ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವ ಮೀಸಲಾತಿ ನೀತಿಯ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ತಡೆಯಲು ಹಲವು ನಾಯಕರುಗಳಿಗೆ ಗೃಹಬಂಧನ ವಿಧಿಸಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್ನ ಸಂಸತ್ ಸದಸ್ಯ ಅಗಾ ರುಹುಲ್ಲಾ ಮೆಹದಿ, ಮಾಜಿ ಸಿಎಂ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರುಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೀಸಲಾತಿ ನೀತಿಯ ವಿರುದ್ಧದ ಹೋರಾಟವು ತೀವ್ರಗೊಳ್ಳುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ನೀತಿಯಿಂದಾಗಿ ಮುಕ್ತ ವರ್ಗದ ಪಾಲನ್ನು ಶೇ. 40ಕ್ಕಿಂತ ಕಡಿಮೆ ಮಾಡಲಾಗಿದೆ ಮತ್ತು ಒಟ್ಟು ಮೀಸಲಾತಿಯನ್ನು ಶೇ. 60ಕ್ಕಿಂತ ಹೆಚ್ಚು ಮಾಡಲಾಗಿದೆ. ದ್ಯಾರ್ಥಿಗಳು ಮುಕ್ತ ವರ್ಗದ ಪಾಲನ್ನು ಕನಿಷ್ಠ ಶೇ. 50ಕ್ಕೆ ಏರಿಸಬೇಕು ಮತ್ತು ಮೀಸಲಾತಿಯನ್ನು ವೈಜ್ಞಾನಿಕವಾಗಿ ಮರುಪರಿಶೀಲಿಸಬೇಕು ಎಂದು ವಿದ್ಯಾರ್ಥಿಗಳು, ನಾಯಕರುಗಳು ಆಗ್ರಹಿಸುತ್ತಿದ್ದಾರೆ. ಈ ನಡುವೆ ನಾಯಕರ ಗೃಹಬಂಧನ ಮಾಡಿರುವ ಆರೋಪಗಳು ಕೇಳಿಬರುತ್ತಿವೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರದ ಸಂಸತ್ ಸದಸ್ಯ ಅಗಾ ರುಹುಲ್ಲಾ, “ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಬುದ್ಗಾಮ್ನಲ್ಲಿರುವ ನನ್ನ ನಿವಾಸದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ, ಗೇಟ್ಗಳನ್ನು ಮುಚ್ಚಲಾಗಿದೆ. ಪ್ರತಿಭಟನೆಗೆ ಮುಂಚಿತವಾಗಿಯೇ ಹಲವು ವಿದ್ಯಾರ್ಥಿ ನಾಯಕರುಗಳನ್ನೂ ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.
“ಸಂಸದ ರುಹುಲ್ಲಾ ಮೆಹದಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಹೊರಗೆ ಹೆಜ್ಜೆ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಅಧಿಕೃತವಾಗಿ ಅವರಿಗೆ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಮತ್ತು ಅವರ ಕುಟುಂಬಗಳಿಗೆ ಪೊಲೀಸರು ಬೆದರಿಸಿದ್ದಾರೆ ಎಂದು ವರದಿಯಾಗಿವೆ. ಮೀಸಲಾತಿ ನೀತಿ ಮೂಲಕ ನ್ಯಾಯಯುತ ಅವಕಾಶವನ್ನು ಕೇಳುತ್ತಿರುವುದೇ ಇದಕ್ಕೆ ಕಾರಣ” ಎಂದು ಆಗಾಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಸದ್ಯ ಮುಖ ನಾಯಕರ ಬಂಧನ ಮತ್ತು ಪೊಲೀಸರ ಬಿಗಿ ಭದ್ರತೆಯಿಂದಾಗಿ ‘ಓಪನ್ ಮೆರಿಟ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ತನ್ನ ಯೋಜಿತ ಪ್ರತಿಭಟನೆಯನ್ನು ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು 2024ರಲ್ಲಿ ಜಾರಿಗೆ ತಂದ ತಿದ್ದುಪಡಿಯ ಮೂಲಕ ಪಹಾರಿ ಜನಾಂಗಕ್ಕೆ ಶೇ. 10ರಷ್ಟು ಎಸ್ಟಿ (ST) ಮೀಸಲಾತಿ ನೀಡಿದ್ದು ಮತ್ತು ಇತರ ಹಿಂದುಳಿದ ವರ್ಗಗಳ (OBC) ಪಟ್ಟಿಯನ್ನು ವಿಸ್ತರಿಸಿದ್ದು ಈ ವಿವಾದಕ್ಕೆ ಮೂಲ ಕಾರಣವಾಗಿದೆ.





