ಮಾದಿಗ ಸಮುದಾಯಕ್ಕೆ ನಾಯಕರಾದವರು ನ್ಯಾಯಬದ್ಧವಾಗಿ, ಸಂವಿಧಾನ ಬದ್ಧವಾಗಿ, ಸೈದ್ಧಾಂತಿಕ ಸ್ಪಷ್ಟತೆಯಿಂದ ಇರಬೇಕು: ಕೇಶವಮೂರ್ತಿ
“ಅವಿಭಜಿತ ಆಂಧ್ರದಲ್ಲಿ ಒಳಮೀಸಲಾತಿ ಹೋರಾಟವನ್ನು ಮುನ್ನಡೆಸಿದ್ದ ಮಂದಕೃಷ್ಣ ಮಾದಿಗ ಅವರು ಈಗ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದು, ಒಂದು ಪಕ್ಷಕ್ಕೆ (ಬಿಜೆಪಿಗೆ) ಸಮುದಾಯವನ್ನು ಅಡಮಾನ ಇಡಲು ಹೊರಟಿದ್ದಾರೆ” ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎ.ಕೇಶವಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ವಿಶ್ವ ಆದಿ ಜಾಂಬವ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ಕ್ರಿಯಾ ಸಮಿತಿ ಸಂಘಟನೆಗಳು ಒಟ್ಟಿಗೆ ಸೇರಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಂಧ್ರದಲ್ಲಿ ದೊಡ್ಡ ಸಮಾವೇಶವಾದಾಗ ಮಂದಕೃಷ್ಣ ಅವರು ವೆಂಕಯ್ಯ ನಾಯ್ಡು ಅವರ ಕಾಲಿಗೆ ಬಿದ್ದಿದ್ದರು. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಮುಂದೆ ಕಣ್ಣೀರು ಹಾಕಿದರು. ನಮಗೆಲ್ಲ ಅವಮಾನವಾಯಿತು. ಮಾದಿಗ ಸಮುದಾಯಕ್ಕೆ ನಾಯಕರಾದವರು ನ್ಯಾಯಬದ್ಧವಾಗಿ, ಸಂವಿಧಾನ ಬದ್ಧವಾಗಿ, ಸೈದ್ಧಾಂತಿಕ ಸ್ಪಷ್ಟತೆಯಿಂದ ಇರಬೇಕು. ಹೋರಾಟದ ಮೂಲಕವೇ ಉತ್ತರ ಕಂಡುಕೊಳ್ಳಬೇಕಿತ್ತೇ ಹೊರತು, ಓಲೈಕೆಯ ರಾಜಕಾರಣ ಮಾಡಬಾರದಿತ್ತು. ಇಂತಹ ವರ್ತನೆಗಳ ಮೂಲಕ ನಮ್ಮ ಸಮುದಾಯದ ಸ್ವಾಭಿಮಾನ ಮತ್ತು ಆತ್ಮಗೌರವವನ್ನು ಹರಣ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ವಿರೋಧಿ ಬಿಜೆಪಿಗೆ ನಮ್ಮ ಘನತೆಯನ್ನು ಅಡ ಇಡಲು ಮಂದಕೃಷ್ಣ ಮಾದಿಗ ಹೊರಟಿದ್ದಾರೆ. ರಾಜ್ಯದಲ್ಲಿಯೂ ಪ್ರಚಾರ ಮಾಡುತ್ತಾ ಬಿಜೆಪಿಗೆ ಮತ ಹಾಕಿ ಎಂದು ಹೇಳಿದ್ದಾರೆ. ಮೋದಿಯವರು ಮತ್ತೆ ಪ್ರಧಾನಿಯಾದರೆ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡುತ್ತಾರೆಂದು ಅವರು ಸುಳ್ಳು ಹೇಳುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮೋದಿ ಏನನ್ನೂ ಮಾಡಲಿಲ್ಲ. ಹೀಗಾಗಿ ಮಂದಕೃಷ್ಣ ಮಾದಿಗ ಅವರು ನೀಡುತ್ತಿರುವ ಹೇಳಿಕೆಗಳನ್ನು ನಾವು ಸಾರಾಸಗಟಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟವನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ. ಕಳೆದ ಹತ್ತುಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿದ್ದರೂ ಒಳ ಮೀಸಲಾತಿ ಜಾರಿಗೆ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ಸಮುದಾಯವು ಬಿಜೆಪಿಗೆ ಮತ ಹಾಕಬಾರದು ಎಂದು ಮನವಿ ಮಾಡಿದರು.
2008ರಲ್ಲಿ ಉಷಾ ಮೆಹ್ರಾ ಸಮಿತಿ ವರದಿ ಕೊಟ್ಟಿತ್ತು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ಸಂವಿಧಾನಕ್ಕೆ 341 (3) ಖಂಡವನ್ನು ಸೇರಿಸಲು ತಿದ್ದುಪಡಿ ತರಬೇಕೆಂದು ಸ್ಪಷ್ಟವಾಗಿ ಹೇಳಿತು. ಪಾರ್ಲಿಮೆಂಟ್ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಮೋದಿ ಸರ್ಕಾರ ಇದರ ಬಗ್ಗೆ ಏನನ್ನೂ ಕ್ರಮ ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟು, “ಸಂವಿಧಾನಕ್ಕೆ ತಿದ್ದುಪಡಿ ತಂದರೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ತರುತ್ತೇವೆ” ಎಂದು ಒತ್ತಾಯಿಸಿದೆ. ಹೀಗಾಗಿ ಷರತ್ತುಗಳ ಆಧಾರದಲ್ಲಿ ಮಾದಿಗ ಸಮುದಾಯವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮೂವತ್ತು ವರ್ಷಗಳ ಕಾಲ ಒಳಮೀಸಲಾತಿ ಹೋರಾಟವನ್ನು ಮಾಡಿದ್ದೇವೆ. ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಸಂವಿಧಾನ ಬದಲಾವಣೆ ಮಾಡುವಂತಹ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಇದು ನಮಗೆ ನೋವುಂಟು ಮಾಡಿರುವ ಸಂಗತಿ. ಎಸ್ಸಿ, ಎಸ್ಟಿ, ಒಬಿಸಿಗಳು ಬೀದಿಗೆ ಬರುವ ಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಪ್ರಚಾರ ಮಾಧ್ಯಮಗಳ ಮೂಲಕ ಸುಳ್ಳು ಜಾಹೀರಾತುಗಳನ್ನು ನೀಡಿ ಸಮುದಾಯದ ದಿಕ್ಕು ತಪ್ಪಿಸಲಾಗುತ್ತಿದೆ. ವೀರಶೈವರಾಗಲೀ, ಲಿಂಗಾಯತರಾಗಲೀ, ಒಕ್ಕಲಿಗರಾಗಲೀ, ಕುರುಬರಾಗಲೀ ಯಾವುದೇ ಸಮುದಾಯ ಪಕ್ಷಾತೀತವಾಗಿ ಸಂಘಟಿತವಾಗಿವೆ. ಆದರೆ ನಮ್ಮ ಸಮುದಾಯದೊಳಗೆ ಮನುವಾದಿಗಳು ಬಂದು ’ಮಾದಿಗ ಮುನ್ನಡೆ’ಯ ಮೂಲಕ ವಂಚಿಸುತ್ತಿದ್ದಾರೆ ಎಂದು ಎಚ್ಚರಿಸಿದರು.
ನರೇಂದ್ರ ಮೋದಿಯವರು ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ವಿಚಾರವಾಗಿ ಮಾತನಾಡಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಕ್ರಿಯಿಸಿ, ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ತನ್ನಿ, ನಾವು ಅದರ ಪರ ಇದ್ದೇವೆ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಜೊತೆಗೆ ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೂ ರಾಜ್ಯ ಸರ್ಕಾರ ಪತ್ರ ಬರೆದಿದೆ. ಎಲ್ಲವನ್ನೂ ಮೋದಿ ನಿರ್ಲಕ್ಷ್ಯ ಮಾಡಿದರು. ಹೀಗಾಗಿ ಬಿಜೆಪಿಯನ್ನು ಸೋಲಿಸಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
“ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿರುವ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಉತ್ತರ ಪ್ರದೇಶದಲ್ಲಿ ಹಾಲಿ ಸಂಸದನೊಬ್ಬ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾನೆ. ಬಿಜೆಪಿ, ಆರ್ಎಸ್ಎಸ್, ಬಜರಂಗದಳದ ಮೂಲ ಉದ್ದೇಶವೇ ಸಂವಿಧಾನವನ್ನು ಬದಲಾವಣೆ ಮಾಡುವುದು, ಪರಿಶಿಷ್ಟರ ಮೀಸಲಾತಿಯನ್ನು ಕಿತ್ತು ಹಾಕುವುದು” ಎಂದು ಎಚ್ಚರಿಸಿದರು.
ಸುಳ್ಳು ಮಾಹಿತಿಗಳ ಜಾಹೀರಾತಿಗೆ ಖಂಡನೆ
“ದಲಿತರ ಹಣವನ್ನು ಕಾಂಗ್ರೆಸ್ ದುರುಪಯೋಗ ಮಾಡಿದೆ” ಎಂದು ಬಿಜೆಪಿ ನೀಡಿರುವ ಜಾಹೀರಾತನ್ನು ಖಂಡಿಸಿದ ಕೇಶವಮೂರ್ತಿಯವರು, “ಎಸ್ಸಿಎಸ್ಪಿ ಟಿಎಸ್ಪಿ ಹಣ ದುರುಪಯೋಗವಾಗುತ್ತಿದ್ದನ್ನು ತಪ್ಪಿಸಲು ಕಾಯ್ದೆಯಲ್ಲಿನ ಸೆಕ್ಷನ್ 7ಡಿಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿದ್ದು ಕೂಡ ಕಾಂಗ್ರೆಸ್ ಸರ್ಕಾರ. ಗೋವಿಂದ ಕಾರಜೋಳ ಅವರು ಸಚಿವರಾಗಿದ್ದ ಅವಧಿಯಲ್ಲಿ ಎಸ್ಸಿಎಸ್ಪಿ ಟಿಎಸ್ಪಿಯ 19,000 ಕೋಟಿ ರೂಪಾಯಿಗಳನ್ನು ದುರುಪಯೋಗ ಮಾಡಿಕೊಂಡರು. ಇದನ್ನು ಏಕೆ ಯಾರು ಕೇಳುತ್ತಿಲ್ಲ? ಹಣ ದುರುಪಯೋಗ ಆರೋಪಗಳ ಸಂಬಂಧ ನಾವು ಕಾಂಗ್ರೆಸ್ ಸರ್ಕಾರವನ್ನೂ ಕೇಳಿದೆವು. ಭಾಗ್ಯಗಳಿಗೆ ಒಂದಿಷ್ಟು ಹಣ ಹಂಚಿಹೋಗಿರಬಹುದು, ಅದನ್ನು ಸರಿಪಡಿಸುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಆದರೆ ನಮ್ಮ ದಿಕ್ಕು ತಪ್ಪಿಸಲು ಬಿಜೆಪಿ ಸುಳ್ಳುಗಳನ್ನು ಹೇಳುತ್ತಿದೆ” ಎಂದು ಕಾಂಗ್ರೆಸ್ ಸರ್ಕಾರ ಹಣವನ್ನು ದುರುಪಯೋಗ ಮಾಡಿದೆ ಎನ್ನುತ್ತಿದ್ದಾರೆ” ಎಂದರು.
“ರಾಷ್ಟ್ರದ ದಲಿತ, ಬಹುಜನ ಸಮುದಾಯದ ಹಣವನ್ನು ಕೊರೊನಾ ಹೆಸರಲ್ಲಿ ಲೂಟಿ ಮಾಡಿದ್ದಾರೆ. ಇಂದು ಏನಾದರೂ ಬಿಜೆಪಿ ಅಭ್ಯರ್ಥಿಗಳು ದುಡ್ಡನ್ನು ಖರ್ಚು ಮಾಡುತ್ತಿದ್ದರೆ, ಅದು ಕೊರೊನಾ ಹೆಸರಲ್ಲಿ ಕಬಳಿಸಿದ ಹಣವಾಗಿದೆ” ಎಂದು ಆರೋಪಿಸಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್ಎಚ್ಎಸ್) ಬೆಂಗಳೂರು ನಗರಾಧ್ಯಕ್ಷ ಅಮರ ನಾರಾಯಣ, ಎಂಆರ್ಎಚ್ಎಸ್ ಬೆಂಗಳೂರು ಗ್ರಾಮಾಂತರದ ಅಧ್ಯಕ್ಷ ಜಯಂತ್, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕುದೂರು ನರಸಿಂಹಮೂರ್ತಿ, ದಲಿತ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಮೂರ್ತಿ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





