- ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಸಂಸದ ಸುರೇಶ್
- ಇಂದಿನ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ ಎಂದು ಬೇಸರ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ವಿಚಾರದಲ್ಲಿ ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ, ಕಾರ್ಯಕರ್ತರ ಸಲಹೆ ಪಡೆದು ಮುಂದುವರೆಯುವೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಹೇಳಿಕೊಂಡಿದ್ದಾರೆ.
ರಾಮನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸ್ಪರ್ಧೆ ಬಗ್ಗೆ ಕಾರ್ಯಕರ್ತರ, ಮುಖಂಡರ ಸಲಹೆ ಪಡೆಯಬೇಕು. ಆದರೆ ಇಂದಿನ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ. ರಾಜಕೀಯ ಸಾಕಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಅಧಿಕಾರದ ದಾಹ ಇರುವವರಿಗೆ ರಾಜಕೀಯ ಬೇಕಾಗುತ್ತದೆ. ಆದರೆ ನನಗಿರುವುದು ಅಭಿವೃದ್ದಿಯ ದಾಹ, ಈ ಕೆಲಸ ಮಾಡುವವರಿಗೆ ನನ್ನ ಬೆಂಬಲವಿದೆ. ಹೀಗಾಗಿ ಬೇರೆಯವರಿಗೆ ಅವಕಾಶ ನೀಡುವುದು ನನ್ನ ಉದ್ದೇಶ ಎಂದವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಮಂಗಳೂರು | ಕೋಮು ದ್ವೇಷಕ್ಕೆ ಬಲಿಯಾದವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ
ಇತ್ತೀಚಿಗಷ್ಟೆ ತಮ್ಮ ಚುನಾವಣಾ ರಾಜಕೀಯದ ಬಗ್ಗೆ ಮಾತನಾಡಿದ್ದ ಸುರೇಶ್, ಹಾಲಿ ರಾಜಕಾರಣದ ಶೈಲಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆಗಲೂ ನನಗೆ ರಾಜಕಾರಣ ಸಾಕೆನಿಸಿಬಿಟ್ಟಿದೆ ಎನ್ನುವ ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದರು. ಇಂದು ಮತ್ತೆ ಅದೇ ವಿಚಾರ ಪ್ರಸ್ತಾಪಿಸುವ ಮೂಲಕ ಅವರ ರಾಜಕೀಯ ನಿವೃತ್ತಿ ಪ್ರಶ್ನೆಯನ್ನು ಪುನರ್ ಉಚ್ಚರಿಸಿದ್ದಾರೆ.




