ಅದಾನಿ ಲಾಭಕ್ಕಾಗಿ ಅದಾನಿ ಗ್ರೂಪ್ನ ಸೆಕ್ಯುರಿಟಿಗಳಲ್ಲಿ ಜೀವ ವಿಮಾ ನಿಗಮ(ಎಲ್ಐಸಿ) ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ವರದಿ ಬಳಿಕ ಈ ಬಗ್ಗೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಆದರೆ ಎಲ್ಐಸಿ ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದ್ದು, “ಇದು ಸುಳ್ಳು, ಆಧಾರಹಿತ ಮತ್ತು ಸತ್ಯಕ್ಕೆ ದೂರವಾದುದ್ದು” ಎಂದು ಹೇಳಿದೆ.
2025ರ ಮೇ ತಿಂಗಳಲ್ಲಿ ವಿವಿಧ ಅದಾನಿ ಗ್ರೂಪ್ ಕಂಪನಿಗಳಲ್ಲಿ ಸುಮಾರು 33,000 ಕೋಟಿ ರೂ. ಎಲ್ಐಸಿ ನಿಧಿಯನ್ನು ಹೂಡಿಕೆ ಮಾಡುವ ಪ್ರಸ್ತಾವನೆಯನ್ನು ಭಾರತೀಯ ಅಧಿಕಾರಿಗಳು ಜಾರಿಗೆ ತಂದಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದಾದ ಬಳಿಕ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುತ್ತಿದೆ.
ಇದನ್ನು ಓದಿದ್ದೀರಾ? ಹಿಂಡನ್ಬರ್ಗ್ ಸ್ಪೋಟಕ ವರದಿ; ಅದಾನಿ ಗ್ರೂಪ್ನಿಂದ ಹೇಳಿಕೆ ಬಿಡುಗಡೆ
ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಮೋದಾನಿ(ಮೋದಿ-ಪ್ರಧಾನಿ) ಜಂಟಿ ಉದ್ಯಮವು ಭಾರತೀಯ ಜೀವ ವಿಮಾ ನಿಗಮ (LIC) ಮತ್ತು ಅದರ 30 ಕೋಟಿ ಪಾಲಿಸಿದಾರರ ಉಳಿತಾಯವನ್ನು ಹೇಗೆ ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ” ಎಂದು ಹೇಳಿದ್ದಾರೆ.
“ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗದ ಅಧಿಕಾರಿಗಳು ಯಾರ ಒತ್ತಡದಿಂದಾಗಿ ಹಲವು ಗಂಭೀರ ಆರೋಪಗಳಿಂದಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಖಾಸಗಿ ಕಂಪನಿಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿದರು? ಇದು ‘ಮೊಬೈಲ್ ಫೋನ್ ಬ್ಯಾಂಕಿಂಗ್’ ನ ಪ್ರಕರಣವಲ್ಲವೇ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
मोदानी महाघोटाले में नवीनतम खुलासों पर हमारा बयान: LIC द्वारा ‘अडानी समूह पर भरोसा दिखाने’ के नाम पर 33,000 करोड़ रुपये के सार्वजनिक धन का जबरन दुरुपयोग किया गया है। pic.twitter.com/Yp51EHDx7X
— Jairam Ramesh (@Jairam_Ramesh) October 25, 2025
“ಸೌರಶಕ್ತಿ ಒಪ್ಪಂದವನ್ನು ಪಡೆಯುವ ನಿಟ್ಟಿನಲ್ಲಿ ಸುಮಾರು 2,000 ಕೋಟಿ ರೂ. ಲಂಚ ನೀಡಿದ ಆರೋಪವನ್ನು ಅದಾನಿ ಗ್ರೂಪ್ ಹೊಂದಿದೆ. ಮೋದಿ ಸರ್ಕಾರವು ಸುಮಾರು ಒಂದು ವರ್ಷದವರೆಗೆ ಪ್ರದಾನಿಯವರ ಪ್ರಿಯ ವ್ಯಾಪಾರ ಸಮೂಹಕ್ಕೆ ಅಮೆರಿಕ ನೀಡಿದ ಸಮನ್ಸ್ ಅನ್ನು ನೀಡಲು ನಿರಾಕರಿಸಿದೆ” ಎಂದು ಟೀಕಿಸಿದ್ದಾರೆ.
ಇನ್ನು ಅದಾನಿ ಸಂಸ್ಥೆಯಲ್ಲಿ ಎಲ್ಐಸಿ ಹೂಡಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಸರ್ಕಾರದ ನೇರ ಲಾಭ ವರ್ಗಾವಣೆಯ ಫಲಾನುಭವಿಗಳು ದೇಶದ ಸಾಮಾನ್ಯ ಜನರಲ್ಲ. ಬದಲಾಗಿ ಮೋದಿಯವರ ಉತ್ತಮ ಸ್ನೇಹಿತರು. ತಮ್ಮ ಎಲ್ಐಸಿ ಪ್ರೀಮಿಯಂನ ಪ್ರತಿ ಪೈಸೆಯನ್ನು ಪಾವತಿಸುವ ಸರಾಸರಿ ಸಂಬಳ ಪಡೆಯುವ ಮಧ್ಯಮ ವರ್ಗದ ವ್ಯಕ್ತಿಯ ಹಣವನ್ನು ಮೋದಿ ಅದಾನಿಯನ್ನು ಉಳಿಸಲು ಬಳಸುತ್ತಿದ್ದಾರೆ ಎಂದು ತಿಳಿದಿದೆಯೇ? ಇದು ನಂಬಿಕೆಯ ಉಲ್ಲಂಘನೆಯಲ್ಲವೇ? ಇದು ಲೂಟಿಯಲ್ಲವೇ” ಎಂದೂ ಖರ್ಗೆ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ ಎಲ್ಐಸಿ ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದೆ. “ಈ ಆರೋಪಗಳು ಸುಳ್ಳು, ಆಧಾರರಹಿತ” ಎಂದು ಹೇಳಿದೆ. “ಲೇಖನದಲ್ಲಿ ಆರೋಪಿಸಲಾದ ಯಾವುದೇ ದಾಖಲೆ ಅಥವಾ ಯೋಜನೆಯನ್ನು ಎಲ್ಐಸಿ ಎಂದಿಗೂ ಸಿದ್ಧಪಡಿಸಿಲ್ಲ” ಎಂದು ಹೇಳಿದೆ. ಕಾಂಗ್ರೆಸ್ ಆರೋಪಗಳಿಗೆ ಅದಾನಿ ಗ್ರೂಪ್ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಇನ್ನು ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಈ ಹಿಂದೆ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಆರೋಪಿಸಿತ್ತು. ಸುಪ್ರೀಂ ಕೋರ್ಟ್ ಹಸ್ತಕ್ಷೇಪದ ಬಳಿಕ ಈ ಬಗ್ಗೆ ಸೆಬಿ ತನಿಖೆ ಪ್ರಾರಂಭಿಸಿತ್ತು. ಆದರೆ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೇಳಿ ಸೆಬಿ ಈ ಆರೋಪದಿಂದ ಅದಾನಿ ಗ್ರೂಪ್ ಅನ್ನು ಮುಕ್ತಗೊಳಿಸಿತ್ತು.





