“ಮೋದಿ ಈಗಾಗಲೇ ಸೋತಿದ್ದಾರೆ, ಅವರ ಮಾನಸಿಕ ಸ್ಥಿತಿ ಗೊತ್ತಿರುವುದರಿಂದ, ಫಲಿತಾಂಶ ಘೋಷಣೆಯಾದ ನಂತರ ಅವರ ನಡೆಯ ಬಗ್ಗೆ ನಮಗೆ ಆತಂಕವಿದೆ. ರಾಷ್ಟ್ರಪತಿಗಳು ಕುದುರೆ ವ್ಯಾಪಾರಕ್ಕೆ ಅವಕಾಶ ಆಗುವಂತೆ ‘ಇಂಡಿಯಾ’ ಮೈತ್ರಿಕೂಟ ಹೊರತು ಪಡಿಸಿ ಬೇರೆ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ಕೊಡುವ ಸಾಧ್ಯವಿದೆ” ಎಂದು ಭಾಷಾ ಶಾಸ್ತ್ರಜ್ಞ ಎಂ ಗಣೇಶ್ ದೇವಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ‘ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು’ ಎಂಬ ಹೆಸರನಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. “ಅನಧಿಕೃತವಾಗಿ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಸಾಧ್ಯತೆ ಇದೆ. ಫಲಿತಾಂಶ ಬಳಿಕ ರಾಷ್ಟ್ರಪತಿ 1 ತಿಂಗಳು ತುರ್ತುಪರಿಸ್ಥಿತಿ ಹೇರಬಹುದು. ಅವರು ಬಿಜೆಪಿಯ ತಂತ್ರಗಳೊಂದಿಗೆ ಬಯಲಾಗಿಯೇ ಆಗುತ್ತಾರೆ. ನಾವು ತಾಳ್ಮೆ ವಹಿಸಬೇಕು. ಈಗಿನಿಂದ ಜುಲೈ ಮಧ್ಯದವರೆಗೆ ನಾವು ಬಹಳ ಎಚ್ಚರಿಕೆಯಿಂದಿರಬೇಕು” ಎಂದು ಕರೆಕೊಟ್ಟರು.
“ಅಧಿಕಾರ ವರ್ಗಾವಣೆಯ ವಿಚಾರದಲ್ಲಿ ಮೋದಿ ಈಗಾಗಲೇ ಸೋತಿದ್ದಾರೆ. ಇನ್ನುಮುಂದೆ ಅವರ ಮುಖ ನೋಡುವ ಭಾಷಣ ಕೇಳುವ ಅಗತ್ಯವಿಲ್ಲ. ಆದರೆ, ಮೋದಿ ವಿರುದ್ಧದ ಜಯವನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ನಾವು ಸಾರ್ವಜನಿಕ ಆಂದೋಲನ ಒಂದನ್ನು ನಡೆಸಬೇಕು. ನಾನು ಫ್ಯಾಸಿಸಂಅನ್ನು ಸೋಲಿಸಲು ಮತ ಚಲಾಯಿಸಿದ್ದೇನೆ ಎಂಬ ಅಭಿಯಾನ ಮಾಡಿದರೆ, ಕೆಲವು ದಿನಗಳಲ್ಲಿ ಸಾವಿರಾರು ‘ಮಿ ಟೂ’ ಹೇಳಿಕೆಗಳನ್ನು ಹೊರಡಿಸಬಹುದು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ‘ಇಂಡಿಯಾ’ ಮೈತ್ರಿಕೂಟದ ಸಂಯೋಜಕ ಗುರುದೀಪ್ ಸಂಫಾಲ್, “ಲೋಕಸಭಾ ಚುನಾವಣೆ ಆರಂಭವಾದಾಗ ಅದು ಬೇರೆಯೇ ರೀತಿಯಲ್ಲಿ ಆರಂಭವಾಯಿತು. ಬಹಳ ಮಂದಿ ಇದು ಚುನಾವಣೆಯೇ ಅಲ್ಲ. ಮೋದಿ ಸರ್ಕಾರಕ್ಕೆ ಕೌಂಟರ್ ನರೇಟಿವ್ ಇಲ್ಲವೇ ಇಲ್ಲ ಎನ್ನುತ್ತಿದ್ದರು. ಈಗ ಎಲ್ಲರಿಗೂ ಗೊತ್ತಾಗಿದೆ – ಕೌಂಟರ್ ನರೇಟಿವ್ ಬೃಹತ್ತಾಗಿದೆ. ಮೋದಿ ಸರ್ಕಾರ ಆತಂಕದಲ್ಲಿದೆ” ಎಂದರು.
“ಈಗ ಇವಿಎಂ ಬೇಕಾ ಬೇಡವಾ, ವಿವಿಪ್ಯಾಟ್ ಹೇಗೆ ಎಣಿಸುವುದು ಇತ್ಯಾದಿ ಚರ್ಚೆಗೆ ಸಮಯವಿಲ್ಲ. ಈಗ ಆ ಹಂತ ದಾಟಿದೆ. ನಾವಣಾ ಆಯೋಗ ಸುಪ್ರೀಂ ಕೋರ್ಟ್ ಮುಂದೆ ನಾವು ಅಂಕಿ ಅಂಶ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಎಲ್ಲ ಬೂತುಗಳ 17ಸಿ ಫಾರ್ಮ್ ಅಥವಾ ಅಂಕಿಅಂಶ ಪಡೆಯಲು 3,000ದಿಂದ 4,000 ಬೂತ್ ಏಜೆಂಟ್ಗಳು ಬೇಕಾಗಿದ್ದಾರೆ. ಈಗ ಸಿವಿಲ್ ಸೊಸೈಟಿ ಅಭ್ಯರ್ಥಿಗಳ ಜೊತೆ ರಿಟರ್ನಿಂಗ್ ಆಫೀಸರ್ಗಳನ್ನು ಭೇಟಿಯಾಗಿ ಈ ಫಾರ್ಮ್ ಪಡೆಯಲು ಒತ್ತಡ ಹಾಕಬೇಕು. ಡೇಟಾ ಕೇಳಬೇಕು. ಸ್ಟ್ರಾಂಗ್ ರೂಮ್ಗಳಿಗೆ ಸ್ವತಃ ಅಭ್ಯರ್ಥಿ ಹೋಗಿ, ಪರಿಶೀಲನೆ ನಡೆಸಬೇಕು. ಇದಕ್ಕೆ ಸುಪೀಂ ಕೋರ್ಟ್ ಒಪ್ಪಿಗೆಯ ಆದೇಶವೂ ಇದೆ” ಎಂದರು.
“ಬಿಜೆಪಿಗೆ ಒಂದು ತಂತ್ರಗಾರಿಕೆಯಿದೆ, ಅವರು ಎಕ್ಸಿಟ್ ಪೋಲ್ಗಳ ಮೂಲಕ ನರೇಟಿವ್ ಕಟ್ಟುತ್ತಾರೆ. ಸ್ಥಳೀಯ ಮಾಧ್ಯಮಗಳ ಮೂಲಕ ಅದಕ್ಕೆ ಕೌಂಟರ್ ನರೇಟಿವ್ ಕೊಡುವ ಎಕ್ಸಿಟ್ ಪೋಲ್ಗಳನ್ನು ಕೊಡಬೇಕು. ಪೋಲಿಂಗ್ ಆಫೀಸರ್ಗಳ ಮೇಲೆ ನೈತಿಕ ಒತ್ತಡ ಹಾಕಬೇಕು. ಅವರ ಕರ್ತವ್ಯವನ್ನು ಅವರು ಮಾಡಲೇಬೇಕೆಂದ ಆಗ್ರಹ ಮುಂದಿಡಬೇಕು” ಎಂದು ಹೇಳಿದರು.




