ಮುಂಬೈ ಮಹಾನಗರ ಪಾಲಿಕೆಗೆ (BMC) ಜನವರಿ 15ರಂದು ಚುನಾವಣೆ ನಡೆಯಲಿದೆ. ಪಾಲಿಕೆಯ ಒಟ್ಟು 227 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಗೆದ್ದು, ಮುಂಬೈ ಆಡಳಿತವನ್ನು ಉಳಿಸಿಕೊಳ್ಳುವುದು ಮತ್ತು ಪಡೆದುಕೊಳ್ಳುವುದು ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ. ಈ ನಡುವೆ, ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಒಡೆದಿರುವುದರಿಂದ, ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ.
ಮುಂಬೈ ಚುನಾವಣೆಗೆ ಹೊಸ ಮೈತ್ರಿಗಳು ಏರ್ಪಟ್ಟಿವೆ. ಎಂವಿಎ ಇಬ್ಬಾಗವಾಗಿದ್ದು, ಕಾಂಗ್ರೆಸ್, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (ವಿಬಿಎ) ಹಾಗೂ ಮತ್ತು ರಾಷ್ಟ್ರೀಯ ಸಮಾಜ ಪಕ್ಷ (ಆರ್ಎಸ್ಪಿ) ಮೈತ್ರಿಕೂಟ ರಚಿಸಿವೆ. ಇನ್ನು, ಎಂವಿಎಯಿಂದ ಹೊರ ನಡೆದಿರುವ ಶಿವಸೇನಾ (ಉದ್ದವ್ ಬಣ) ಮತ್ತು ಎನ್ಸಿಪಿ (ಶರದ್ ಬಣ)ವು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜೊತೆ ಮೈತ್ರಿ ಮಾಡಿಕೊಂಡು, ಹೊಸ ಮೈತ್ರಿಕೂಟದಲ್ಲಿ ಸ್ಪರ್ಧೆಗಿಳಿದಿವೆ. ಇದೆಲ್ಲದರ ನಡುವೆ, ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ, ಶಿವಸೇನಾ (ಶಿಂಧೆ ಬಣ) ಹಾಗೂ ಎನ್ಸಿಪಿ (ಅಜಿತ್ ಬಣ)ದ ಮಹಾಯುತಿಯು ಒಗ್ಗಟ್ಟಿನಿಂದ ಸ್ಪರ್ಧೆಗೆ ಇಳಿದಿದೆ.
ರಾಜ್ ಠಾಕ್ರೆ ಜೊತೆಗಿನ ಎಂವಿಎ ಮೈತ್ರಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಶಿವಸೇನೆ (ಉದ್ಧವ್ ಬಣ)ವು ಮರಾಠಿ ಭಾಷೆ ಮತ್ತು ಸಂಸ್ಕೃತಿಯನ್ನು ‘ಸಂರಕ್ಷಿಸಲು’ ಮೈತ್ರಿ ಅಗತ್ಯವೆಂದು ವಾದಿಸಿತ್ತು. ಈ ಕಾರಣದಿಂದಾಗ, ಎಂವಿಎ ವಿಭಜನೆಗೊಂಡಿದೆ. ಕಾಂಗ್ರೆಸ್ ಪ್ರತ್ಯೇಕಗೊಂಡಿದ್ದು, ಆರ್ಎಸ್ಪಿ ಮತ್ತು ವಿಬಿಎ ಜೊತೆಗಿನ ಮೈತ್ರಿಯಲ್ಲಿ ಸ್ಪರ್ಧಿಸಿದೆ. ಆದಾಗ್ಯೂ, ಈ ಎಂವಿಎ ಮೈತ್ರಿಯು ಮುಂಬೈ ಚುನಾವಣೆಯಲ್ಲಿ ಮಾತ್ರವೇ ವಿಭಜನೆಯಾಗಿದೆ. ರಾಜ್ಯ ಮಟ್ಟದಲ್ಲಿ ಅಸ್ತಿತ್ವದಲ್ಲಿದೆ ಎಂದು ಕಾಂಗ್ರೆಸ್ ಮತ್ತು ಶಿವಸೇನಾ ಪ್ರತಿಪಾದಿಸಿವೆ.
ಎಂವಿಎ ವಿಭಜನೆಯಿಂದಾಗಿ ಮುಂಬೈ ಪಾಲಿಕೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದಾಗ್ಯೂ, 32 ಸ್ಥಾನಗಳಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಯಾವುದೇ ಪಕ್ಷವು ಸ್ಪರ್ಧಿಸದ ಕಾರಣ, ಆ ಕ್ಷೇತ್ರಗಳಲ್ಲಿ ಮಹಾಯುತಿ ಮತ್ತು ಶಿವಸೇನಾ (ಉದ್ಧವ್ ಬಣ) ನೇತೃತ್ವದ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇರಲಿದೆ. ಇಲ್ಲಿ, ತೃತೀಯ ರಂಗದ ಸ್ಪರ್ಧೆ ಇಲ್ಲವೆಂದು ವರದಿಯಾಗಿದೆ.
ಒಟ್ಟು 227 ಸ್ಥಾನಗಳ ಚುನಾವಣೆಯಲ್ಲಿ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್ 165, ವಿಬಿಎ 62 ಹಾಗೂ ಆರ್ಎಸ್ಪಿ 10 ಸ್ಥಾನಗಳನ್ನು ಹಂಚಿಕೊಂಡಿದ್ದವು. ಆದರೆ, ವಿಬಿಎ ತನ್ನ ಪಾಲಿನ 62 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. 21 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೆಣಗಾಡುತ್ತಿದೆ. ವಿಬಿಎ 46 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಆರ್ಎಸ್ಪಿ ತನ್ನ ಪಾಲಿನ 10 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಮಾತ್ರವೇ ಅಭ್ಯರ್ಥಿಗಳನ್ನು ಘೋಷಿಸಿದೆ, ಕಾಂಗ್ರೆಸ್ ಕೂಡ ಈವರೆಗೆ 143 ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಲೇಖನ ಓದಿದ್ದೀರಾ?: ಶರದ್ ಪವಾರ್ – ಅದಾನಿ ಸ್ನೇಹವೂ, ಪೊಲಿಟಿಕಲ್-ಕಾರ್ಪೊರೇಟ್ ಸಂಬಂಧವೂ!
ನಾಮಪತ್ರ ಸಲ್ಲಿಕೆಯ ಅವಧಿ ಡಿಸೆಂಬರ್ 30ಕ್ಕೆ ಮುಗಿದಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 195 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ 32 ಸ್ಥಾನಗಳಲ್ಲಿನ ಸ್ಪರ್ಧೆಯಿಂದ ಹಿಂದೆ ಸರಿದಿವೆ. ಈ ಕ್ಷೇತ್ರಗಳಲ್ಲಿ ಮೂರನೇ ರಂಗದ ಸ್ಪರ್ಧಿ ಇಲ್ಲದ ಕಾರಣ, ಮಹಾಯುತಿ ಮತ್ತು ಶಿವಸೇನಾ (ಉದ್ಧವ್ ಬಣ)ದ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಇರಲಿದೆ.
32 ಸ್ಥಾನಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಸ್ಪರ್ಧೆ ಇಲ್ಲದ ಕಾರಣ, ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವುದಿಲ್ಲ. ಇದರಿಂದ ಠಾಕ್ರೆಗಳ ಮೈತ್ರಿಕೂಟಕ್ಕೆ ಅನುಕೂಲವಾಗಲಿದೆ ಎಂದು ಶಿವಸೇನೆ (ಉದ್ದವ್ ಬಣ)ದ ನಾಯಕರೊಬ್ಬರು ಹೇಳಿದ್ದಾರೆ.
“ವಿಬಿಎ ತನ್ನ ಪಾಲಿನ 16 ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಕಾಂಗ್ರೆಸ್ಗೆ ಮೊದಲೇ ತಿಳಿದಿತ್ತು. ಆದಾಗ್ಯೂ, ಆ ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳನ್ನು ಘೋಷಿಸದೆ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಂಡಿದೆ. ಇದು, ನಾಮಪತ್ರಗಳ ಪರಿಶೀಲನೆ ಮುಗಿದ ನಂತರ ಎಲ್ಲರಿಗೂ ಸ್ಪಷ್ಟವಾಗುತ್ತದೆ” ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.




