ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯವೇ ನಡೆಯಬೇಕಾಯಿತು ಎಂದು ಪ್ರಧಾನಿ ಮೋದಿ ಅವರ ಬೇಜವ್ದಾರಿ ಧೋರಣೆಯನ್ನು ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಕಳೆದ 80 ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಮೇ 4ರಂದು ವಿಕೃತ ಮನಸ್ಸಿನ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ, ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿತ್ತು. ಕೃತ್ಯದ ವಿಡಿಯೋವನ್ನು ಬುಧವಾರ (ಜುಲೈ 18) ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಘಟನೆಯನ್ನು ಇಡೀ ದೇಶವೇ ಖಂಡಿಸಿದೆ.
ದೇಶದ ಆಕ್ರೋಶ ಮಣಿದ ಪ್ರಧಾನಿ ಮೋದಿ ಗುರುವಾರ ಕೃತ್ಯದ ಬಗ್ಗೆ ಮಾತನಾಡಿದ್ದಾರೆ. ‘ಘಟನೆಯ ವಿಡಿಯೋ ಕಂಡು ಆಘಾತಕ್ಕೊಳಗಾಗಿದ್ದೇನೆ. ಮಣಿಪುರದ ಹೆಣ್ಣು ಮಕ್ಕಳ ಮೇಲಾಗಿರುವ ದೌರ್ಜನಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಆರೋಪಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಮೋದಿ ಅವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, “ಜಗತ್ತಿನೆದುರು ಭಾರತ ತಲೆ ತಗ್ಗಿಸುವಂತಹ ಘಟನೆಗಳು ಬಿಜೆಪಿ ಆಡಳಿತದ ಮಣಿಪುರದಲ್ಲಿ ಜರುಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದುವರೆಗೂ ಅಲ್ಲಿಗೆ ಭೇಟಿ ನೀಡಬೇಕೆಂದು ಮನಸ್ಸಾಗಲಿಲ್ಲ. ಅವರು ಮಣಿಪುರದ ಬಗ್ಗೆ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯವೇ ನಡೆಯಬೇಕಾಯಿತು” ಎಂದು ಟ್ವೀಟ್ ಮಾಡಿ, ಕಿಡಿಕಾರಿದೆ.
“ಗಲಭೆಗಳಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಮೋದಿಯವರಿಗೆ ಇದೆಲ್ಲಾ ಸಹಜ ಎನ್ನಿಸುತ್ತಿರಬಹುದೇ” ಎಂದು ಪ್ರಶ್ನಿಸಿದೆ.




