ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವುದನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ. “ಪ್ರಧಾನಿ ಜಿ7 ಭೇಟಿಯು ಯಾರದೋ ಮದುವೆಗೆ ಹೋಗಿ ನಾನೇ ವರನೆಂದು ಹೇಳಿಕೊಂಡಂತೆ” ಎಂದು ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರಾದರೂ ಕೂಡಾ ಸದಾ ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಾ ಬಂದಿರುವ ಸುಬ್ರಮಣಿಯನ್ ಸ್ವಾಮಿ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
Modi was invited to witness the G7 procedings, but not invited to speak because India is not a member of G7 group of important nations. Then why did he go there? To bluff us that he was invited to the top conference. It was like going to a wedding and later to claim that he was…
— Subramanian Swamy (@Swamy39) June 15, 2024
“ಜಿ7 ಪ್ರಕ್ರಿಯೆಗಳನ್ನು ವೀಕ್ಷಿಸಲು ಮೋದಿ ಅವರನ್ನು ಆಹ್ವಾನಿಸಲಾಗಿದೆ. ಆದರೆ ಭಾರತವು ಪ್ರಮುಖ ರಾಷ್ಟ್ರಗಳ ಜಿ7 ಗುಂಪಿನ ಸದಸ್ಯರಾಗಿಲ್ಲದ ಕಾರಣ ಪ್ರಧಾನಿ ಮೋದಿ ಅವರನ್ನು ಭಾಷಣ ಮಾಡಲು ಆಹ್ವಾನಿಸಲಾಗಿಲ್ಲ” ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಮೋದಿ ಸೋಲಿನಿಂದ ಮಾತ್ರ ಹಿಂದೂ ರಾಷ್ಟ್ರ ಸಾಧ್ಯ: ಸುಬ್ರಮಣಿಯನ್ ಸ್ವಾಮಿ
“ಬರೀ ಪ್ರಕ್ರಿಯೆ ವೀಕ್ಷಿಸಲು ಪ್ರಧಾನಿ ಮೋದಿ ಅಲ್ಲಿಗೆ ಹೋಗಿದ್ದು ಯಾಕೆ? ಅವರನ್ನು ಉನ್ನತ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ ಎಂದು ನಮ್ಮಲ್ಲಿ ಬುರುಡೆ ಬಿಡಲು ಹೋಗಿದ್ದಾರೆ. ಇದು ಯಾರದೋ ಮದುವೆಗೆ ಹೋಗಿ ಆಮೇಲೆ ನಾನೇ ವರ ಎಂದು ಹೇಳಿಕೊಂಡಂತೆ” ಎಂದು ಬಿಜೆಪಿ ನಾಯಕ ಪ್ರಧಾನಿ ಮೋದಿಯನ್ನು ಕುಟುಕಿದ್ದಾರೆ.
ಈ ಹಿಂದೆ ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನಾ ಪೂಜೆ ಮಾಡುವುದನ್ನು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದರು. “ಸೀತೆಯನ್ನು ರಕ್ಷಿಸಲು ರಾಮ ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ್ದರು. ಈಗ ಅವರ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ತನ್ನ ಪತ್ನಿಯನ್ನೇ ತೊರೆದ ಪ್ರಧಾನಿ ಮೋದಿ ರಾಮ ಮಂದಿರದ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ” ಎಂದು ಪ್ರಶ್ನಿಸಿದ್ದರು.





