“ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದಿದ್ದಾರೆ ಮೋದಿ. ಆದರೆ ತಮ್ಮ ಪಕ್ಕದಲ್ಲೇ ಕೂರುವ ದೇವೇಗೌಡರಿಗೆ ಎಷ್ಟು ಮಕ್ಕಳು ಎಂಬುದು ಮೋದಿಗೆ ಗೊತ್ತೆ?”
ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಮತೀಯವಾದಿತನದ ಹೇಳಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
“ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್ನ ಗ್ಯಾರಂಟಿ” ಎಂದು ಮೋದಿ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
“ಮೋದಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲ. ಹತಾಶರಾಗಿರುವ ಅವರು ಹಿಂದೂ- ಮುಸ್ಲಿಂ ಸಮುದಾಯಗಳನ್ನು ಒಡೆದು ಆಳಬಹುಹುದೆಂದು ಭಾವಿಸಿದ್ದಾರೆ. ಪ್ರಧಾನಿ ಸ್ಥಾನದಲ್ಲಿ ಇರುವವರು ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು” ಎಂದು ಟೀಕಿಸಿದ್ದಾರೆ.
ಈ ಕುರಿತು ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜ್ ಅವರು, “ಮುಸ್ಲಿಮರಿಗೆ ಎಲ್ಲವನ್ನೂ ಕೊಟ್ಟುಬಿಡುತ್ತಾರೆ ಅನ್ನಲು ಸಾಧ್ಯವೇ? ಯಾವುದೋ ಒಂದು ಜಾತಿಗೋ, ಒಂದು ಮತಕ್ಕೋ ಸಂಪತ್ತನ್ನೆಲ್ಲ ಧಾರೆ ಎರೆಯಲು ಕಾಂಗ್ರೆಸ್ ಪಕ್ಷ ಎಂದಿಗೂ ಬಿಜೆಪಿಯಂತಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಪಕ್ಷವು ಒಂದು ಜಾತಿಯ ಮಠಾಧೀಶರಿಗೆ ಹೆಚ್ಚು ಹಣವನ್ನು ನೀಡಿತ್ತು. ನಾನು ಕಾಂಗ್ರೆಸ್ಸಿನ ವಕ್ತಾರನೂ ಅಲ್ಲ, ಸದಸ್ಯನೂ ಅಲ್ಲ. ಆದರೆ ಒಂದು ಮಾತು ನಿಜ. ಎಲ್ಲ ಜನರನ್ನು ಪರಿಗಣನೆಗೆ ತೆಗೆದುಕೊಳ್ಳುವ ಪಕ್ಷ ಕಾಂಗ್ರೆಸ್ ಮಾತ್ರ” ಎಂದು ಬಣ್ಣಿಸಿದರು.

“ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಎಲ್ಲ ಸಂಪತ್ತನ್ನು ನೀಡುತ್ತಿದೆ ಎನ್ನುವುದಾದರೆ, ದೇಶದ ಸಂಪತ್ತನ್ನು ಗುಜರಾತ್ ಮಾರ್ವಾಡಿಗಳಿಗೆ ಬಿಜೆಪಿ ನೀಡುತ್ತಿದೆ ಎನ್ನಬಹುದೇ?” ಎಂದು ಪ್ರಶ್ನಿಸಿದರು.
“ನಮ್ಮ ಬ್ಯಾಂಕ್ಗಳನ್ನು, ಕಂಪನಿಗಳನ್ನು ಇವರು ಮುಳುಗಿಸಿದರು. ನಮ್ಮ ಬಂದರು, ಏರ್ಪೋರ್ಟ್ಗಳನ್ನು ಮಾರ್ವಾಡಿಗಳು ಹಿಡಿದುಕೊಂಡರು. ಒಂದು ರಾಜ್ಯಕ್ಕೆ ಮತ್ತು ಒಂದು ಜನಾಂಗಕ್ಕೆ ಮಾತ್ರ ಬಿಜೆಪಿ ಸರ್ಕಾರ ಗಮನ ಕೊಡುತ್ತಿದೆ” ಎಂದು ಆರೋಪಿಸಿದರು.
“ನಮ್ಮ ದೇಶದ ವೈವಿಧ್ಯತೆಯನ್ನು ಗಮನಿಸಬೇಕು. ಎಲ್ಲರನ್ನೂ ಸಮಾನವಾಗಿ ನೋಡಬೇಕು. ದುರ್ಬಲವಾಗಿರುವ ಸಮುದಾಯಗಳಿಗೆ ಸರ್ಕಾರ ಹೆಚ್ಚಿನ ಬೆಂಬಲ ನೀಡಬೇಕು. ಅಂತಹದ್ದಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಹಳ್ಳಕ್ಕೆ ನೀರು ಹರಿಯುವಂತೆ, ಎಲ್ಲಿ ಸಂಪತ್ತು ಹೆಚ್ಚಿದೆಯೋ ಅತ್ತ ಕಡೆಯೇ ದೇಶದ ಹಣವನ್ನು ಹರಿಸಲಾಗಿದೆ. ಇದು ತಪ್ಪಬೇಕು” ಎಂದು ಅಭಿಪ್ರಾಯಪಟ್ಟರು.
“ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದಿದ್ದಾರೆ ಮೋದಿ. ಆದರೆ ಮೋದಿ ಪಕ್ಕದಲ್ಲಿ ಕೂತಿದ್ದ ದೇವೇಗೌಡರಿಗೆ ಎಷ್ಟು ಜನ ಮಕ್ಕಳು ಎಂಬುದು ಮೋದಿಗೆ ಗೊತ್ತೆ? ದೇವೇಗೌಡರಿಗೆ ಅರ್ಧ ಡಜನ್ ಮಕ್ಕಳು ಇದ್ದಾರೆ. ಆ ಕಾಲದಲ್ಲಿ ಮಕ್ಕಳು ಜಾಸ್ತಿ ಮಾಡಿಕೊಂಡಿರುವುದಕ್ಕೆ ದೇವೇಗೌಡರನ್ನು ದೂರಲು ಆಗುತ್ತಾ?” ಅಂತ ಕೇಳಿದರು.
“ನಮ್ಮ ತಂದೆ- ತಾಯಿಗೆ ನಾವು ಒಂಬತ್ತು ಜನ ಮಕ್ಕಳು. ನಮ್ಮಪ್ಪ ನರಸೇಗೌಡ ಅಂತ. ಇಂದಿಗೂ ಏಳು ಜನ ಜೀವಂತವಾಗಿದ್ದೇವೆ. ಹಾಗಾಗಿ ಮುಸಲ್ಮಾನರಿಗೆ ಮಕ್ಕಳು ಹೆಚ್ಚು, ನರಸೇಗೌಡನಿಗೆ ಮಕ್ಕಳು ಕಡಿಮೆ ಎಂದು ಹೇಳುವುದು ಎಷ್ಟು ಸರಿ? ಅರಿವು ಬಂದಾಗ ಎಲ್ಲ ಜನಾಂಗದವರು ಕೂಡ ಸಂತಾನ ನಿಯಂತ್ರಣ ಮಾಡಿಸಿಕೊಂಡಿರುವುದನ್ನು ನಾವು ಕಂಡಿದ್ದೇವೆ. ಇವತ್ತಿನ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆಂಬುದು ಸುಳ್ಳು. ಆದರೆ ಬೇಕಂತಲೇ ಮುಸಲ್ಮಾನರ ವಿರುದ್ಧ ಎತ್ತಿಕಟ್ಟುತ್ತಾರೆ” ಎಂದರು.
“ಹಿಂದೂ- ಮುಸ್ಲಿಮರನ್ನು ಎತ್ತಿ ಕಟ್ಟಿದರೆ ಇವರ ಬೇಳೆ ಬೇಯಿಸಿಕೊಳ್ಳುವುದು ಸುಲಭ. ಒಡೆದು ಆಳುವ ನೀತಿಯನ್ನು ಬ್ರಿಟಿಷರು ಮಾಡುತ್ತಿದ್ದರು. ಇಂದು ಹಿಂದೂ ಮುಸ್ಲಿಮರನ್ನು ಒಡೆದು ಆಳುವುದು ಅವರ ಉದ್ದೇಶವಾಗಿದೆ. ಇವರನ್ನು ಅಧಿಕಾರದಿಂದ ದೂರ ಇಡಬೇಕಿದೆ. ಎಲ್ಲ ಜಾತಿಯ ಜನರು ಈ ಬಿಜೆಪಿಯನ್ನು ಸೋಲಿಸಬೇಕು. ಮುಖ್ಯವಾಗಿ ಮಹಿಳೆಯರು ಬಿಜೆಪಿಗೆ ಪಾಠ ಕಲಿಸಬೇಕು. ಕಾಂಗ್ರೆಸ್ ಪಕ್ಷವು ಮಹಿಳೆಯರ ಪರವಾಗಿದೆ. ಮಹಿಳೆಯರಿಗೆ ಸಂವಿಧಾನಿಕ ಗೌರವ ನೀಡಿರುವುದು ಕಾಂಗ್ರೆಸ್ ಪಕ್ಷ” ಎಂದರು.
“ನೆಹರೂ ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ವರೆಗಿನ ಎಲ್ಲ ಪ್ರಧಾನಿಗಳು ವಿದ್ವತ್ತು ಹೊಂದಿದವರಾಗಿದ್ದರು; ಸ್ವಂತ ಆಲೋಚನೆಯ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಮೋದಿಗೆ ಇದ್ಯಾವುದೂ ಇಲ್ಲ. ಯಾರೋ ಈಜಾಡಲು ಕರೆದರೆ ಅಲ್ಲಿಗೂ ಹೋಗ್ತಾರೆ. ನವಿಲಿಗೆ ಮೇವು ಹಾಕಿಕೊಂಡು ಕೂತಿರುತ್ತಾರೆ. ನಾಗಪುರದವರು ಬರೆದುಕೊಟ್ಟಿದ್ದನ್ನು ಓದುತ್ತಾರೆ. ಈ ಥರದ ಪ್ರಧಾನಿ ದೇಶಕ್ಕೆ ಯೋಗ್ಯವಾದವರಲ್ಲ. ಈ ದೇಶವನ್ನು ಆಳಬೇಕಾಗಿರುವುದು ಪ್ರಜ್ಞಾವಂತ ಪ್ರಜೆಗಳು” ಎಂದು ತಿಳಿಸಿದರು.
ರೈತ ಮುಖಂಡ ವೀರಸಂಗಯ್ಯ ಅವರು ಪ್ರತಿಕ್ರಿಯಿಸಿ, “ಅತ್ಯಂತ ಹೀನಾಯ ಪರಿಸ್ಥಿತಿಗೆ ನರೇಂದ್ರ ಮೋದಿ ಹೋಗಿದ್ದಾರೆ. ಜನರಿಗೆ ಮತ ಕೇಳಲು ಅವರಲ್ಲಿ ಬೇರೆ ಯಾವುದೇ ಕಾರಣಗಳಿಲ್ಲ. ಹತ್ತು ವರ್ಷಗಳ ವಿಫಲತೆಯನ್ನು ಮುಚ್ಚಿಕೊಳ್ಳಲು ಈ ಆಟ ಆಡುತ್ತಿದ್ದಾರೆ” ಎಂದು ಟೀಕಿಸಿದರು.

“ಈ ದೇಶದ ಜನಸಂಖ್ಯೆಯಲ್ಲಿ ಯಾರು ಹೆಚ್ಚಿದ್ದಾರೆ, ಯಾರು ಕಡಿಮೆ ಇದ್ದಾರೆ ಎಂಬುದು ಗೊತ್ತಿಲ್ಲವೇ? ಕೋಮುವಾದವನ್ನು ಎಬ್ಬಿಸದಿದ್ದರೆ, ಮುಸ್ಲಿಮರ ವಿರುದ್ಧ ದ್ವೇಷಕಾರದಿದ್ದರೆ ಉಳಿಗಾಲವಿಲ್ಲ ಎಂಬುದು ಮೋದಿಗೆ ಅರಿವಾಗಿದೆ” ಎಂದು ವ್ಯಂಗ್ಯವಾಡಿದರು.
“ಈ ದೇಶದ ಸೈನಿಕರು ಮತ್ತು ರೈತರನ್ನು ಗೌರವಿಸದವರು ನಾಲಾಯಕ್ಗಳಾಗಿರುತ್ತಾರೆ. ಪುಲ್ವಾಮದಲ್ಲಿ ಸೈನಿಕರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಯಿತು ಎಂಬ ಮಾತನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ. ರೈತರು ಬೀದಿಬೀದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೂ ಕ್ಯಾರೆ ಅನ್ನದ ಮೋದಿ, ಕೋಮುಗಳ ನಡುವೆ ಸಂಘರ್ಷವನ್ನು ಉಂಟು ಮಾಡುತ್ತಿದ್ದಾರೆ. ಈ ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡಿ ಅಧಿಕಾರಕ್ಕೆ ಬರಬೇಕೆಂಬ ಹುಚ್ಚು ಅವರಲ್ಲಿ ಇದೆ. ಇದರಲ್ಲಿ ಸಫಲರಾಗಲು ಸಾಧ್ಯವಿಲ್ಲ. ಜನರು ಜಾಗೃತರಾಗಿದ್ದಾರೆ. ಈ ಕೋಮುವಾದವನ್ನು ಬಿಟ್ಟು ಬದುಕಿನ ಸಮಸ್ಯೆಯ ಕುರಿತು ಮಾತನಾಡುತ್ತಿದ್ದಾರೆ. ಸೋಲಿನ ಭೀತಿ ಮೋದಿಗೆ ಎದುರಾಗಿದೆ” ಎಂದು ಅಭಿಪ್ರಾಯಪಟ್ಟರು.
“ಮೋದಿಯವರಿಗೆ ಯಾವುದೇ ಘನತೆ, ಗೌರವವಿಲ್ಲ. ಕರ್ನಾಟಕ ಬರದಲ್ಲಿ ನರಳುತ್ತಿದ್ದರೂ ಹಣ ನೀಡಲಿಲ್ಲ. ಪ್ರಧಾನಿ ಮೋದಿ ಆ ಸ್ಥಾನಕ್ಕೆ ಯೋಗ್ಯವಾದ ವ್ಯಕ್ತಿಯಲ್ಲ” ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, “ಸರ್ವ ಜನಾಂಗವನ್ನು ರಕ್ಷಣೆ ಮಾಡಬೇಕೆಂದ ಮೋದಿಯವರೇ ಕೋಮುದ್ವೇಷ ಹರುಡುತ್ತಿದ್ದಾರೆ. ಚುನಾವಣಾ ಆಯೋಗ ಜೀವಂತವಾಗಿದ್ದರೆ ಮೋದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

“ಪ್ರಧಾನಿಯವರೇ ಕಾನೂನು ಉಲ್ಲಂಘನೆ ಮಾಡಿ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಒಂದು ಲಕ್ಷ ರೂಪಾಯಿಯನ್ನು ಕೊಡುವುದಾಗಿ ಕಾಂಗ್ರೆಸ್ ಹೇಳಿದೆ. ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆ ಕೊಡುತ್ತೇನೆ ಎಂದಿಲ್ಲ, ಎಲ್ಲ ಧರ್ಮಗಳ ಹೆಣ್ಣುಮಕ್ಕಳಿಗೂ ಇದರಿಂದ ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ ಜಾರಿಗೊಳಿಸಿದ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಪ್ರಧಾನಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಉದ್ಯೋಗ ಕೊಡಲಿಲ್ಲ. ಹದಿನೈದು ಲಕ್ಷ ಕೊಡಲಿಲ್ಲ. ಭ್ರಷ್ಟಾಚಾರಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ನೈತಿಕತೆ ಇಲ್ಲ. ಇವರು ಭಾರತ ದೇಶದ ವಿರೋಧಿ ಮತ್ತು ಬಡವರ ವಿರೋಧಿ ಆಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.





