ಪ್ರಧಾನಿ ಮೋದಿ ಅವರಿಗೆ ಬುಧವಾರ ಲೋಕಸಭೆಗೆ ಬರಲು ಗಟ್ಸ್ ಇಲ್ಲ. ಅವರು ಸದನಕ್ಕೆ ಬರುವುದಿಲ್ಲ. ಒಂದು ವೇಳೆ, ಅವರು ಸದನಕ್ಕೆ ಬಂದರೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ ಅವರ ಆತ್ಮಚರಿತ್ರೆ ”ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಪ್ರತಿಯನ್ನು ನಾನೇ ಖುದ್ದು ಅವರಿಗೆ ಹಸ್ತಾಂತರಿಸುತ್ತೇನೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಭಾರತದ ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿಕೊಂಡಿರುವ ಮತ್ತು ಭಾರತೀಯ ಸೈನಿಕರ ಮೇಲಿನ ಚೀನಾ ದಾಳಿಯ ಕುರಿತು ಉಲ್ಲೇಖಿಸಿರುವ, ಇನ್ನೂ ಸಾರ್ವಜನಿಕವಾಗಿ ಪ್ರಕಟಗೊಳ್ಳದ ನರವಾಣೆ ಅವರ ಪುಸ್ತಕವನ್ನು ಮಂಗಳವಾರ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ಅದರೆ, ಅವರ ಭಾಷಣವನ್ನು ತಡೆಯಲಾಯಿತು. ಸದನದಲ್ಲಿ ರಾಹುಲ್ ಗಾಂಧಿ ಮಾತನಾಡಲು ಅವಕಾಶವನ್ನು ನಿರಾಕರಿಸಲಾಯಿತು.
ಬುಧವಾರ, ಪುಸ್ತಕದ ಮುದ್ರಿತ ಪ್ರತಿಯನ್ನು ಕೈಯಲ್ಲಿಡಿದುಕೊಂಡ ಸಂಸತ್ಗೆ ಬಂದ ರಾಹುಲ್ ಗಾಂಧಿ, “ಪ್ರಧಾನಿಯವರು ಇಂದು ಲೋಕಸಭೆಗೆ ಬರಲು ಧೈರ್ಯ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಅವರು ಬಂದರೆ, ನಾನು ಅವರಿಗೆ ಈ ಪುಸ್ತಕವನ್ನು ನೀಡಲಿದ್ದೇನೆ. ಪ್ರಧಾನಿ ಬಂದರೆ, ನಾನು ನೇರವಾಗಿ ಹೋಗಿ ಈ ಪುಸ್ತಕವನ್ನು ಅವರಿಗೆ ಹಸ್ತಾಂತರಿಸುತ್ತೇನೆ. ಅವರು ಪುಸ್ತಕವನ್ನು ಓದಬಹುದು ಮತ್ತು ದೇಶವು ಸತ್ಯವನ್ನು ತಿಳಿದುಕೊಳ್ಳಬಹುದು” ಎಂದಿದ್ದಾರೆ.
ದೇಶದ ಪ್ರತಿಯೊಬ್ಬ ಯುವಜನರು ಈ ಪುಸ್ತಕವನ್ನು ಓದಬೇಕೆಂದು ಮನವಿ ಮಾಡಿದ ರಾಹುಲ್ ಗಾಂಧಿ, “ಇದು ನರವಾಣೆ ಅವರ ಪುಸ್ತಕ. ಅವರು ಈ ಪುಸ್ತಕದಲ್ಲಿ ಲಡಾಖ್ನ ಸಂಪೂರ್ಣ ವಿವರಣೆಯನ್ನು ನೀಡಿದ್ದಾರೆ. ಈ ಪುಸ್ತಕವನ್ನು ಸದನದಲ್ಲಿ ನಾನು ಉಲ್ಲೇಖಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಗಡಿ ಉದ್ವಿಗ್ನತೆ ಮತ್ತು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’: ಜನರಲ್ ನರವಣೆ ಪುಸ್ತಕದ ಸುತ್ತ ಏಕೆ ಈ ನಿಗೂಢ ಮೌನ?
“(ಮಾಜಿ) ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರು ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿ ‘ಚೀನಾದ ಟ್ಯಾಂಕ್ಗಳು ಕೈಲಾಸ ಪರ್ವತವನ್ನು ತಲುಪಿವೆ. ನಾವು ಏನು ಮಾಡಬೇಕು’ ಎಂದು ಕೇಳಿದಾಗ, ಮೊದಲು, ರಾಜನಾಥ್ ಸಿಂಗ್ ಅವರಿಗೆ ಪ್ರತಿಕ್ರಿಯಿಸಲಿಲ್ಲ. ಬಳಿಕ, ನರಾವಣೆ ಅವರು ಜೈಶಂಕರ್, ಎನ್ಎಸ್ಎಅನ್ನು ಕೇಳಿದರು. ಆದರೆ ಯಾವುದೇ ಉತ್ತರ ಬರಲಿಲ್ಲ. ನಂತರ ಅವರು ಮತ್ತೊಮ್ಮೆ ರಾಜನಾಥ್ ಸಿಂಗ್ ಅವರಿಗೆ ಕರೆ ಮಾಡಿದರು. ರಾಜನಾಥ್ ಸಿಂಗ್ ಅವರು ‘ಮೇಲಿನವರನ್ನು’ ಕೇಳುವುದಾಗಿ ಹೇಳಿದರು” ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ.
“ಚೀನಾದ ಪಡೆಗಳು ನಮ್ಮ ಗಡಿಗಳ ಒಳಗೆ ಬಂದರೆ, ನಾವು ಅವರ ಅನುಮತಿಯಿಲ್ಲದೆ ಅವರ ಮೇಲೆ ಗುಂಡು ಹಾರಿಸಬಾರದು ಎಂಬುದು ‘ಮೇಲಿನ’ ಅಧಿಕಾರಿಗಳ ಸ್ಥಾಯಿ ಆದೇಶವಾಗಿತ್ತು. ನರವಣೆ ಮತ್ತು ನಮ್ಮ ಸೈನ್ಯವು ಆ ಟ್ಯಾಂಕ್ಗಳು ನಮ್ಮ ಪ್ರದೇಶವನ್ನು ಪ್ರವೇಶಿಸಿದ್ದರಿಂದ ಅವುಗಳ ಮೇಲೆ ಗುಂಡು ಹಾರಿಸಲು ಬಯಸಿದ್ದರು. ನರೇಂದ್ರ ಮೋದಿ ಅವರು ‘ಜೋ ಉಚಿತ್ ಸಂಜೋ ವೋ ಕರೋ’ (ನೀವು ಬಯಸ್ಸಿದ್ದನ್ನು ಮಾಡಿ) ಎಂಬ ಸಂದೇಶವನ್ನು ನೀಡಿದರು. ಇದರರ್ಥ ನರೇಂದ್ರ ಮೋದಿ ತಮ್ಮ ಜವಾಬ್ದಾರಿಯನ್ನು ಪೂರೈಸಲಿಲ್ಲ. ಇದರಿಂದಾಗಿ, ‘ನಾನು ನಿಜವಾಗಿಯೂ ಒಂಟಿತನ ಅನುಭವಿಸಿದೆ, ಇಡೀ ವ್ಯವಸ್ಥೆಯಿಂದ ನಾನು ಕೈಬಿಡಲ್ಪಟ್ಟಿದ್ದೇನೆ’ ಎಂಬುದಾಗಿ ನರವಣೆ ಅವರು ಬರೆದಿದ್ದಾರೆ” ಎಂದು ತಿಳಿಸಿದ್ದಾರೆ.




