ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರವು ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ 5% ಮೀಸಲಾತಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ರದ್ದತಿಯನ್ನು ಘೋಷಿಸಿ ಸರ್ಕಾರಿ ಅಧಿಸೂಚನೆ ಹೊರಡಿಸಿದೆ.
2014ರಲ್ಲಿ ಕಾಂಗ್ರೆಸ್-ಎನ್ಸಿಪಿ ಮೈತ್ರಿ ಸರ್ಕಾರವು ಅಲ್ಪಸಂಖ್ಯಾತ ಸಮುದಾಯಕ್ಕೆ 5% ಮತ್ತು ಮರಾಠ ಸಮುದಾಯಕ್ಕೆ 21% ಮೀಸಲಾತಿಯನ್ನು ಘೋಷಿಸಿತ್ತು. ಆ ವರ್ಷದ ನಡೆದಿದ್ದ ಚುನಾವಣೆಗೂ ಮುನ್ನ ಸುಗ್ರೀವಾಜ್ಞೆಯ ಮೂಲಕ ಪರಿಚಯಿಸಲಾಗಿತ್ತು. ಆದರೆ, ಆ ಚುನಾವಣೆಯಲ್ಲಿ ಕಾಂಗ್ರೆಸ್-ಎನ್ಸಿಪಿ ಅಧಿಕಾರ ಕಳೆದುಕೊಂಡಿದ್ದರಿಂದ, ಅದನ್ನು ಅಧಿಕೃತವಾಗಿ ಸದನದಲ್ಲಿ ಅನುಮೋದಿಸಲಾಗಿರಲಿಲ್ಲ. ಅಲ್ಲದೆ, ಆಗ ಅಧಿಕಾರಕ್ಕೆ ಬಂದ ಬಿಜೆಪಿ-ಶಿವಸೇನಾ ಸರ್ಕಾರವು ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿತ್ತು.
ಆದಾಗ್ಯೂ, ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್ನ 50% ಕೋಟಾ ಮಿತಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅಂದಿನ ಚುನಾವಣೆಗೂ ಮುನ್ನವೇ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಸುಗ್ರೀವಾಜ್ಞೆಗೆ ಮಧ್ಯಂತರ ತಡೆ ನೀಡಿತ್ತು.
ಇದೀಗ, ಬಿಜೆಪಿ+ಶಿವಸೇನಾ (ಶಿಂಧೆ ಬಣ)+ಎನ್ಸಿಪಿ (ಅಜಿತ್ ಬಣ)ದ ಮಹಾಯುತಿ ಸರ್ಕಾರವು ಮಂಗಳವಾರ ಸಂಜೆ ಅಧಿಸೂಚನೆ ಹೊರಡಿಸಿದೆ. ಇದು ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿದೆ.
ಸರ್ಕಾರದ ಕ್ರಮವನ್ನು ವಿಪಕ್ಷಗಳು ಟೀಕಿಸಿದ್ದು, “ಬಿಜೆಪಿಯ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದರೆ, ಒಂದು ಸಮುದಾಯವನ್ನು ಅವಕಾಶ ವಂಚಿತರನ್ನಾಗಿ ಮಾಡುವುದೇ” ಎಂದು ಪ್ರಶ್ನಿಸಿವೆ.
“ನಾವು ಸರ್ಕಾರದ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ 2014ರಲ್ಲಿ ಘೋಷಿಸಲಾದ 5% ಮೀಸಲಾತಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಸರ್ಕಾರವು ಹಳೆಯ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ. ಹೈಕೋರ್ಟ್ನ ಮಧ್ಯಂತರ ತಡೆಯಾಜ್ಞೆ ಮತ್ತು ಸುಗ್ರೀವಾಜ್ಞೆಯು ಹಳೆಯದಾಗಿರುವುದನ್ನು ಕಾರಣಗಳಾಗಿ ಉಲ್ಲೇಖಿಸಿ, ಸರ್ಕಾರವು ಮುಸ್ಲಿಂ ಸಮುದಾಯದ ಹಕ್ಕುಗಳನ್ನು ಕಸಿದುಕೊಂಡಿದೆ” ಎಂದು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಾಂಗ್ಲಾದೇಶ | ದೇಶದ ಉದಯವನ್ನೇ ವಿರೋಧಿಸಿದ್ದ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ
“ಒಂದೆಡೆ, ಅವರು (ಬಿಜೆಪಿ) ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಬಗ್ಗೆ ಮಾತನಾಡುತ್ತಾರೆ. ಮತ್ತೊಂದೆಡೆ, ಅವರು ಮೀಸಲಾತಿಗೆ ಅಗತ್ಯವಾದ ದಾಖಲೆಗಳನ್ನು ಪಡೆಯುವ ಮಾರ್ಗಗಳನ್ನು ಮುಚ್ಚುತ್ತಾರೆ. ಇದು ಬೂಟಾಟಿಕೆ ಅಲ್ಲವೇ?” ಎಂದಿದ್ದಾರೆ.
“ಸಮಾಜದ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಬದಲು, ಈ ಸರ್ಕಾರ ಅವರನ್ನು ಮತ್ತೆ ಕತ್ತಲೆಗೆ ತಳ್ಳಿದೆ” ಎಂದು ಆರೋಪಿಸಿದ್ದಾರೆ.
AIMIMನ ಮಹಾರಾಷ್ಟ್ರ ಮುಖ್ಯಸ್ಥ ಇಮ್ತಿಯಾಜ್ ಜಲೀಲ್ ಅವರು ಸರ್ಕಾರದ ನಿರ್ಧಾರವು ಮುಸ್ಲಿಮರಿಗೆ ‘ರಂಜಾನ್ ಉಡುಗೊರೆ’ ಎಂದು ವ್ಯಂಗ್ಯವಾಡಿದ್ದಾರೆ. “ಆದಾಗ್ಯೂ, ನಮ್ಮ ಹುಡುಗರು ಮತ್ತು ಹುಡುಗಿಯರು ಶಾಲೆ ಬಿಡಬಾರದು ಎಂದು ನಾವು ಕೇಳುತ್ತೇವೆ. ಭಾರತ ಅಧ್ಯಯನ ಮಾಡಿದರೆ ಭಾರತ ಪ್ರಗತಿ ಹೊಂದುತ್ತದೆ” ಎಂದು ಅವರು ಹೇಳಿದ್ದಾರೆ.




