ಮುಡಾ ಪ್ರಕರಣ | ಪಾದಯಾತ್ರೆ ಫ್ಲಾಪ್‌ ಶೋ; ನಡೆಯದ ಅಕ್ರಮಕ್ಕೆ ಬಿಜೆಪಿ-ರಾಜ್ಯಪಾಲರ ಅತ್ಯುತ್ಸಾಹ

Date:

ಕಳೆದೊಂದು ವಾರದಿಂದ ಬಿಜೆಪಿಗರು ಕಾಂಗ್ರೆಸ್‌ ವಿರುದ್ಧ, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಅಕ್ರಮ ನಡೆದಿದೆ ಎಂದು ಆರೋಪಿಸಲಾದ ಮುಡಾ ಹಗರಣವನ್ನು ಗುರಿಯಾಗಿಸಿಕೊಂಡು, ಬಿಜೆಪಿಗರ ಪಾದಯಾತ್ರೆ ನಡೆಸಿ, ಆಗಸ್ಟ್‌ 10ರಂದು ಮೈಸೂರಿನಲ್ಲಿ ಸಮಾರೋಪವನ್ನೂ ಮಾಡಿದ್ದಾಗಿದೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್‌ ಕೂಡ ಜನಾಂದೋಲನ ಸಮಾವೇಶಗಳನ್ನು ನಡೆಸುತ್ತಿದೆ. ಬಿಜೆಪಿ-ಜೆಡಿಎಸ್‌ ಅಧಿಕಾರದಲ್ಲಿದ್ದಾಗ ನಡೆದಿರುವ ಅಕ್ರಮಗಳ ಬಗ್ಗೆ ಬಿಚ್ಚಿಡುತ್ತಿದ್ದಾರೆ. ಹಾಗೆ, ನೋಡಿದರೆ, ಆರೋಪಿತ ಮುಡಾ ಅಕ್ರಮ ಕೂಡ ಬಿಜೆಪಿ ಸರ್ಕಾರದ ಸಮಯದಲ್ಲೇ ನಡೆದಿರೋದು.

ಸದ್ಯ ಯಾವುದೋ ಕಾರಣಕ್ಕೆ ಆರೋಪಿತ ಮುಡಾ ಅಕ್ರಮ ಬೆಳಕಿಗೆ ಬಂದಿದೆ. ಅದರಲ್ಲಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಮುಡಾ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ತಿಳಿದವರು, ಕಾನೂನು, ಭೂಸ್ವಾಧೀನ, ನಿವೇಶನ ಹಂಚಿಕೆ ಕುರಿತಂತೆ ಮಾಹಿತಿ ಉಳ್ಳವರು ಅಲ್ಲಿ ಯಾವ ಅಕ್ರಮವೂ ನಡೆದಿಲ್ಲ. ಈ ಪಾದಯಾತ್ರೆ ಬಿಜೆಪಿಗರ ಕುಚೋದ್ಯ ಬುದ್ಧಿಯಿಂದ ನಡೆಯುತ್ತಿರುವುದು ಅಂತ ಹೇಳುತ್ತಿದ್ದಾರೆ.

ಅಂದಹಾಗೆ, ಸಿದ್ದರಾಮಯ್ಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮುಡಾ ದಾಖಲೆಗಳನ್ನು ಗಮನಿಸಿದರೆ ಅಲ್ಲಿ, ಯಾವುದೇ ಅಕ್ರಮ ನಡೆದಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣಸಿಗುತ್ತಿದೆ. ಆರೋಪಿಸಲಾದಂತೆ ಪಾರ್ವತಿ ಅವರಿಗೆ 14 ಸೈಟುಗಳನ್ನು ನೀಡಲಾಗಿದೆ. ಆದರೆ, ಆ ಸೈಟುಗಳು ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿದ್ದ ಭೂಮಿಯನ್ನು ಮುಡಾ ಒಂದು ನೋಟಿಸನ್ನೂ ಕೊಡದೆ ಸ್ವಾಧೀನಕ್ಕೆ ಪಡೆದು, ನಿವೇಶನಗಳನ್ನ ಮಾಡಿತ್ತು. ಅದಾದ ಬಳಿಕ, ತಮ್ಮ ಭೂಮಿಯನ್ನು ಮುಡಾ ಸ್ವಾಧೀನಕ್ಕೆ ಪಡೆದಿದೆ ಎಂದು ಗೊತ್ತಾದ ಮೇಲೆ ಸಿದ್ದರಾಮಯ್ಯ ಅವರ ಪತ್ನಿ ತಮ್ಮ ಭೂಮಿ ಸ್ವಾಧೀನ ಪಡಿಸಿಕೊಂಡಿರೋದಕ್ಕೆ, ಪರಿಹಾರ ಕೊಡಬೇಕು ಅಂತ ಮುಡಾಗೆ ಅರ್ಜಿ ಸಲ್ಲಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

50: 50ರ ಹಂಚಿಕೆ ಅಡಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿನಲ್ಲಿದ್ದ ಭೂಮಿಯನ್ನ ನಿವೇಶನಗಳನ್ನ ಅಭಿವೃದ್ಧಿಪಡಿಸಿತ್ತು. ಆದರೆ, ಭೂಮಿಯ ವಾರಸುದಾರರಿಗೆ 50:50 ಅಡಿಯಲ್ಲಿ ನಿವೇಶನಗಳನ್ನ ಕೊಡದೆ, ಎಲ್ಲ ಸೈಟುಗಳನ್ನೂ ಮುಡಾ ಮಾರಾಟ ಮಾಡಿತ್ತು. ಹೀಗಾಗಿ, ಸಿದ್ದರಾಮಯ್ಯ ಅವರ ಪತ್ನಿ ಅರ್ಜಿ ಸಲ್ಲಿಸಿದ ಬಳಿಕ ಭೂಸ್ವಾಧೀನದ ಪರಿಹಾರವಾಗಿ, ನಿಯಮಾನುಸಾರ ಅವರ ಭೂಮಿಯ ಬೆಲೆಗೆ ತಕ್ಕಂತೆ ಅವರಿಗೆ 14 ಸೈಟುಗಳನ್ನು ಮುಡಾ ಕೊಟ್ಟಿದೆ.

ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ
ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ

ಇನ್ನು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ್ದ, ಮುಡಾ ಸ್ವಾಧೀನಕ್ಕೆ ಪಡೆದ ಕೆಸರೆ ಗ್ರಾಮದ ಆ ಭೂಮಿ ಅಕ್ರಮವಾಗಿದ್ದ ಅಂತ ನೋಡಿದ್ರೆ, ಅದೂ ಇಲ್ಲ. ಕೆಸರೆ ಗ್ರಾಮದಲ್ಲಿ ಮುಡಾ ಸ್ವಾಧೀನಕ್ಕೆ ಪಡೆದುಕೊಂಡಿದ್ದ ಪಾರ್ವತಿ ಅವರ ಜಮೀನು, 1935ರಲ್ಲಿ ನಿಂಗ ಬಿನ್‌ ಜವರ ಎನ್ನುವವರ ಕುಟುಂಬಕ್ಕೆ ಸೇರಿದ್ದು. ಅದು, ಆ ಕುಟುಂಬದ ಈಗಿನ ವಾರಸುದಾರ ದೇವರಾಜು ಎಂಬುವವರದ್ದು ಅಂತ 1992ರ ಸೆಪ್ಟೆಂಬರ್ 18ರಂದು ಮುಡಾ ನೋಟಿಫೈ ಮಾಡಿತ್ತು. ಆದರೆ, ಬಳಿಕ ವಿ.ಬಾಲಸುಬ್ರಮಣ್ಯಂ ಎಂಬ ಅಧಿಕಾರಿ ಅದನ್ನ ಅಂಗೀಕರಿಸಿ, 1998ರ ಮೇ 13ರಂದು ಡಿನೋಟಿಫೈ ಮಾಡಿ, ಕಂದಾಯ ಇಲಾಖೆ ಅಡಿಗೆ ತಂದಿದ್ದರು.

ಆ ನಂತರ, ಆ ಜಮೀನನ್ನು ಪಾರ್ವತಿ ಅವರ ಅಣ್ಣ ಮಲ್ಲಿಕಾರ್ಜುನಸ್ವಾಮಿ ಅವರು 2004ರ ಆಗಸ್ಟ್‌ 25ರಂದು ಕೊಂಡುಕೊಂಡಿದ್ದರು. 2005ರ ಜುಲೈ 15ರಂದು ಅಧಿಕೃತವಾಗಿ ಜಿಲ್ಲಾಧಿಕಾರಿಗಳ ಮೂಲಕ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಬದಲಾಯಿಸಿಕೊಂಡಿದ್ದರು. ಮಾತ್ರವಲ್ಲದೆ, ನಂತರದಲ್ಲಿ, ಅದೇ ಭೂಮಿಯನ್ನ 2010ರ ಅಕ್ಟೋಬರ್ 6ರಂದು ತವರು ಮನೆಯಿಂದ ಹರಿಶಿನ ಕುಂಕುಮದ ಹೆಸರಿನಲ್ಲಿ ಪಾರ್ವತಿ ಅವರಿಗೆ ಮಲ್ಲಿಕಾರ್ಜುನ ಅವರು ದಾನವಾಗಿ ಕೊಟ್ಟಿದ್ದರು. ಬಳಿಕ, ಪಾರ್ವತಿ ಅವರು ಅಲ್ಲಿ ಯಾವುದೇ ಚಟುವಟಿಕೆಗಳನ್ನ ನಡೆಸದೇ ಇರೋ ಕಾರಣದಿಂದ, ಆ ಭೂಮಿ ಪಾಳು ಬಿದ್ದಿತ್ತು. ಭೂಮಿ ಯಾರದ್ದು, ಯಾರಿಗೆ ಸೇರಿದ್ದು ಎಂಬುದನ್ನೂ ಪರಿಶೀಲಿಸದೆ, ಆ ಪಾಳುಬಿದ್ದಿದ್ದ ಭೂಮಿಯನ್ನು ಮುಡಾ ಸೈಟುಗಳಾಗಿ ಪರಿವರ್ತನೆ ಮಾಡಿ, ಮಾರಾಟ ಮಾಡಿತ್ತು.

ತಮ್ಮ ಭೂಮಿಯನ್ನು ಮುಡಾ ನಿವೇಶನ ಮಾಡಿ, ಮಾರಿರುವುದನ್ನ ನೋಡಿದ ಪಾರ್ವತಿ ಅವರು ಮುಡಾಗೆ ಅರ್ಜಿ ಸಲ್ಲಿಸಿ, ಪರಿಹಾರಕ್ಕೆ ಮನವಿ ಮಾಡಿದ್ದರು. ಆದರೆ, ಇಂತದ್ದೇ ಜಾಗದಲ್ಲಿ ಪರ್ಯಾಯ ನಿವೇಶನ ಕೊಡಿ ಎಂದೇನೂ ಕೇಳಿರಲಿಲ್ಲ. ಆದರೆ, ಮುಡಾ ಈಗ ಹೇಳಲಾಗುತ್ತಿರುವ ವಿಜಯನಗರದ ಬಳಿ ಪಾರ್ವತಿ ಅವರಿಗೆ ನಿವೇಶನಗಳನ್ನ ಕೊಟ್ಟಿದೆ. ವಿಜಯನಗರದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟುಗಳನ್ನ ಪರಿಹಾರವಾಗಿ ನೀಡಬೇಕು ಅಂತ ನಿರ್ಧರಿಸಿದ್ದು, ಇದೇ ಬಿಜೆಪಿಗರೇ ನೇಮಿಸಿದ್ದ ಮುಡಾ ಅಧ್ಯಕ್ಷರು, ಆಯುಕ್ತರು ಹಾಗೂ ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌ ಶಾಸಕರೂ ಇದ್ದ ಸಭೆಯಲ್ಲಿ. ಆ ಸಭೆಯಲ್ಲಿ ಸಿದ್ದರಾಮಯ್ಯ ಕೂಡ ಇರಲಿಲ್ಲ ಅನ್ನೋದು ಗಮನಾರ್ಹ.

ಹೀಗಿರುವಾಗ, ಇದೆಲ್ಲವೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಬಿಜೆಪಿಗರು ಸಿದ್ದರಾಮಯ್ಯ ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಮೊದಲು ಪಾದಯಾತ್ರೆಯಿಂದ ಹಿಂದೆ ಉಳಿದಿದ್ದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ನವರೂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ವಿರುದ್ಧ ಹಸೀ-ಹಸೀ ಸುಳ್ಳುಗಳ ಸರಮಾಲೆಯನ್ನೇ ಹೆಣೆದು, ಸುಳ್ಳು ಆರೋಪಗಳ ಭಾಷಣ ಮಾಡುತ್ತಿದ್ದಾರೆ.

ಬಿಜೆಪಿ ಪಾದಯಾತ್ರೆ 3

ಅದೇನೇ ಇರಲಿ, ಬಿಜೆಪಿ-ಜೆಡಿಎಸ್‌ನವರ ಈ ಪಾದಯಾತ್ರೆ ಕಾನೂನಾತ್ಮಕವಾಗಿಯೂ ಅಥವಾ ಅವರ ಪಕ್ಷ ಸಂಘಟನೆಯ ದೃಷ್ಟಿಯಿಂದಲೂ ಅಥವಾ ರಾಜಕೀಯವಾಗಿಯೂ ಯಾವುದೇ ಪ್ರಯೋಜನವನ್ನ ತಂದುಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ, ಬಿಜೆಪಿ-ಜೆಡಿಎಸ್‌ನವರೇ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಆ ಗಲಾಟೆ ಹಾಗೆಯೇ ಮುಂದುವರೆದಿದೆ. ಇನ್ನು, ಈ ಪಾದಯಾತ್ರೆಗೆ ಜನ ಬೆಂಬಲವೂ ದೊರೆತಿಲ್ಲ. ಹೆಚ್ಚಿನ ಜನರೂ ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ. ಕೇಳಿಬಂದ ವಿಷಯ ಏನಂದ್ರೆ, ಕೆಂಗೇರಿಯಲ್ಲಿ ಬಿಜೆಪಿ ಪಾದಯಾತ್ರೆ ಉದ್ಘಾಟನೆ ವೇಳೆ ಜನರನ್ನು ಸೇರಿಸಲು ತಲಾ 300 ರೂ. ಹಣ ಕೊಟ್ಟು ಜನರನ್ನು ಕರೆತಂದಿದ್ದರು ಎಂದು ಆರೋಪಿಸಲಾಗಿದೆ.

ಬಿಜೆಪಿಗರು ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ತಮ್ಮ ನೆಲೆಯನ್ನು ಹೆಚ್ಚಿಸಿಕೊಳ್ಳಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ, ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಹಾಗೂ ಕೆರಗೋಡು ಭಗವಾಧ್ವಜ ವಿಚಾರದಲ್ಲಿ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಅದು ಫಲಕೊಡಲಿಲ್ಲ. ಈಗ, ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರದೊಂದಿಗೆ ಅದೇ ಭಾಗದಲ್ಲಿ ಮತ್ತೆ ಸುಳ್ಳು ಪ್ರತಿಪಾದನೆ ಇಟ್ಟುಕೊಂಡು ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಜನ ಬಿಜೆಪಿಗರಿಗೆ ಮಣೆ ಹಾಕುತ್ತಿಲ್ಲ. ಬೇಕಾಗಿಯೋ-ಬೇಡದೆಯೋ ಬಿಜೆಪಿ ಜೊತೆ ಸೇರಿರುವ ಜೆಡಿಎಸ್‌ ಕೂಡ ಬಿಜೆಪಿಯ ಮಂಗಾಟಕ್ಕೆ ಬಲಿಯಾಗಿ, ತನ್ನ ಇದ್ದ ನೆಲೆಯನ್ನೂ ಕಳೆದುಕೊಳ್ಳುತ್ತಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಗಟ್ಟಿಗೊಳ್ಳುತ್ತಿದೆ. ಬಿಜೆಪಿ ಉರುಳಿಸಿದ ದಾಳವನ್ನು ತನ್ನಡೆಗೆ ತಿರುಗಿಸಿಕೊಂಡು ಲಾಭ ಮಾಡಿಕೊಳ್ಳುತ್ತಿದೆ. ಬಿಜೆಪಿಗರು ಆರಂಭಿಸಿದ ಈ ಪಾದಯಾತ್ರೆ ಬಿಜೆಪಿ-ಜೆಡಿಎಸ್‌ಗಿಂತ ಕಾಂಗ್ರೆಸ್‌ಗೆ ಹೆಚ್ಚು ಉಪಯೋಗವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವಂತೆ, ಪಕ್ಷ ಸಂಘಟನೆಯ ವಿಚಾರದಲ್ಲಿ ಹಿಂದುಳಿದಿದ್ದ ಕಾಂಗ್ರೆಸ್‌, ಈಗ ಜನಾಂದೋಲನ ಸಮಾವೇಶಗಳ ಹೆಸರಿನಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಸರ್ಕಾರ ರಚನೆಯಾದಾಗಿನಿಂದಲೂ ಆಂತರಿಕ ಅಸಮಾಧಾನ, ಭಿನ್ನಾಭಿಪ್ರಾಯ, ಡಿಸಿಎಂ ಹುದ್ದೆಗಳ ಕಿತ್ತಾಟದಲ್ಲಿ ನಿರತರಾಗಿದ್ದ ಕಾಂಗ್ರೆಸ್‌ ನಾಯಕರು, ಸಚಿವರು ಈಗ ಮೈಕೊಡವಿ ಎದ್ದಿದ್ದಾರೆ. ಸರ್ಕಾರದ ಕೆಲಸಗಳು ಹಾಗೂ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಮಿಗಿಲಾಗಿ, ಒಗ್ಗಟ್ಟಿನ ಪ್ರದರ್ಶನ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಹಾತೊರೆಯುತ್ತಿದ್ದ ಡಿ.ಕೆ ಶಿವಕುಮಾರ್ ಅವರೇ ಈಗ ಸಿದ್ದರಾಮಯ್ಯ ಪರವಾಗಿ, ಅವರ ಕುರ್ಚಿ ಉಳಿಸಲು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಜನಾಂದೋಲನ ಸಮಾವೇಶ

ಹೀಗಾಗಿ, ಆಗಾಗ್ಗೆ ಒಳಜಗಳಗಳಿಂದ ಅಲುಗಾಡುತ್ತಿದ್ದ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಈಗ ಮತ್ತಷ್ಟು ಭದ್ರವಾಗುತ್ತಿದೆ. ಸಿದ್ದರಾಮಯ್ಯ ಪರವಾಗಿ ಎಲ್ಲ ಸಚಿವರು – ನಾಯಕರೂ ಒಗ್ಗೂಡಿದ್ದಾರೆ. ಗಮನಾರ್ಹವೆಂದರೆ, ರಾಜ್ಯ ಬಿಜೆಪಿಗರು ಪಾದಯಾತ್ರೆ, ಸುಳ್ಳುಗಳ ಮೇಲೆ ಸುಳ್ಳು, ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದರೂ ಬಿಜೆಪಿ ರಾಷ್ಟ್ರ ನಾಯಕರು ಈ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ವಿರುದ್ದದ ರಾಜ್ಯ ಬಿಜೆಪಿಗರ ಪ್ರತಿಪಾದನೆಗೆ ಬಿಜೆಪಿಯ ಹೈಕಮಾಂಡ್‌ ಸೊಪ್ಪು ಹಾಕುತ್ತಿಲ್ಲ. ಇದೆಲ್ಲವನ್ನೂ ನೋಡಿದರೆ, ಬಿಜೆಪಿಯ ಪಾದಯಾತ್ರೆ ಖಡಾಖಂಡಿತವಾಗಿ ‘ಫ್ಲಾಪ್ ಶೋ’ ಆಗಿದೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದ್ದು, ರಾಜ್ಯದ ಕಾಂಗ್ರೆಸ್‌ ನಾಯಕರು ಒಗ್ಗಟ್ಟು ಮೆರೆದಿದ್ದಾರೆ. ಬಿಜೆಪಿಯ ಸುಳ್ಳು ಆರೋಪಗಳನ್ನು ಬಟಾಬಯಲು ಮಾಡುತ್ತಿದ್ದಾರೆ.

ಆದರೆ, ಇಲ್ಲಿ ಆಂತಕ ಹುಟ್ಟಿಸೋದು ರಾಜ್ಯಪಾಲರ ನಡೆ. ವರ್ಷಗಟ್ಟಲೇ ಹಲವಾರು ಅರ್ಜಿಗಳನ್ನ ತಮ್ಮ ಟೇಬಲ್ ಕೆಳಗೆ ಇಟ್ಟುಕೊಂಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಿದ್ದರಾಮಯ್ಯ ವಿರುದ್ಧ ಒಂದು ದೂರು ಬಂದ ತಕ್ಷಣ, ಅದನ್ನು ಪರಿಶೀಲಿಸದೆಯೇ ಅದೇ ದಿನ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು. ಅದೂ, ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ಸಿದ್ದರಾಮಯ್ಯನವರು ಹೋಗಲಿ, ಅವರ ಹೆಂಡತಿ ಅಥವಾ ಭಾವಮೈದ ಕಾನೂನು ಪ್ರಕಾರ ಅಥವಾ ನೈತಿಕವಾಗಿ ಏನಾದರೂ ತಪ್ಪು ಮಾಡಿದ್ದಕ್ಕೆ ಪುರಾವೆ ಇಲ್ಲದಿರುವಾಗ ರಾಜ್ಯಪಾಲರು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂದರೆ, ಬಿಜೆಪಿ ಮತ್ತು ಆರೆಸ್ಸೆಸ್‌ ಈ ದೇಶದಲ್ಲಿ ಎಲ್ಲಾ ನಿಯಮ, ಕಾನೂನು, ಸಂಸದೀಯ ನಡವಳಿಕೆಗಳನ್ನು ಗಾಳಿಗೆ ತೂರಿ, ರಾಜ್ಯಪಾಲರಿಂದ ಹಿಡಿದು ತಳಮಟ್ಟದ ಅಧಿಕಾರಿಗಳವರೆಗೆ ಎಲ್ಲರನ್ನೂ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಪ್ರಾಮಾಣಿಕರನ್ನ ಜೈಲಿಗೆ ಹಾಕುತ್ತೆ, ಕೊಲೆಗಡುಕರನ್ನ ಜೈಲಿಂದ ಬಿಡುಗಡೆ ಮಾಡುತ್ತೆ. ಅದನ್ನೇ, ಸಿದ್ದರಾಮಯ್ಯ ವಿರದ್ಧವೂ ಬಿಜೆಪಿ ರಾಜ್ಯಪಾಲರ ಮೂಲಕ ಮಾಡಿಸುತ್ತಿದೆ.

ಮತ್ತೊಂದು ವಿಚಾರ, ಬಿಜೆಪಿ ಹೇಗೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆಯೋ, ಅದೇ ರೀತಿ ಕಾಂಗ್ರೆಸ್‌ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದೂ ಸತ್ಯ. ಬಿಜೆಪಿಯ 40% ಕಮಿಷನ್‌ ಸರ್ಕಾರವನ್ನ, ಅದರ ದುರಾಡಳಿತವನ್ನ ಕೊನೆಗಾಣಿಸಿ ಅಂತ ಹೇಳಿದ್ದ ಕಾಂಗ್ರೆಸ್‌ ಈಗ ಅಧಿಕಾರಕ್ಕೆ ಬಂದು ತಾನು ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರವನ್ನ ನಿರ್ಣಾಯಕವಾಗಿ ಕೊನೆಗಾಣಿಸೋ ಒಂದಾದರೂ ಕ್ರಮ ತಗೊಂಡಿದಾರಾ? ಕಾಂಗ್ರೆಸ್‌ ಒಳ್ಳೆಯ ಆಡಳಿತ ಕೊಡೋ ಕೆಲಸ ಮಾಡ್ತಾ ಇದೆಯಾ? ಖಂಡಿತಾ ಇಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ದುರ್ಬಳಕೆ, ವರ್ಗಾವಣೆಗಳಂತಹ ಹಲವಾರು ವಿಚಾರಗಳು ನಡೆಯುತ್ತಲೇ ಇವೆ. ಅದನ್ನೂ ಈದಿನ.ಕಾಮ್‌ ವಿಸ್ತೃತವಾಗಿ ವರದಿ ಮಾಡುತ್ತಲೇ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...