ಮಣಿಪುರದಲ್ಲಿ ಸರ್ಕಾರ ಮರುಸ್ಥಾಪಿಸುವುದಕ್ಕೂ ಮುನ್ನ ರಾಜಕೀಯ ಪರಿಹಾರ ಕಂಡುಕೊಳ್ಳಿ ಎಂದು ಬಿಜೆಪಿಗೆ ಕುಕಿ ಗುಂಪು ಸಲಹೆ ನೀಡಿದೆ. ಮೊದಲು ಸಂಘರ್ಷಕ್ಕೆ ರಾಜಕೀಯ ಇತ್ಯರ್ಥ ಕೊಂಡುಕೊಳ್ಳಿ, ಬಳಿಕ ಸರ್ಕಾರವನ್ನು ಮತ್ತೆ ರಚಿಸಿ ಎಂದು ಕುಕಿ ಗುಂಪು ಹೇಳಿದೆ. ಈ ಹಿಂದೆ ಮೈತೇಯಿ ಶಾಸಕರು ಇದೇ ಒತ್ತಾಯ ಮಾಡಿದ್ದರು.
ಕುಕಿ-ಝೋ ಸಂಘಟನೆಗಳ ಒಂದು ಸಮೂಹ ಸಂಸ್ಥೆಯಾದ ಕುಕಿ ಝೋ ಕೌನ್ಸಿಲ್ (ಕೆಜೆಡ್ಸಿ) ಕುಕಿ ಪ್ರಾಬಲ್ಯದ ಚುರಾಚಂದ್ಪುರದಲ್ಲಿ ಸಭೆ ನಡೆಸಿದ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬಿತಾ ಪಾತ್ರಾ ಅವರಿಗೆ ಈ ಸಲಹೆಯನ್ನು ನೀಡಿದ್ದಾರೆ. ಇಬ್ಬರೂ ಬುಧವಾರ ಇಂಫಾಲ್ನಲ್ಲಿ ಬಿಜೆಪಿ ಶಾಸಕರು ಮತ್ತು ಇತರ ನಾಯಕರುಗಳನ್ನು ಭೇಟಿ ಮಾಡಿದ್ದಾರೆ. ಅದಾದ ಬಳಿಕ ಕೆಜೆಡಿಯಿ ನಿಯೋಗವನ್ನು ಭೇಟಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧ: ಬಿಜೆಪಿ ಶಾಸಕ
2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು ಈವರೆಗೆ 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಿಸಿದೆ. ಇದೀಗ ಮತ್ತೆ ಸರ್ಕಾರ ರಚಿಸುವಂತೆ ಮೈತೇಯಿ ಶಾಸಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, “ಸಂವಾದದ ಸಮಯದಲ್ಲಿ, ಕೆಜೆಡ್ಸಿ ನಿಯೋಗವು ಭೇಟಿ ನೀಡಿದ ನಾಯಕರಿಗೆ ನಮ್ಮ ಸಾಮೂಹಿಕ ನಿಲುವನ್ನು ತಿಳಿಸಿದ್ದೇವೆ. ಬಫರ್ ವಲಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಅಗತ್ಯವನ್ನೂ ಒತ್ತಿ ಹೇಳಿದ್ದೇವೆ. ನಾವು ಬಿಜೆಪಿ ಸರ್ಕಾರವನ್ನು ವಿರೋಧಿಸುವುದಿಲ್ಲ ಎಂದು ಕೆಜೆಡ್ಸಿ ನಿಯೋಗ ಸ್ಪಷ್ಟವಾಗಿ ಸ್ಪಷ್ಟಪಡಿಸಿದೆ. ಆದರೆ ವಾಸ್ತವ ತಿಳಿಯಬೇಕು” ಎಂದು ಹೇಳಿದ್ದಾರೆ.
60 ಸದಸ್ಯ ಬಲದ ಮಣಿಪುರದಲ್ಲಿ ಬಿಜೆಪಿ 37 ಶಾಸಕರನ್ನು ಹೊಂದಿದೆ. ಆದರೆ ಬಿಜೆಪಿಯ ಏಳು ಮಂದಿ ಸೇರಿದಂತೆ ಕುಕಿ-ಝೋ ಸಮುದಾಯಗಳನ್ನು ಪ್ರತಿನಿಧಿಸುವ 10 ಶಾಸಕರು ಮಣಿಪುರ ಹಿಂಸಾಚಾರದ ಬಳಿಕ ಇಂಫಾಲ್ನಿಂದ ದೂರು ಉಳಿದಿದ್ದಾರೆ.





