ರಾಜ್ಯ ಸರ್ಕಾರದ ವಿರುದ್ಧ ಅದರಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರು ಸಮರ ಸಾರುತ್ತಿರುವ ಸಂದರ್ಭದಲ್ಲೇ ದೋಸ್ತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಜಿ ಟಿ ದೇವೇಗೌಡ ಮಾತನಾಡಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಜಿಟಿಡಿ ದಿಢೀರ್ ಆಗಿ ಸಿಎಂ ಸಿದ್ದರಾಮಯ್ಯ ಪರ ಬೆಂಬಲಕ್ಕೆ ನಿಂತಿರುವುದು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಮತ್ತು ಹಿರಿಯ ಮುಖಂಡ ಜಿ ಟಿ ದೇವೇಗೌಡ ಅವರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮೈಸೂರಿನಲ್ಲಿ ಏರುಧ್ವನಿಯಲ್ಲಿ ಅಬ್ಬರಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಅದರಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ಸಮರ ಸಾರುತ್ತಿರುವ ಸಂದರ್ಭದಲ್ಲೇ ಮೈತ್ರಿ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಜಿ ಟಿ ದೇವೇಗೌಡ ಮಾತನಾಡಿದ್ದಾರೆ.
ಜಿ ಟಿ ದೇವೇಗೌಡರು ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುವಾಗ, “ಮುಡಾ ಪ್ರಕರಣದಲ್ಲಿ ಯಾರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆಯೋ ಅವರೆಲ್ಲರೂ ರಾಜೀನಾಮೆ ಕೊಡಲಿ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೂಡ ರಾಜೀನಾಮೆ ಕೊಡಲಿ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ವಾದಿಸುತ್ತ ಹೋದರೆ, ರಾಜ್ಯದಲ್ಲಿ ಬಹುತೇಕ ರಾಜಕೀಯ ನಾಯಕರು ರಾಜೀನಾಮೆ ಕೊಡಬೇಕಾದೀತು. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ರಾಜೀನಾಮೆ ಕೇಳುವ ಎಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ” ಎಂದು ಗಟ್ಟಿ ಧ್ವನಿಯಲ್ಲಿ ಮಾತನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಳೆದ ಹಲವು ವರ್ಷಗಳಿಂದ ಮುಡಾದ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಜಿ ಟಿ ದೇವೇಗೌಡರ ಮಾತು ಸಹಜವಾಗಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಬಲ ತಂದಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ಕಿಡಿಕಾರಿದ್ದು, ಸಿದ್ದರಾಮಯ್ಯ ಕೂಡ ಎದುರಾಳಿಯನ್ನು ಗುಣಗಾನ ಮಾಡಿದ್ದು ಜೆಡಿಎಸ್-ಬಿಜೆಪಿ ಮೈತ್ರಿಗೆ ಕಿಡಿ ಹೊತ್ತಿಸಿದೆ.
ರಾಜಕೀಯವಾಗಿ ಜಿ ಟಿ ದೇವೇಗೌಡ ಮತ್ತು ಸಿದ್ದರಾಮಮಯ್ಯ ಬೇರೆ ಬೇರೆ ಪಕ್ಷದಲ್ಲಿದ್ದರೂ ಸತ್ಯ ಮತ್ತು ನ್ಯಾಯಯುತವಾಗಿ ಜಿಟಿಡಿ ಮಾತನಾಡಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ ಅಭಿಪ್ರಾಯ. ಜಿಟಿಡಿ ಉಪಸ್ಥಿತರಿದ್ದ ವೇದಿಕೆಯಲ್ಲೇ ಸಿದ್ದರಾಮಯ್ಯ ಮಾತನಾಡಿ, “ಜಿ ಟಿ ದೇವೇಗೌಡರು ತಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ತಾಯಿ ಚಾಮುಂಡೇಶ್ವರಿಯನ್ನು ಸಾಕ್ಷಿಯಾಗಿಟ್ಟುಕೊಂಡು ದಸರಾ ಹಬ್ಬದ ಬೃಹತ್ ಸಮಾರಂಭದಲ್ಲಿ ಸತ್ಯ ಮಾತನಾಡಿದ್ದಾರೆ. ನಾನೆಂದೂ ದ್ವೇಷದ ರಾಜಕೀಯ ಮಾಡಿದವನಲ್ಲ, ವಿರೋಧಿ ರಾಜಕಾರಣಿಗಳ ವೈಯಕ್ತಿಕ ಬದುಕು ಇಲ್ಲವೆ, ಅವರ ಕುಟುಂಬವನ್ನು ರಾಜಕೀಯ ಜಿದ್ದಾಜಿದ್ದಿಗೆ ಬಳಸಿಕೊಂಡವನಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿರುವ ಅನೇಕ ನಾಯಕರಿಗೆ ಜಿ ಟಿ ದೇವೇಗೌಡರು ಹೇಳಿರುವ ಸತ್ಯ ಗೊತ್ತಿದೆ. ಆದರೆ ತಮ್ಮ ಪಕ್ಷದ ಕೆಲವು ಹಿರಿಯ ನಾಯಕರ ಒತ್ತಡಕ್ಕೆ ಬಲಿಯಾಗಿ ಮೌನವಾಗಿದ್ದಾರೆ. ಅವರು ಕೂಡಾ ಮುಕ್ತವಾಗಿ ಮಾತನಾಡಬೇಕಾದ ಕಾಲ ಸನ್ನಿಹಿತವಾಗಿದೆ” ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್-ಬಿಜೆಪಿ ನಾಯಕರು ಸಮರ ಸಾರುತ್ತಿರುವ ಹೊತ್ತಿನಲ್ಲಿ ಜಿ ಟಿ ದೇವೇಗೌಡರು ಹೀಗೆ ಬಹಿರಂಗವಾಗಿ ಸಿದ್ದರಾಮಯ್ಯ ಪರ ನಿಂತಿರುವುದು, ಸೈಲೆಂಟಾಗಿದ್ದ ಜಿಟಿಡಿ ದಿಢೀರ್ ಆಗಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾತನಾಡಿರುವುದು ಹಾಗೆಯೇ ಜಿಟಿಡಿ ಮುನಿಸಿಗೆ ಅಸಲಿ ಕಾರಣ ಏನು ಎಂಬುವುದು ಕೂಡಾ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜೊತೆಗೆ ದಸರಾ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳಬಾರದಿತ್ತು ಎಂಬ ಟೀಕೆಗಳು ಕೂಡ ವ್ಯಕ್ತವಾಗಿವೆ.
ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಜಿ ಟಿ ದೇವೇಗೌಡ ಅವರ ಮುನಿಸು ಹೊಸದಲ್ಲ. ಈ ಹಿಂದೆಯೂ ಅವರು ಬಂಡಾಯ ಎದ್ದು ಪಕ್ಷಾಂತರದ ಮುನ್ಸೂಚನೆ ನೀಡಿದ್ದರು. ಅದಕ್ಕೆ ಹಲವು ಕಾರಣಗಳು ಇವೆ. ಮೈಸೂರು ರಾಜಕಾರಣದಲ್ಲಿ ಪ್ರಭಾವ ಹಾಗೂ ಹಿಡಿತ ಹೊಂದಿದ್ದ ಜಿ ಟಿ ದೇವೇಗೌಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಈಗಲೂ ಇದೆ.
ಈ ಸುದ್ದಿ ಓದಿದ್ದೀರಾ? ಯಾರು ಈ ಜಗ್ಗಿ ವಾಸುದೇವ್? ಈತ ನಿಜಕ್ಕೂ ಸದ್ಗುರುನಾ?
ಎಚ್ ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ವೇಳೆ ಜಿ ಟಿ ದೇವೇಗೌಡ ಅವರು ಸಹಕಾರಿ ಖಾತೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಇದಕ್ಕೆ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಹಾಗೆಯೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾಗಲೂ ಅದೂ ಈಡೇರಿಲ್ಲ. ಇದರಿಂದ ಬೇಸತ್ತು ದೇವೇಗೌಡ ಕುಟುಂಬದ ಜೊತೆಗೆ ಅಂತರ ಕಾಯ್ದುಕೊಂಡಿದ್ದರು.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಅಖಾಡಕ್ಕಿಳಿದು, ಸ್ವತಃ ಜಿಟಿಡಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಅಲ್ಲಿಗೆ ಜಿಟಿಡಿ ಬಂಡಾಯ ಶಮನ ಗೊಂಡಿತ್ತು.
ಕೈ ತಪ್ಪಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ!
ಕಳೆದ ವಿಧಾನಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾನು ಗೆದ್ದರೆ, ಅವರ ಪುತ್ರ ಹರೀಶ್ ಗೌಡ ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ನಡುವೆ ವಿರೋಧ ಪಕ್ಷದಲ್ಲಿದ್ದರುವ ಜಿಟಿಡಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಅದು ಅವರು ಕೈಸೇರಿಲ್ಲ. ಬದಲಾಗಿ ಸುರೇಶ್ ಬಾಬು ಪಾಲಾಗಿದೆ. ಇದು ಜಿಟಿಡಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗೆ ಪಕ್ಷದಲ್ಲೂ ಸೂಕ್ತ ಸ್ಥಾನಮಾನ ನೀಡಲಾಗಿಲ್ಲ ಎಂಬ ಅಸಮಾಧಾನ ಅವರಿಗಿದೆ. ಅಲ್ಲದೆ ಕುಮಾರಸ್ವಾಮಿ ಅವರು ತಮಗಿಂತ ಸಾ ರಾ ಮಹೇಶ್ಗೆ ಹೆಚ್ಚಿನ ಮಣೆ ಹಾಕುತ್ತಾರೆ ಎಂಬ ಬೇಸರವೂ ಜಿಟಿಡಿಗೆ ಎನ್ನಲಾಗಿದೆ.
ಮುಖ್ಯಮಂತ್ರಿಗಳ ಜೊತೆ ಚೆನ್ನಾಗಿರುವುದು ಜೆಟಿಡಿ ತಂತ್ರ
ಜಿ ಟಿ ದೇವೇಗೌಡರು ಏಕಾಏಕಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿರುವ ಬಗ್ಗೆ ಮೈಸೂರಿನ ಹಿರಿಯ ಪತ್ರಕರ್ತರೊಬ್ಬರು ಈ ದಿನ.ಕಾಮ್ ಜೊತೆ ಮಾತನಾಡಿ, “ಜಿಟಿಡಿ ರಾಜಕೀಯ ನೋಡಿದರೆ ಇಂತಹ ನಡೆ ಹೊಸದಲ್ಲ. ಜಿಟಿಡಿ ಹೇಳಿಕೆ ಹಿಂದೆ ಹೇಳಿಕೊಳ್ಳುವಂತಹ ಲಾಜಿಕ್ ಏನೂ ಇಲ್ಲ. ಯಾವುದೇ ಸರ್ಕಾರ ಬರಲಿ ಆ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಹೊಂದಲು ಜಿಟಿಡಿ ಬಯಸುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಅದೇ ದೃಷ್ಟಿಯಿಂದ. ಇದಕ್ಕೆ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತವೆ ಅಷ್ಟೇ” ಎಂದರು.
ಮುಂದುವರಿದು, “ಮುಡಾ ಫಲಾನುಭವಿ ಜಿಟಿಡಿ ಆಗಿದ್ದಾರೆ ಎನ್ನುವ ಆರೋಪಗಳಿವೆ. ಅವರದ್ದೂ ಎಷ್ಟೋ ನಿವೇಶನ ಇವೆ ಎಂದು ಸ್ಥಳೀಯ ನಾಯಕರು ಗಂಭೀರ ಆರೋಪ ಮಾಡುತ್ತಾರೆ. ಈ ಕ್ಷಣಕ್ಕೆ ಜಿಟಿಡಿ ಮಾತುಗಳು ರಾಜಕೀಯದಲ್ಲಿ ದೊಡ್ಡ ಪರಿಣಾಮ ಬೀರುತ್ತವೆ ಎನ್ನಲು ಆಗುವುದಿಲ್ಲ. ಜೆಡಿಎಸ್ ದೃಷ್ಟಿಯಿಂದ ಜಿಟಿಡಿ ಪಕ್ಷಕ್ಕೆ ಅವಶ್ಯಕವಾಗಿ ಬೇಕಿರುವ ನಾಯಕ. ಸಿದ್ದರಾಮಯ್ಯ ಎದುರಾಳಿ ಎನ್ನುವ ಕಾರಣಕ್ಕೆ ದೇವೇಗೌಡರು ಅವರ ಮನೆಗೆ ಹೋಗಿ ಬಂಡಾಯ ಶಮನ ಮಾಡಿದ್ದರು. ಚುನಾವಣೆ ಬಂದಾಗ ಇಂತಹ ತಂತ್ರಗಳು ಸಾಮಾನ್ಯ” ಎಂದು ವಿಶ್ಲೇಷಿಸಿದರು.
ಚಮಚಾಗಿರಿ ಭಾಷಣ ಎಂದ ಎಚ್ ವಿಶ್ವನಾಥ್
“ಚಮಚಾಗಿರಿಯ ಭಾಷಣ ಮತ್ತು ರಾಜಕಾರಣದ ಘಮಲಿನಿಂದಾಗಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ. ಜಿ ಟಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಬೂಟಾಟಿಕೆ ತರ ಕಾಣುತ್ತಿದೆ. ಅವರೂ ಮುಡಾ ಫಲಾನುಭವಿಯೇ. ಅಷ್ಟೆಲ್ಲ ಹೊಗಳುವ ಅಗತ್ಯ ಇರಲಿಲ್ಲ. ಮುಡಾ ಹಗರಣದ ಬಗ್ಗೆ ಇಷ್ಟು ದಿನ ಮಾತನಾಡದ ಜಿಟಿಡಿ ಈಗ ಏಕೆ ಬಾಯಿ ಬಿಟ್ಟಿದ್ದಾರೆ? ಅವರದ್ದೂ ಎಷ್ಟೋ ನಿವೇಶನ ಇವೆ ಎಂಬ ಮಾತುಗಳಿವೆ. ಎಲ್ಲ ರಾಜಕಾರಣಿಗಳೂ ಸೇರಿ ಮೈಸೂರನ್ನು ಕಳ್ಳರ ಸಂತೆಯಂತೆ ಬಿಂಬಿಸಿದ್ದಾರೆ” ಎಂದು ” ಎಂದು ಜೆಡಿಎಸ್ನ ಮಾಜಿ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ ಡಿ ದೇವೇಗೌಡ ಮತ್ತೆ ಅಖಾಡಕ್ಕೆ?
ದೋಸ್ತಿ ಪಕ್ಷದ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿರುವಾಗ ಜಿ ಟಿ ದೇವೇಗೌಡ ಮಾತುಗಳು ಮೈತ್ರಿಗೆ ಮುಜುಗರ ಸೃಷ್ಟಿಸಬಹುದು. ಈ ಹಿನ್ನೆಲೆಯಲ್ಲಿ ಸ್ವತಃ ಹೆಚ್ ಡಿ ದೇವೇಗೌಡರೇ ಮತ್ತೆ ಅಖಾಡಕ್ಕಿಳಿದು, ಜಿ ಟಿ ದೇವೇಗೌಡರ ಮುನಿಸನ್ನು ತಣಿಸಬಹುದು. ಕಾರಣ ಮೈಸೂರು ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ರಾಜಕಾರಣಿ. ಮೈಸೂರು ಜಿಲ್ಲೆಯ ರಾಜಕಾರಣದಲ್ಲೂ ಅವರಿಗೆ ಹಿಡಿತ ಇದೆ. ಹೀಗಾಗಿ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಎರಡು ಕ್ಷೇತ್ರಗಳನ್ನು ಹೊಂದಿರುವ ಅವರ ಕುಟುಂಬವನ್ನು ಕಡೆಗಣಿಸಿದರೆ ಜಿಲ್ಲೆಯಲ್ಲಿ ಜೆಡಿಎಸ್ಗೆ ಹಿನ್ನಡೆ ಉಂಟಾಗಲಿದೆ ಎನ್ನುವ ಎಚ್ಚರಿಕೆ ದೇವೇಗೌಡರ ಕುಟುಂಬಕ್ಕಿದೆ. ಈಗಾಗಲೇ ಜೆಡಿಎಸ್ ಮೂಲಗಳ ಪ್ರಕಾರ ದೇವೇಗೌಡರು ಜಿಟಿಡಿಗೆ ಫೋನ್ ಮೂಲಕ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿಯೂ ತಿಳಿದುಬಂದಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




