ಉತ್ತರಾಖಂಡ ಸರ್ಕಾರವು ಅಧಿಕೃತವಾಗಿ ಮದರಸಾ ಮಂಡಳಿಯನ್ನು ರದ್ದುಗೊಳಿಸಿದೆ. ಮದರಸಾ ಶಿಕ್ಷಣ ಮಂಡಳಿ ಕಾಯ್ದೆ 2016 ಅನ್ನು ರದ್ದುಗೊಳಿಸಲಾಗಿದ್ದು, ಜುಲೈ 31ರಿಂದ ಈ ಮಂಡಳಿಯು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳಲಿದೆ. ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇನ್ನು ಮದರಸಾ ಮಂಡಳಿಯ ಬದಲಾಗಿ ‘ಉತ್ತರಾಖಂಡ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ (USMEA) ವನ್ನು ರಚಿಸಲಾಗಿದ್ದು ಜುಲೈ ನಂತರ ಅದು ಕಾರ್ಯನಿರ್ವಹಿಸಲಿದೆ. ಮುಸ್ಲಿಂ ಮಾತ್ರವಲ್ಲದೆ ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಶಿಕ್ಷಣ ಸಂಸ್ಥೆಗಳನ್ನೂ ಈ ಪ್ರಾಧಿಕಾರ ಒಳಗೊಳ್ಳುತ್ತದೆ.
ಇದನ್ನು ಓದಿದ್ದೀರಾ? ತೆಲಂಗಾಣ | ಮದರಸಾ ಮೇಲೆ ದಾಳಿ; ನಾಲ್ವರಿಗೆ ಗಾಯ
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಳಿಯನ್ನು ವಿಸರ್ಜಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ವಿಶೇಷ ಕಾರ್ಯದರ್ಶಿ ಡಾ. ಪರಾಗ್ ಮಧುಕರ್ ಧಾಕಟೆ, “ಈ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ಈಗ ನೇರವಾಗಿ ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಯು ನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.
ಹೊಸ ಪ್ರಾಧಿಕಾರದಲ್ಲಿ ಒಟ್ಟು 12 ಸದಸ್ಯರು ಇರಲಿದ್ದು, ಹೊಸ ಪ್ರಾಧಿಕಾರದ ಅಧ್ಯಕ್ಷರಾಗಿ ನಿವೃತ್ತ ಪ್ರೊಫೆಸರ್ ಸುರ್ಜಿತ್ ಸಿಂಗ್ ಗಾಂಧಿ ಅವರನ್ನು ನೇಮಿಸಲಾಗಿದೆ. ಪ್ರಾಧಿಕಾರವು ಪ್ರೊಫೆಸರ್ ರಾಕೇಶ್ ಜೈನ್, ಪ್ರೊಫೆಸರ್ ಗುರ್ಮೀತ್ ಸಿಂಗ್, ಡಾ. ಸೈಯದ್ ಅಲಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಚಂದ್ರಶೇಖರ್ ಭಟ್ ಈ ತಜ್ಞರ ಸಮಿತಿಯಲ್ಲಿದ್ದಾರೆ. ಹೊಸ ಆದೇಶದ ಅಡಿಯಲ್ಲಿ, ಈ ಸಂಸ್ಥೆಗಳ ವಿದ್ಯಾರ್ಥಿಗಳು ಇನ್ನು ಮುಂದೆ ಧಾರ್ಮಿಕ ಅಧ್ಯಯನ ಮಾತ್ರ ಮಾಡುವಂತಿಲ್ಲ.
ವಿಪಕ್ಷಗಳ ತೀವ್ರ ಆಕ್ರೋಶ
ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷವು ಇದನ್ನು “ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರನ್ನು ಗುರಿಪಡಿಸುವ ಕ್ರಮ” ಎಂದು ಟೀಕಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ವಿಪಕ್ಷಗಳು, ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮುಂದಾಗಿದೆ.
ಸಂವಿಧಾನದ ವಿಧಿ 30(1) ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಎಲ್ಲಾ ಅಲ್ಪಸಂಖ್ಯಾತರು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಇದು ದು ಭಾರತೀಯ ಸಂವಿಧಾನ ನೀಡಿದ ಮೂಲಭೂತ ಹಕ್ಕು. ಆದರೆ ಈ ಹಕ್ಕನ್ನು ಈಗ ಉತ್ತರಾಖಂಡ ಸರ್ಕಾರ ಕಸಿದುಕೊಳ್ಳುತ್ತಿದೆ. ಅಲ್ಪಸಂಖ್ಯಾತರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಸಾಂವಿಧಾನಿಕ ಹಕ್ಕನ್ನು ಈ ನಿರ್ಧಾರವು ಕಸಿದುಕೊಳ್ಳುತ್ತದೆ ಎಂದು ವಿರೋಧ ಪಕ್ಷದ ನಾಯಕರು ಮತ್ತು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ.
ಹಾಗೆಯೇ ಈ ಹೊಸ ವ್ಯವಸ್ಥೆಯಿಂದಾಗಿ ಮದರಸಾಗಳಲ್ಲಿ ನೀಡಲಾಗುವ ಸಾಂಪ್ರದಾಯಿಕ ಧಾರ್ಮಿಕ ಶಿಕ್ಷಣಕ್ಕೆ ಅಡ್ಡಿಯಾಗಬಹುದು ಮತ್ತು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತಿಗೆ ಧಕ್ಕೆಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.





