎಲ್ಲ ಸಂಘಟನೆಗಳಿಗೂ ಒಂದೇ ಮಾನದಂಡ ಅನ್ವಯವಾಗುತ್ತದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.




