ಲಡಾಖ್ ನಾಯಕರೊಂದಿಗೆ ಮಾತುಕತೆಗೂ ಮುನ್ನ ಕೇಂದ್ರ ಗೃಹ ಸಚಿವಾಲಯವು ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA)ನಿಂದ ಬೇಡಿಕೆಗಳ ವಿವರವಾದ ಹೊಸ ಕರಡು ಸಲ್ಲಿಸುವಂತೆ ಕೋರಿದೆ.
ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿದ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ನ ಹಿರಿಯ ನಾಯಕ ಸಜ್ಜಾದ್ ಕಾರ್ಗಿಲಿ, “ಕೇಂದ್ರ ಗೃಹ ಸಚಿವಾಲಯ ನಮ್ಮ ಬೇಡಿಕೆಗಳ ಹೊಸ ಕರಡನ್ನು ಕೇಳಿದೆ. ನಾವು ಹೊಸದಾಗಿ ಕರಡು ರಚಿಸಿ ನೀಡುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ
“ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಮೊದಲು ಪ್ರತ್ಯೇಕವಾಗಿ ಸಭೆ ನಡೆಸಿ ಬೇಡಿಕೆಗಳ ಹೊಸ ಕರಡನ್ನು ರಚಿಸಲಿದೆ. ಅದಾದ ಬಳಿಕ ಲೇಹ್, ಕಾರ್ಗಿಲ್ ನಾಯಕರುಗಳು ಜತೆಯಾಗಿ ಸಭೆ ನಡೆಸಿ ಚರ್ಚಿಸಿ ಬೇಡಿಕೆಗಳ ಒಂದೇ ಕರಡು ಪಟ್ಟಿಯನ್ನು ರಚಿಸಲಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಹೊಸ ಕರಡು ಸಲ್ಲಿಸಲು ಕೇಂದ್ರ ಸಮಯ ಮಿತಿಯನ್ನು ನೀಡಿದೆಯೇ ಎಂಬ ಈದಿನ ಡಾಟ್ ಕಾಮ್ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಜ್ಜಾದ್ ಕಾರ್ಗಿಲಿ, “ನಾವು ಈ ವಾರದಲ್ಲಿ ಬೇಡಿಕೆಗಳ ಜಂಟಿ ಕರಡನ್ನು ಕೇಂದ್ರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಕರಡನ್ನು ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರಾಜ್ಯ ಸಚಿವ ನಿತ್ಯಾನಂದ ರೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತ ಅಧಿಕಾರ ಸಮಿತಿ (HPC) ಸಭೆಗೆ ನಮ್ಮನ್ನು ಆಹ್ವಾನಿಸಬಹುದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-6 | ಕಷ್ಟ ಕಾರ್ಪಣ್ಯಗಳಲ್ಲಿ ಬೆಂದ ಜನರ ಬೇಡಿಕೆ ಬೆಂಬಲಿಸಿದ ನಿಯೋಗ: ಬಿಜೆಪಿಗೆ ಬಿಸಿ ತಟ್ಟಿದ್ದೇಕೆ?
ಲಡಾಖ್ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ(ಪಿಎಸ್ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಡಾಖ್ನಲ್ಲಿ ಹಲವು ವರ್ಷಗಳಿಂದ ನಿರಂತರ ಪ್ರತಿಭಟನೆಗಳು ನಡೆಯುತ್ತಿದೆ. ಕೇಂದ್ರದೊಂದಿಗೆ ನಡೆದ ಹಲವು ಸುತ್ತುಗಳ ಮಾತುಕತೆ ವಿಫಲವಾಗಿದೆ.
ಸೆಪ್ಟೆಂಬರ್ 24ರಂದು ಲೇಹ್ನಲ್ಲಿ ಪ್ರತಿಭಟನೆ ನಡೆದ ಸ್ಥಳದ ಹೊರ ಭಾಗದಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸರ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದಾದ ಬಳಿಕ ಲಡಾಖ್ ನಾಯಕರು ಮತ್ತು ಕೇಂದ್ರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ಗೃಹ ಸಚಿವಾಲಯ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಘೋಷಿಸಿದ ನಂತರ, ಮಾತುಕತೆ ಪುನರಾರಂಭಗೊಂಡಿದ್ದು, ಕೊನೆಯದಾಗಿ ಅಕ್ಟೋಬರ್ 22ರಂದು ಮಾತುಕತೆ ನಡೆದಿದೆ.





