ಸಚಿವ ಕೆ ಎನ್ ರಾಜಣ್ಣ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಯುಪಿ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ನಮ್ಮಲಿಯೂ ಅಂತಹದ್ದೇ ಕಾನೂನು ಬರಬೇಕು” ಎಂದಿದ್ದಾರೆ.
ತುಮಕೂರಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, “ನಮ್ಮ ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಉತ್ತರ ಪ್ರದೇಶ ರೀತಿ ಕ್ರಮ ಅನಿವಾರ್ಯ. ಯಾರಾದರೂ ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ ಅವರನ್ನು ಗುಂಡಿಕ್ಕಿ ಕೊಲ್ಲಬೇಕು” ಎಂದು ಸಚಿವರು ಹೇಳಿದ್ದಾರೆ.
“ಯುಪಿಯಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇಲ್ಲ. ಅಲ್ಲಿ ಸಮಾಜಘಾತುಕರ ಮನೆ ಧ್ವಂಸ ಮಾಡಲಾಗುತ್ತದೆ. ಇದರಿಂದ ಅಲ್ಲಿಯ ಜನರು ಈಗ ಭಯಪಟ್ಟಿದ್ದು, ಹಿಡಿತಕ್ಕೆ ಬರುತ್ತಿದ್ದಾರೆ. ನಮ್ಮಲ್ಲಿಯೂ ಇಂತಹದ್ದೆ ಕ್ರಮ ಅಗತ್ಯ” ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಕಾಂಗ್ರೆಸ್ 15-16 ಸೀಟು ಗೆಲ್ಲಬಹುದು. ಆದರೆ ಟಿಕೆಟ್ ನೀಡುವುದರ ಮೇಲೆ ಈ ಸಂಖ್ಯೆ ನಿರ್ಧಾರ ಆಗಲಿದೆ. ನಾನು ಉಸ್ತುವಾರಿ ಹೊಂದಿರುವ ಹಾಸನದಲ್ಲಿ ಶ್ರೇಯಸ್ ಪಟೇಲ್ಗೆ ಟಿಕೆಟ್ ಲಭಿಸಿದೆ. ನಾವು ಹಾಸನದಲ್ಲಿ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಆಕಾಂಕ್ಷಿಗಳಿಗಿರುವ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, “ಹಾಸನದಲ್ಲಿ ಪುಟ್ಟಸ್ವಾಮಿ ಗೌಡರಿಗೆ ಒಳ್ಳೆಯ ಹೆಸರಿದೆ. ಆದರೆ ಯಾವುದೇ ಚುನಾವಣೆ ಬಂದರೂ ಟಿಕೆಟ್ ಆಕಾಂಕ್ಷಿಗಳಿಗೆ ಅಸಮಾಧಾನ ಉಂಟಾಗವುದು ಸಾಮಾನ್ಯ. ಒಮ್ಮೆ ಸೀಟು ಘೋಷಣೆ ಮಾಡಿದ ಬಳಿಕ ಎಲ್ಲವೂ ಸರಿಯಾಗುತ್ತದೆ. ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಒಪ್ಪಲೇಬೇಕು” ಎಂದರು.
ಚುನಾವಣೆ ಬಂದಾಗಲೇ ದರ ಇಳಿಕೆ
ಮಹಿಳಾ ದಿನಾಚರಣೆಯಂದು ಕೇಂದ್ರ ಮೋದಿ ಸರ್ಕಾರ ಸಿಲಿಂಡರ್ ಬೆಲೆ ₹100 ಇಳಿಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, “ಚುನಾವಣೆ ಹತ್ತಿರ ಬಂದಿರುವ ಕಾರಣ ಮೋದಿ ಸರ್ಕಾರ ಎಲ್ಪಿಜಿ ದರ ಕಡಿತ ಮಾಡಿದೆ. ನೂರು ರೂಪಾಯಿ ಇಳಿಸಿ ಚುನಾವಣೆ ಮುಗಿದ ಬಳಿಕ ಅಧಿಕಾರಕ್ಕೆ ಬಂದರೆ ಮತ್ತೆ ಇನ್ನೂರು ರೂಪಾಯಿ ಹೆಚ್ಚಳ ಮಾಡುತ್ತಾರೆ” ಎಂದು ದೂರಿದರು.
“ಚುನಾವಣೆ ಬಂದಾಗಲೇ ದರ ಇಳಿಕೆ ಮಾಡಿ, ಬಳಿಕ ಬೆಲೆ ಹೆಚ್ಚಿಸುವುದು ಮೋದಿ ತಂತ್ರವಲ್ಲ, ಇದು ಆರ್ಎಸ್ಎಸ್ನ ಒಂದು ತಂತ್ರ. ಆರ್ಎಸ್ಎಸ್ ಏನೂ ಹೇಳುತ್ತದೆಯೋ ಅದನ್ನೇ ಬಿಜೆಪಿ ಮಾಡುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಜನರು ಸಿದ್ಧರಾಮಯ್ಯರ ಗ್ಯಾರಂಟಿ ಯೋಜನೆಯನ್ನು ಮರೆಯಲು ಸಾಧ್ಯವಿಲ್ಲ. ಇದರಿಂದಾಗಿ ಗೆಲುವು ಖಂಡಿತ. ನಮ್ಮ ಒಂದನೇ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಬಿಜೆಪಿಯವರದ್ದು ಇನ್ನೂ ಪಟ್ಟಿಯೇ ಬಿಡುಗಡೆಯಾಗಿಲ್ಲ” ಎಂದು ಕುಟುಕಿದರು.





