ʼಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಿಂದ ಪ್ರಧಾನಿ ಮೋದಿಯವರು ಬೆಚ್ಚಿ ಬಿದ್ದಿದ್ದಾರೆ. ಒಂದೋ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಓದಿಲ್ಲ ಅಥವಾ ಓದಿದ್ದರೂ ಅವರಿಗದು ಅರ್ಥ ಆಗಿಲ್ಲ. ಈ ಹಿನ್ನೆಲೆಯಲ್ಲಿ ʼಪ್ರಣಾಳಿಕೆಯನ್ನು ವಿವರಿಸಲು ಸಮಯಾವಕಾಶ ಕೊಡಿʼ ಎಂದು ಖರ್ಗೆಯವರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸರಿಯಾದ ಹೆಜ್ಜೆ.
ʼಎಂಟಾಯರ್ ಪೊಲಿಟಿಕಲ್ ಸೈನ್ಸ್ ಓದಿದʼ ಒಬ್ಬ ವ್ಯಕ್ತಿಗೆ ʼಸಮಾಜವಾದ ಎಂದರೆ ಮಂಗಲಸೂತ್ರವೂ ಸೇರಿದಂತೆ ಎಲ್ಲವನ್ನೂ ಕಿತ್ತುಕೊಂಡು ಹೆಚ್ಚು ಮಕ್ಕಳಿರುವವರಿಗೆ ಹಂಚುವುದುʼ ಎಂಬ ಅರ್ಥ ಕೊಟ್ಟರೆ, ಅದು ಓದಿದವನ ಸಮಸ್ಯೆಯೇ ಹೊರತು ಸಮಾಜವಾದದ ಮೂಲ ಸಿದ್ಧಾಂತದ ಸಮಸ್ಯೆ ಅಲ್ಲ. ಬಡವರಿಗಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಬೇರೆಯವರಿಗೆ ಕೊಟ್ಟ ಪ್ರಧಾನಿಗಳು ಮತ್ತು ಮುಸ್ಲಿಮರಿಗಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಬೇರೆಯವರಿಗೆ ಹಂಚಿದ್ದ ಕರ್ನಾಟಕ ಬಿಜೆಪಿಯವರು, ಎಲ್ಲವನ್ನು ಅದೇ ಕಣ್ಣಿಂದ ನೋಡಿದರೆ ಅದು ಅವರ ಅಧ್ಯಯನದ ಕೊರತೆಯನ್ನಷ್ಟೇ ಹೇಳುತ್ತದೆ. ಬಂಡವಾಳಶಾಹಿಗಳು ತಮ್ಮ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳಲು ಇಂಥ ಸುಳ್ಳನ್ನು ಸದಾ ಹೇಳುತ್ತಲೇ ಬಂದಿದ್ದಾರೆ.
ಸಮಾಜವಾದವು, ಒಂದು ಸಾಮಾಜಿಕ ಮತ್ತು ಆರ್ಥಿಕ ಸಿದ್ಧಾಂತವಾಗಿದ್ದು ಅದು ಖಾಸಗಿ ಒಡೆತನಕ್ಕೆ ಆದ್ಯತೆ ನೀಡುವುದಿಲ್ಲ. ಸರಕಾರದ ಆಸ್ತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮಾಜದ ಒಟ್ಟಾರೆ ಅಭ್ಯುದಯವನ್ನು ಗಮನದಲ್ಲಿರಿಸಿಕೊಂಡು ಬಳಸಿಕೊಳ್ಳಬೇಕು ಎಂದು ಸಮಾಜವಾದಿಗಳು ವಾದಿಸುತ್ತಾರೆ. ಹೊಸ ಹೊಸ ಕಾನೂನುಗಳನ್ನು ತಂದು ಸಾರ್ವಜನಿಕ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುವುದಕ್ಕೆ ಸಮಾಜವಾದಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಮಾಜವಾದವು ಇಡೀ ಸಮಾಜದ ಎಲ್ಲಾ ಸದಸ್ಯರ ಅಭಿವೃದ್ಧಿಗಾಗಿ ಸರಕಾರಗಳು ಕೆಲಸ ಮಾಡಬೇಕೆಂದು ಬಯಸುತ್ತದೆ. ಹೀಗೆ ಮಾಡಿದಾಗ ಶ್ರೀಮಂತ ಮತ್ತು ಬಡವರ ನಡುವಣ ವ್ಯತ್ಯಾಸ ಕಡಿಮೆ ಆಗುತ್ತದೆ. ಅದುವೇ ರಾಷ್ಟ್ರದ ಅಭ್ಯದಯ. ಸಮಾಜವಾದವು ರಾಷ್ಟ್ರದ ಸಂಪತ್ತು ಕೆಲವೇ ಕೆಲವು ಜನರ ಪಾಲಾಗುವುದನ್ನು ವಿರೋಧಿಸುತ್ತದೆ. ಈ ವಿಷಯದಲ್ಲಿ ಸರಕಾರವು ರಾಷ್ಟ್ರದ ಸಂಪತ್ತಿನ ಮೇಲೆ ಗರಿಷ್ಠ ನಿಯಂತ್ರಣವನ್ನು ಹೊಂದಿರಬೇಕು.ದುರ್ಬಲ ಸರಕಾರಗಳು ಸಾರ್ವಜನಿಕರ ಮುಂದೆ ಬೊಬ್ಬೆ ಹೊಡೆಯುತ್ತಲೇ ಬಹಳ ಸುಲಭವಾಗಿ ಬಂಡವಾಳಶಾಹಿಗಳ ಮುಂದೆ ನಯವಾಗಿ ಮಂಡಿಯೂರುತ್ತವೆ.
ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಸಮಾಜವಾದವನ್ನು ಎಷ್ಟು ಅನುಸರಿಸಿದೆ ಎಂಬ ಕುರಿತು ಬಹಳ ಚರ್ಚೆ ನಡೆಸುವುದು ಸಾಧ್ಯ. ಜವಾಹರಲಾಲ್ ನೆಹರು ಅವರು ಸಮಾಜವಾದದ ಸಮರ್ಥ ಬೆಂಬಲಿಗರಾಗಿದ್ದರು ಎಂಬುದಕ್ಕೆ ಅವರು ಆ ಕಾಲದಲ್ಲಿ ತಂದ ಪಂಚವಾರ್ಷಿಕ ಯೋಜನೆಗಳೇ ಸಾಕ್ಷಿ. ಡಿಸೆಂಬರ್ 1929 ರಲ್ಲಿ ನಡೆದ ಲಾಹೋರ್ ಕಾಂಗ್ರೆಸ್ನ ಅಧಿವೇಶನದಲ್ಲಿ ನೆಹರೂ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ‘ಸಮಾಜವಾದಿ ಮತ್ತು ಗಣರಾಜ್ಯವಾದಿ…’ ಎಂಬೆರಡು ಪದಗಳನ್ನು ಅವರು ಬಹಳ ಸ್ಪಷ್ಟವಾಗಿ ಜನರ ಮುಂದಿಟ್ಟರು.
ಮಾರ್ಕ್ಸ್ವಾದ ಮತ್ತು ಯೋಜಿತ ಆರ್ಥಿಕ ಅಭಿವೃದ್ಧಿಯಲ್ಲಿ ಅವರಿಗೆ ಆಸಕ್ತಿ ಇದ್ದುದನ್ನು ಅವರ ಬರೆಹಗಳು ತೋರಿಸುತ್ತವೆ. 1933 ರಲ್ಲಿ ನೆಹರು ಅವರು ‘ಎಲ್ಲಿ ಭಾರತ?’ ಎಂಬ ಲೇಖನಗಳ ಸರಣಿಯನ್ನು ಬರೆದರು, ಮತ್ತು ಆ ಲೇಖನಗಳಲ್ಲಿ ಅವರು ಸಮಾಜವಾದದಲ್ಲಿ ಏಕೆ ನಂಬಿಕೆ ಇಡಬೇಕುʼ ಎಂದೂ ವಿವರಿಸಿದ್ದರು.
ʼಸಮಾಜವಾದವು ಅಂತಿಮ ಗುರಿ, ಆದನ್ನು ಸಾಧಿಸಲು ನಾವು ಹೆಜ್ಜೆ ಹಾಕುತ್ತಿದ್ದೇವೆʼ ಎಂದು ಅವರು ಬರೆದಿದ್ದರು. 1936 ರ ಆರ್ಥಿಕ ಬಿಕ್ಕಟಿನ ಸಂದರ್ಭದಲ್ಲಿ ನೆಹರು ಅವರು ಬಂಡವಾಳಶಾಹಿಗಳು ಹೇಗೆ ಜನರ ಬದುಕಿನೊಡನೆ ಚೆಲ್ಲಾಟ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದರು. ನೂರಾರು ಸಮಸ್ಯೆಗಳ ನಡುವೆಯೂ ನೆಹರೂ ಅವರು ತಮ್ಮ ರಾಜಕೀಯ ಧರ್ಮದ ಮೂರು ಮೂಲಭೂತ ತತ್ವಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳಲ್ಲಿ ನಂಬಿಕೆಯನ್ನು ಕಳಕೊಂಡಿರಲಿಲ್ಲ.
ಮೋದಿಯವರು ಸಮಾಜವಾದವನ್ನು ವಿಕೃತಗೊಳಿಸಿ ಹೇಳುತ್ತಿದ್ದಾರೆ. ಅವರಿಗೆ ಅದರ ಬಗ್ಗೆ ಏನೂ ಗೊತ್ತಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.





