ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅನುಷ್ಠಾನಗೊಳಿಸದಂತೆ ಅಸ್ಸಾಂನ 16 ಪಕ್ಷಗಳ ಸಂಯುಕ್ತ ವೇದಿಕೆಯು ಒತ್ತಾಯಿಸಿದೆ. ಕಾಯ್ದೆ ರದ್ದತಿಗೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ.
ಅಸ್ಸಾಂ ರಾಜಧಾನಿ ದಿಸ್ಪರದಲ್ಲಿ ಗವರ್ನರ್ ಗುಲಾಬ್ ಚಂದ್ ಕಟಾರಿಯಾ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಸಂಯುಕ್ತ ವೇದಿಕೆಯ ನಾಯಕರು ಮನವಿ ಸಲ್ಲಿಸಿದ್ದಾರೆ. ‘ಅಸಂವಿಧಾನಿಕ ಮತ್ತು ದೇಶವಿರೋಧಿ’ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕಾಯಿದೆಯನ್ನು ರದ್ದುಗೊಳಿಸದಿದ್ದರೆ, ವಿರೋಧ ಪಕ್ಷಗಳು ಮತ್ತು ಅಸ್ಸಾಂನ ಜನರು ಸಾಮೂಹಿಕ ಪ್ರಜಾಸತ್ತಾತ್ಮಕ ಚಳವಳಿ ನಡೆಸಲಿದ್ದಾರೆ. ಕಾಯ್ದೆಯ ವಿರುದ್ಧ ಹೋರಾಟ ನಡೆಸುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
“ದುರದೃಷ್ಟವಶಾತ್, ಆಡಳಿತಾರೂಢ ಬಿಜೆಪಿಯು ಸಂಸತ್ತಿನ ಉಭಯ ಸದನಗಳಲ್ಲಿ ತನ್ನ ಬಹುಮತದ ಲಾಭ ಪಡೆದುಕೊಂಡಿದೆ. ಅಸ್ಸಾಂನ ಜನರ ಭಾವನೆಗಳನ್ನು ಕಡೆಗಣಿಸಿ ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ಅಂಗೀಕರಿಸಿದೆ” ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೋದಿ ಚಿತ್ರವುಳ್ಳ ‘ಚೀಲ’ಗಳ ಖರೀದಿಗೆ 15 ಕೋಟಿ ರೂ. ತೆತ್ತ ಕೇಂದ್ರ!
“ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಿಎಎ ಜಾರಿಯನ್ನು ತಡೆಯಲಿದ್ದರೆ, ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಒಂದಾಗಿ ನಿಲ್ಲಲಿವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಎಯನ್ನು ಅಸಂವಿಧಾನಿಕ ಎಂದಿರುವ ಅಸ್ಸಾಂ ಜನರು, “ಅಸ್ಸಾಮಿಯ ಗುರುತು, ಸಂಸ್ಕೃತಿ ಮತ್ತು ಭಾಷೆಗೆ ಕಾಯ್ದೆಯು ಬೆದರಿಕೆಯಾಗಿದೆ” ಎಂದು ಪರಿಗಣಿಸುತ್ತಾರೆ. ಸಿಎಎ ಅನುಷ್ಠಾನವು ಅಕ್ರಮ ವಲಸಿಗರಿಗೆ, ವಿಶೇಷವಾಗಿ ನೆರೆಯ ಬಾಂಗ್ಲಾದೇಶದಿಂದ ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತದೆ. ಇದರಿಂದಾಗಿ ಸ್ಥಳೀಯ ಸಮುದಾಯಗಳ ಭವಿಷ್ಯಕ್ಕೆ ಅಪಾಯವಿದೆ ಎಂದೂ ಅವರು ಭಾವಿಸಿದ್ದಾರೆ.




