ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಪರ ಹಾಗೂ ವಿರುದ್ಧದ ಚುನಾವಣೆಯಾಗಿದೆ. ಮೋದಿಯವರ ಬಿಜೆಪಿ 220ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಜನರು ಎರಡಕ್ಕಿಂತ ಹೆಚ್ಚು ಬಾರಿ ಯಾರಿಗೂ ಅವಕಾಶ ನೀಡುವುದಿಲ್ಲ. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಿಗೆ ಜನರು ಎರಡು ಬಾರಿ ಅಧಿಕಾರ ನೀಡಿದ್ದರು. ಅದೇ ರೀತಿ ಪ್ರಧಾನಿ ಮೋದಿ ಕೂಡ ಎರಡು ಬಾರಿ ಅವಕಾಶ ಪಡೆದಿದ್ದಾರೆ” ಎಂದು ಹೇಳಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಬಗ್ಗೆ ಅಸಡ್ಡೆ ತೋರುತ್ತಿದೆ. ಗುಜರಾತ್ ಹೆಚ್ಚು ಹೂಡಿಕೆಗಳನ್ನು ಪಡೆದುಕೊಳ್ಳುತ್ತಿದೆ. ಇತರ ರಾಜ್ಯಗಳಿಗೆ ಎಂಜಲುಗಾಸು ನೀಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಜನರ ಹೊಟ್ಟೆ ತುಂಬಿದಾಗ, ಅವರು ಪೂಜಾ ಸ್ಥಳಗಳು ಮತ್ತು ಇತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಈಗ ಜನರು ಹಸಿದಿದ್ದಾರೆ. ಅವರು ಆಹಾರ, ಉದ್ಯೋಗ ಮತ್ತು ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ರೆಡ್ಡಿ ಹೇಳಿದರು.
“ಆರ್ಎಸ್ಎಸ್-ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿ ಬಹುಸಂಖ್ಯಾತರ ಬೆಂಬಲ ಪಡೆಯುತ್ತಾರೆ. ಉತ್ತರ v/s ದಕ್ಷಿಣ ಮತ್ತು ಆರ್ಯನ್ v/s ದ್ರಾವಿಡರೆಂದು ವಿಂಗಡಿಸಿ ರಾಜಕೀಯ ಮಾಡುತ್ತಾರೆ” ಎಂದರು.
“ಕಾಂಗ್ರೆಸ್ ಯಾವಾಗಲೂ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಂಡಿದೆ. ದಕ್ಷಿಣ ಮತ್ತು ಉತ್ತರಕ್ಕೆ ಸಮಾನವಾದ ಅಭಿವೃದ್ಧಿಗೆ ಸೂತ್ರವನ್ನು ನೀಡುತ್ತದೆ. ಕಾಂಗ್ರೆಸ್ನಲ್ಲಿ ಇದೊಂದು ಅಲಿಖಿತ ಸಂಹಿತೆ. ಪ್ರಧಾನಿ ಉತ್ತರದವರಾಗಿದ್ದರೆ, ದಕ್ಷಿಣದವರು ಅನೇಕ ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಹಾಗಲ್ಲ, ಬಿಜೆಪಿಯವರು ದಕ್ಷಿಣದ ನಾಯಕರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನೂ ನೀಡಲಿಲ್ಲ. ವೆಂಕಯ್ಯನಾಯ್ಡು ಮತ್ತು ಸದಾನಂದಗೌಡರಂತಹ ಮಂತ್ರಿಗಳನ್ನು ಸಹ ಹೊರಹಾಕಿದರು. ಬಿಜೆಪಿಯ ಯೋಜನೆಗಳಲ್ಲಿ ದಕ್ಷಿಣಕ್ಕೆ ಸ್ಥಾನವಿಲ್ಲ” ಎಂದು ದೂರಿದರು.
ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ 55 ಲಕ್ಷ ಕೋಟಿ ರೂ.ಗಳಿದ್ದ ಸಾಲವು 10 ವರ್ಷಗಳಲ್ಲಿ 113 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಈಗ ಒಟ್ಟು ಸಾವು 168 ಲಕ್ಷ ಕೋಟಿ ರೂ. ಆಗಿದೆ. ಹಿಂದಿನ ಸರ್ಕಾರಗಳು ದೇಶದ ಸಂಪತ್ತನ್ನು ಹೆಚ್ಚಿಸಿದರೆ, ಮೋದಿ ಸರ್ಕಾರವು ಅಂತಹ ಸಂಪತ್ತನ್ನು ಖಾಸಗೀಕರಣಗೊಳಿಸಿದೆ. ಈ ಪ್ರಧಾನಿ ನಿರ್ಮಿಸಿದ ಏಕೈಕ ಸ್ಮರಣೀಯ ಸ್ಮಾರಕವೆಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಮಾತ್ರ” ಎಂದು ರೆಡ್ಡಿ ಹೇಳಿದರು.




