ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಅಂತಿಮವಾಗಿ ಸಿಕ್ಕಿಬೀಳುತ್ತಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾನುವಾರ ಬಿಹಾರದ ಕಿಶನ್ಗಂಜ್ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, “ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ಆದರೆ ಇಂಡಿಯಾ ಒಕ್ಕೂಟ ದೇಶವನ್ನು ಒಗ್ಗೂಡಿಸುವ ಯತ್ನವನ್ನು ಮಾಡುತ್ತಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ನಿರುದ್ಯೋಗ ಹೆಚ್ಚಳಕ್ಕೆ ಮತಗಳ್ಳತನ ನೇರ ಕಾರಣ: ರಾಹುಲ್ ಗಾಂಧಿ
“ನಮ್ಮ ಮತ ಕಳ್ಳತನ ಮಾಡಲಾಗುತ್ತಿರುವ ಬಗ್ಗೆ ನಾವು ಆರೋಪ ಮಾಡಿದ್ದೇವೆ. ಆದರೆ ಮೋದಿ, ಶಾ ಮತ್ತು ಚುನಾವಣಾ ಆಯೋಗ ಯಾವುದೇ ಉತ್ತರವನ್ನು ನೀಡಿಲ್ಲ. ಸತ್ಯ ನಮ್ಮ ಕಣ್ಣ ಮುಂದೆಯೇ ಇದೆ” ಎಂದು ಅಭಿಪ್ರಾಯಿಸಿದರು.
ಇನ್ನು ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸುವ ಭರವಸೆಯನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ, “ಜನರು ಒಗ್ಗಟ್ಟಾಗಿ ಮತಗಳ್ಳತನವನ್ನು ತಡೆದರೆ ಬಿಹಾರದಲ್ಲಿ ಖಂಡಿತವಾಗಿಯೂ ಇಂಡಿಯಾ ಒಕ್ಕೂಟ ಸರ್ಕಾರವನ್ನು ರಚಿಸುವುದು ನೂರು ಪ್ರತಿಶತ ಸಾಧ್ಯವಿದೆ” ಎಂದು ಹೇಳಿದರು.
ಕರ್ನಾಟಕದ ಆಳಂದ, ಮಹದೇವಪುರ, ಹರಿಯಾಣ, ಮಹಾರಾಷ್ಟ್ರ ಹೀಗೆ ಹಲವು ಕಡೆಗಳಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಹಲವು ಬಾರಿ ಆರೋಪಿಸಿದ್ದಾರೆ. ಬರೀ ಆರೋಪ ಮಾಡಿರುವುದು ಮಾತ್ರವಲ್ಲದೆ ಈ ಸಂಬಂಧ ಪುರಾವೆಗಳನ್ನೂ ನೀಡಿದ್ದಾರೆ. ಆದರೆ ಆಯೋಗ ಮಾತ್ರ ಈ ಆರೋಪಕ್ಕೆ ಈವರೆಗೂ ಸರಿಯಾದ ಸ್ಪಷ್ಟನೆಯನ್ನು ನೀಡಿಲ್ಲ. ರಾಹುಲ್ ಎತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿಲ್ಲ.





