2020-21ರ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ರೈತ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕಾಗಿ ನಟಿ- ಬಿಜೆಪಿ ಸಂಸದೆ ಕಂಗನಾ ರಣಾವತ್ ಕ್ಷಮೆಯಾಚಿಸಿದ್ದಾರೆ. ಆದರೆ ಪಂಜಾಬ್ನ ಬಹಿಂಡಾ ಜಿಲ್ಲೆಯ ಬಹದ್ದೂರ್ಗಢ್ ಜಾಂಡಿಯನ್ ಗ್ರಾಮದ ನಿವಾಸಿ 81 ವರ್ಷದ ಮಹಿಂದರ್ ಕೌರ್ ಸಂಸದೆಯನ್ನು ಕ್ಷಮಿಸಲ್ಲ ಎಂದು ಹೇಳಿದ್ದಾರೆ.
2020ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಸದ್ಯ ರದ್ದಾಗಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ದೀರ್ಘ ಕಾಲ ಪ್ರತಿಭಟನೆ ನಡೆಸಿದ್ದರು. ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಾಗಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಪ್ರತಿಭಟನೆಯಲ್ಲಿದ್ದ ವೃದ್ದ ಮಹಿಳೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಕಂಗನಾ ರಣಾವತ್ “ಇಂತಹ ಮಹಿಳೆಯರು ನೂರು ರೂಪಾಯಿ ನೀಡಿದರೆ ಲಭ್ಯವಿರುತ್ತಾರೆ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ರದ್ದಾದ ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರಬೇಕು: ಕಂಗನಾ ರಣಾವತ್
ಕಂಗನಾ ರಣಾವತ್ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಫೋಟೋದಲ್ಲಿದ್ದ ವೃದ್ಧ ರೈತ ಮಹಿಳೆ ಮಹಿಂದರ್ ಕೌರ್ ಕಂಗನಾ ವಿರುದ್ದ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಈ ಪ್ರಕರಣದಲ್ಲಿ ರಣಾವತ್ಗೆ ಜಾಮೀನು ಮಂಜೂರಾಗಿದೆ. ಹಾಗೆಯೇ ನಟಿ ಕ್ಷಮೆ ಕೇಳಿದ್ದಾರೆ. ಆದರೆ ರೈತ ಮಹಿಳೆ ಕ್ಷಮಿಸಲು ನಿರಾಕರಿಸಿದ್ದಾರೆ.
ನ್ಯಾಯಾಲಯದಲ್ಲಿ ರಣಾವತ್ ಕ್ಷಮೆಯಾಚಿಸಿದ್ದು, “ನನ್ನ ಟ್ವೀಟ್ ಅನ್ನು ತಪ್ಪಾಗಿ ಗ್ರಹಿಸಲಾಗಿದೆ. ಟ್ವೀಟ್ನಲ್ಲಿ ನಾನು ವೃದ್ದ ಮಹಿಳೆಯನ್ನು ಗುರಿಯಾಗಿಸುವ ಉದ್ದೇಶ ಹೊಂದಿರಲಿಲ್ಲ. ನಾನು ಪ್ರತಿಯೊಬ್ಬ ತಾಯಿಯನ್ನೂ ಗೌರವಿಸುತ್ತೇನೆ. ಪಂಜಾಬ್ ಆಗಿರಲಿ ಅಥವಾ ಹಿಮಾಚಲದವರಾಗಿರಲಿ, ನಾನು ಎಲ್ಲಾ ಮಾತೆಯರನ್ನೂ ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.
ಆದರೆ ವೃದ್ಧ ಮಹಿಳೆ ಕೌರ್, “ನಟಿ ನನ್ನನ್ನು ಎಂದಿಗೂ ಭೇಟಿಯಾಗಿಲ್ಲ. ನಾನು ಅವರನ್ನು ಕ್ಷಮಿಸಲ್ಲ. ಅವರು ದೊಡ್ಡ ನಟಿ, ರಾಜಕೀಯ ನಾಯಕಿ. ಆದರೆ ನಾನು ಸಣ್ಣ ರೈತ ಮಹಿಳೆ. ಆದರೂ ಅವರು ಈ ವಯಸ್ಸಿನಲ್ಲಿ ನನ್ನನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ನಿಜವಲ್ಲ” ಎಂದು ಕೌರ್ ಹೇಳಿರುವುದಾಗಿ ದಿ ಟ್ರಿಬ್ಯೂನ್ ವರದಿ ಮಾಡಿದೆ.

ಇನ್ನು ಕೌರ್ ಆರೋಗ್ಯ ಸದ್ಯ ಹದಗೆಟ್ಟಿದೆ. ಆದ್ದರಿಂದ ಕೌರ್ ಕೋರ್ಟ್ಗೆ ಹಾಜರಾಗಿಲ್ಲ. ವೃದ್ಧ ಮಹಿಳೆ ಪರವಾಗಿ ಅವರ ಪತಿ ಲಾಭ್ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿದ್ದು ವಾದ ಮಂಡಿಸಿದ್ದಾರೆ.
ರಣಾವತ್ ಕಪಾಳಕ್ಕೆ ಬಾರಿಸಿದ್ದ ಸಿಐಎಸ್ಎಫ್ ಸಿಬ್ಬಂದಿ
2024ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಮಹಿಳಾ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಕಪಾಳಕ್ಕೆ ಬಾರಿಸಿದ್ದರು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಎರಡು ದಿನಗಳ ನಂತರ ರಣಾವತ್ ದೆಹಲಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.
ಸದ್ಯ ರದ್ದುಗೊಂಡಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಪ್ರತಿಭಟನೆಗಳ ಕುರಿತು ರಣಾವತ್ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡು ಕಂಗನಾ ಕೆನ್ನೆಗೆ ಬಾರಿಸಿರುವುದಾಗಿ ಕಾನ್ಸ್ಟೆಬಲ್ ಹೇಳಿದ್ದರು. “ನನ್ನ ತಾಯಿ ಕೂಡಾ ಅಲ್ಲಿದ್ದರು. ಕಂಗನಾ ಈ ಹೇಳಿಕೆ ನೀಡಿದಾಗ ನನ್ನ ತಾಯಿ ಪ್ರತಿಭಟನೆ ನಡೆಸುತ್ತಿದ್ದರು” ಎಂದು ಹೇಳಿದ್ದರು. ಅದಾದ ಬಳಿಕ ಸಿಐಎಸ್ಎಫ್ ಸಿಬ್ಬಂದಿ ವರ್ಗಾವಣೆಯಾಗಿತ್ತು. ಆದರೆ ಈ ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಂಗನಾಗೆ ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ರೀತಿ ಸಂಸದೆಯೊಬ್ಬರಿಗೆ ಹೊಡೆಯುವುದು ಸರಿಯಲ್ಲ ಎಂದಿದ್ದಾರೆ.





