ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಿನ್ನೆ ಸಂಜೆ (ಸೆ.27) ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿ ಸುಮಾರು ಒಂದೂವರೆ ತಾಸು ವಿಚಾರಣೆ ಎದುರಿಸಿದ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೊರ ಬರುತ್ತಿದ್ದಂತೆ, “ನನಗೆ ಯಾವುದೇ ನೋಟಿಸ್ ಬಂದಿರಲಿಲ್ಲ, ನಾನೇ ಪೊಲೀಸರ ಮುಂದೆ ಹಾಜರಾದೆ” ಎಂದು ಹೇಳಿದ್ದರು. ಇಂದು ಜೆ ಪಿ ಭವನದಲ್ಲಿ ಸುಮಾರು ಒಂದೂವರೆ ಗಂಟೆ ಪ್ರೆಸ್ಮೀಟ್ ಮಾಡಿದ ಅವರು ನಿನ್ನೆಯ ಸುಳ್ಳನ್ನೇ ಮತ್ತೆ ಪ್ರಸ್ತಾಪಿಸುತ್ತಾ, ನೋಟಿಸ್ ಬಂದಿತ್ತು ಎಂಬ ಸತ್ಯ ಹೇಳಿ ಮುಜುಗರಕ್ಕೆ ಒಳಗಾದರು.
“ಲೋಕಾಯುಕ್ತದಲ್ಲಿ ನನ್ನನ್ನು ವಿಚಾರಣೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಯಾವ ವಿಚಾರಣೆಯೂ ಇಲ್ಲ. ನಾನು ಕೇವಲ ಹತ್ತು ನಿಮಿಷ ಮಾತ್ರ ಅಲ್ಲಿದ್ದೆ” ಅಂದ್ರು. ಆದರೆ ನಿನ್ನೆ ಎಲ್ಲಾ ಮುಖ್ಯವಾಹಿನಿಯ ಮಾಧ್ಯಮಗಳು ಲೋಕಾಯುಕ್ತ ಕಚೇರಿಯ ಮುಂದೆ ಕುಮಾರಸ್ವಾಮಿ ಅವರು ಒಳಗೆ ಹೋಗಿರುವುದು ಮತ್ತು ಹೊರ ಬಂದಿರುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಅವರು ಒಳಹೋದ ಮತ್ತು ಹೊರ ಬಂದ ಪೋಟೋಗಳು ಸಮಯ ಎಲ್ಲವೂ ಲಭ್ಯವಿದ್ದರೂ ಕುಮಾರಸ್ವಾಮಿ ಅವರು ಇಂದು ಮಾಧ್ಯಮಗಳ ಕ್ಯಾಮೆರಾ ಮುಂದೆಯೇ, ಅದೂ ಪ್ರೆಸ್ಮೀಟ್ನಲ್ಲೇ ಸುಳ್ಳು ಹೇಳಿದರು. ಅಷ್ಟೇ ಅಲ್ಲ, ನನಗೆ ನೋಟಿಸ್ ಬಂದಿರಲಿಲ್ಲ ಎಂದು ಹೇಳಿದ ಕೆಲ ನಿಮಿಷಗಳಲ್ಲಿಯೇ, “ಯಾಕಪ್ಪ ನನಗೆ ನೋಟಿಸ್ ಕೊಟ್ಟೆ ಎಂದು ನಾನೇ ಅಧಿಕಾರಿಯನ್ನು ಕೇಳಿದೆ” ಎಂದು ಹೇಳಿ ಪೇಚಿಗೆ ಸಿಲುಕಿದರು. “ನೋಟಿಸ್ ಕೊಟ್ಟಿಲ್ಲ ಅಂತ ನಿನ್ನೆ ಹೇಳಿದ್ರಲ್ಲ ಸರ್” ಎಂದು ಪತ್ರಕರ್ತರು ಪ್ರಶ್ನಿಸಿದಾಗ “ನೋಟಿಸನ್ನು ಸೆ.21 ನೇ ತಾರೀಕಿಗೆ ಸಿದ್ಧಮಾಡಿ ಇಟ್ಟುಕೊಂಡಿದ್ದರು. ನನಗೆ ನೋಟಿಸ್ ಬಾರದಿದ್ದರೂ, ನನ್ನ ಬಗ್ಗೆ ಅನುಮಾನ ಬರಬಾರದು ಎಂಬ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಗೆ ಹೋಗಿದ್ದೆ” ಎಂದು ತೇಪೆ ಹಾಕುವ ಕೆಲಸ ಮಾಡಿದ್ರು.
ಅಷ್ಟೇ ಅಲ್ಲ, ಅಧಿಕಾರಿಗಳು ಇಪ್ಪತ್ತು ಪ್ರಶ್ನೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದರು. ಅವರ ಮೇಲಿನ ಒತ್ತಡ ನನಗೆ ಗೊತ್ತು. ಹಾಗಾಗಿ ಸಹಿ ಹಾಕಿ ಬಂದೆ ಎಂದು ಹೇಳಿದರು. ಇಪ್ಪತ್ತು ಪ್ರಶ್ನೆಗಳಿಗೆ ಉತ್ತರಿಸಿ ಪ್ರೊಸೀಜರ್ ಪ್ರಕಾರ ಸಹಿ ಹಾಕಿ ಬಂದಿದ್ದಾರೆ. ಆದರೆ ನಾನು ಅಧಿಕಾರಿಗಳಿಗೆ ತೊಂದರೆ ಆಗಬಾರದು ಎಂದು ಸಹಿ ಹಾಕಿ ಬಂದೆ ಎಂಬಂತೆ ಕುಮಾರಸ್ವಾಮಿ ಹೇಳಿಕೊಂಡರು.
“ಪ್ರಚಾರಕ್ಕೆ ಗಂನೇನಹಳ್ಳಿ ಪ್ರಕರಣ ಬಳಕೆ ಮಾಡಲಾಗ್ತಿದೆ. ರಾಜೀನಾಮೆಗೆ ಆಗ್ರಹ ಮಾಡ್ತಿದ್ದಾರೆ. ಏಕೆ ಕೊಡಬೇಕು ರಾಜೀನಾಮೆ? ನಿರ್ಮಲಾ ಸೀತಾರಾಮನ್ ವಿರುದ್ದ ಚುನಾವಣಾ ಬಾಂಡ್ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಆದರೆ ವೈಯಕ್ತಿಕವಾಗಿ ಚುನಾವಣಾ ಬಾಂಡ್ ನಿರ್ಮಲಾ ಸೀತಾರಾಮನ್ ಪಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಪ್ರಕರಣ ಹಾಗೂ ಗಂಗೇನಹಳ್ಳಿ ಪ್ರಕರಣಕ್ಕೆ ವ್ಯತ್ಯಾಸ ಇದೆ. ಕಡತ ಬಂದಾಗ ಸಹಿ ಹಾಕಿದ್ದೇನೆ. ಆದರೆ ನಾನು ಡಿನೋಟಿಫಿಕೇಷನ್ ಆದೇಶ ಮಾಡಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ಸಾಲು ಸಾಲು ದಾಖಲೆ ಇದೆ” ಎಂದರು.
“ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಹೋಗಲಿ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನನ್ನ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಏಕೆ ಸಿಎಂ ಮಾಡಿದ್ದರು? ಎಂದು ಪ್ರಶ್ನಿಸಿದರು. ದೇವೇಗೌಡರು ಶಿವನನ್ನು ನಂಬಿದ್ದಾರೆ. ಹಿರಿ ವಯಸ್ಸಿನ ದೇವೇಗೌಡರ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. ಅದರ ಶಾಪ ತಟ್ಟದೇ ಇರಲ್ಲ. ಈಗ ಅದು ಕಾಣಲು ಶುರುವಾಗಿದೆ” ಎಂದರು.
ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಅವರ ಪಕ್ಷದವರೇ ಹೇಳ್ತಾರೆ. 40% ಗೂ ಅಧಿಕ ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾನು ಹೇಳಿದ್ರೆ ಹಲವು ಮಂತ್ರಿಗಳು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಾರು ಎಂದು ಬಹಿರಂಗಪಡಿಸಿ ಎಂದು ಪತ್ರಕರ್ತರು ಒತ್ತಾಯಿಸಿದಾಗ ಸಮಯ ಬಂದಾಗ ಹೇಳುತ್ತೇನೆ ಎಂದು ಜಾರಿಕೊಂಡರು.
ಐಜಿಪಿ ಚಂದ್ರಶೇಖರ್ ಯಾರು?
ರಾಜಭವನಕ್ಕೆ ಕಳುಹಿಸಿದ್ದ ಪ್ರಾಸಿಕ್ಯೂಷನ್ ಪ್ರಸ್ತಾಪದ ದಾಖಲೆ ಸೋರಿಕೆಯಾದ ಬಗ್ಗೆ ತನಿಖೆಗೆ ಅಗಸ್ಟ್ 20 ರಂದು ರಾಜ್ಯಪಾಲರು ಪತ್ರ ಬರೆದಿದ್ದಾರೆ. ಆದರೆ ಇದರ ಬಗ್ಗೆ ತನಿಖೆ ಮಾಡಲು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅನುಮತಿ ಕೋರಿದ್ದಾರೆ. ತನಿಖೆ ಮಾಡಲು ಚಂದ್ರಶೇಖರ್ ಯಾರು? ರಾಜ್ಯಪಾಲರ ಕಚೇರಿಯಿಂದ ದಾಖಲೆ ಸೋರಿಕೆಯಾಗಿದೆಯಾ? ಒಂದು ಖಾಸಗಿ ವಾಹಿನಿಗೆ ಮಾತ್ರ ದಾಖಲೆ ಸಿಕ್ಕಿದ್ದು ಹೇಗೆ? ರಾಜ್ಯಪಾಲರ ಕಚೇರಿ ತನಿಖೆಗೆ ಮುಂದಾಗಿದ್ದು ಯಾಕೆ? ಎಡಿಜಿಪಿ ಚಂದ್ರಶೇಖರ್ ಹಿನ್ನೆಲೆ ಏನು? ಹೀಗೆ ಸಾಲು ಸಾಲು ಪ್ರಶ್ನೆ ಕೇಳಿದರು.
ಚಂದ್ರಶೇಖರ್ ಹಿಮಾಚಲ ಪ್ರದೇಶದ ಕೇಡರ್ ಅಧಿಕಾರಿ. 1998ರಲ್ಲಿ ಆಯ್ಕೆಯಾದವರು. 2008ರಲ್ಲಿ ಕರ್ನಾಟಕಕ್ಕೆ ಬಂದವರು. ನಂತರ ವಾಪಸ್ ಹೋಗಿಯೇ ಇಲ್ಲ. ಐದು ವರ್ಷಗಳ ಕಾಲ ನಿಯೋಜನೆಯಾಗಿ ಬಂದವರು, ಹಿಮಾಚಲ ಪ್ರದೇಶದ ಹವಾಮಾನ ಹೊಂದಲ್ಲ ಎಂದು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ಸರ್ಟಿಫಿಕೇಟ್ ಮಾಡಿಸಿಕೊಂಡು ಇಲ್ಲೇ ಸೆಟಲ್ ಆಗಿದ್ದಾರೆ. ಸರ್ಕಾರ ಹಗಲು ದರೋಡೆ ಮಾಡಲು ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡಿದೆ ಎಂದು ಆರೋಪಿಸಿದರು.




