1995ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿ ಬಂಧನಕ್ಕೊಳಗಾದ ಪೂರ್ಣಿಯದ ಸ್ವತಂತ್ರ ಸಂಸದ ರಾಜೇಶ್ ರಂಜನ್ ಯಾನೆ ಅಲಿಯಾಸ್ ಪಪ್ಪು ಯಾದವ್ ಅವರು ಅಸ್ವಸ್ಥರಾಗಿದ್ದು, ಶನಿವಾರ ಪಟನಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟನಾದ ಗಾರ್ಡಾನಿಬಾಗ್ ಪ್ರದೇಶದಲ್ಲಿ ತನ್ನ ಪಕ್ಷದ ಕಚೇರಿಯಾಗಿ ಬಳಸಲು ಅಕ್ರಮವಾಗಿ ಮನೆಯನ್ನು ಬಾಡಿಗೆಗೆ ಪಡೆದ ಆರೋಪದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣಕ್ಕೆ ಪಪ್ಪು ಯಾದವ್ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು.
ಇದನ್ನು ಓದಿದ್ದೀರಾ? ಬಿಹಾರ ಸಂಸದ ಪಪ್ಪು ಯಾದವ್ಗೆ ಬಿಷ್ಣೋಯ್ ತಂಡದಿಂದ ಮತ್ತೆ ಜೀವ ಬೆದರಿಕೆ
ಬಂಧನದ ನಂತರ ಯಾದವ್ ಅವರನ್ನು ಶುಕ್ರವಾರ ರಾತ್ರಿ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಐಜಿಐಎಂಎಸ್) ದಾಖಲಿಸಲಾಗಿತ್ತು. ಅದಾದ ನಂತರ ಹೆಚ್ಚಿನ ತಪಾಸಣೆಗಾಗಿ ಇಂದಿರಾ ಗಾಂಧಿ ಹೃದ್ರೋಗ ಸಂಸ್ಥೆಗೆ (ಐಜಿಐಸಿ) ಕರೆದೊಯ್ಯಲಾಗಿದೆ.
ಇನ್ನು ತಮ್ಮನ್ನು ಬಂಧಿಸಲು ಪೊಲೀಸರು ನಿವಾಸಕ್ಕೆ ಆಗಮಿಸುತ್ತಿದ್ದಂತೆ ಪಪ್ಪು ಯಾದವ್ ಅವರು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. “ನಾನು ಆರಾಮವಾಗಿಲ್ಲ, ನನಗೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಪೊಲೀಸರಿಂದ ನನಗೆ ಹಾನಿಯಾಗಬಹುದು ಎಂಬ ಅನುಮಾನವಿದೆ. ಪೊಲೀಸ್ ಠಾಣೆಗೆ ಬದಲಾಗಿ ನಾನು ನೇರವಾಗಿ ನ್ಯಾಯಾಲಯಕ್ಕೆ ಹೋಗಲು ಬಯಸುತ್ತೇನೆ” ಎಂದಿದ್ದರು.
“ಮರುದಿನ ನ್ಯಾಯಾಲಯ ನನಗೆ ಸಮನ್ಸ್ ನೀಡಿತ್ತು. ನನ್ನನ್ನು ಗೃಹಬಂಧನದಲ್ಲಿ ಇರಿಸಬಹುದು. ಪೊಲೀಸರು ಸಿವಿಲ್ ಉಡುಪಿನಲ್ಲಿ ನನ್ನ ನಿವಾಸಕ್ಕೆ ಬಂದ ಕಾರಣ ನನ್ನನ್ನು ಕೊಲ್ಲಲು ಬಂದಿದ್ದಾರೆಂದು ನಾನು ಭಾವಿಸಿದೆ. ಇದು ಅಪರಾಧಿಯ ಮನೆಯೇ? ಈ ಪ್ರಕರಣವನ್ನು ಸುಮಾರು 35 ವರ್ಷಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಈಗ ಪೊಲೀಸರು ಬಂಧಿಸಲು ಬಂದಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ಭೀಕರ ಅಪಘಾತ: ಐವರು ಉದ್ಯಮಿಗಳು ಸಾವು
ಇನ್ನು ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಪ್ಪು ಯಾದವ್ ಅವರಿಗೆ ತಮ್ಮ ಎಕ್ಸ್ ಪೋಸ್ಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪಟನಾದಲ್ಲಿ ನಿಗೂಢ ಸಂದರ್ಭಗಳಲ್ಲಿ ನೀಟ್ ಆಕಾಂಕ್ಷಿಯ ಸಾವು ಮತ್ತು ನಂತರದ ಕ್ರಮಗಳು ವ್ಯವಸ್ಥೆಯಲ್ಲಿನ ಆಳವಾದ ದುರ್ಬಲತೆಯನ್ನು ಬಹಿರಂಗಪಡಿಸಿವೆ. ಸಂತ್ರಸ್ತರ ಕುಟುಂಬವು ನ್ಯಾಯಯುತ ತನಿಖೆ ಮತ್ತು ನ್ಯಾಯವನ್ನು ಕೋರಿದಾಗ, ಅದೇ ಹಳೆಯ ಬಿಜೆಪಿ-ಎನ್ಡಿಎ ನಾಟಕ ಶುರುವಾಗಿತ್ತು. ಪ್ರಕರಣವನ್ನು ಹಳಿತಪ್ಪಿಸಿ, ಕುಟುಂಬಕ್ಕೆ ಕಿರುಕುಳ ನೀಡಿ, ಅಪರಾಧಿಗಳನ್ನು ರಾಜ್ಯ ಅಧಿಕಾರದಿಂದ ರಕ್ಷಿಸುವ ಕಾರ್ಯ ಮಾಡಿತು” ಎಂದು ದೂರಿದ್ದಾರೆ.
“ಈ ಮಗಳಿಗೆ ನ್ಯಾಯಕ್ಕಾಗಿ ದೃಢವಾಗಿ ಧ್ವನಿಯೆತ್ತಿದ್ದು ಸಹ ಸಂಸದ ಪಪ್ಪು ಯಾದವ್. ಇಂದು ಅವರ ಬಂಧನವು ಸ್ಪಷ್ಟವಾಗಿ ರಾಜಕೀಯ ದ್ವೇಷದ ಕೃತ್ಯವಾಗಿದ್ದು, ಧ್ವನಿ ಎತ್ತುವವರನ್ನು ಬೆದರಿಸುವ, ಮೌನಗೊಳಿಸುವ ಉದ್ದೇಶದಿಂದಲೇ ಬಂಧನ ನಡೆದಿದೆ” ಎಂದು ಆರೋಪಿಸಿದ್ದಾರೆ.





