ಕೈ ಗಡಿಯಾರದ (ವಾಚ್) ವಿಚಾರವಾಗಿ ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ವಾಚ್ ವಿಚಾರದಲ್ಲಿ ಬಿಜೆಪಿಗರಿಗೆ ಏನೂ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ತಮ್ಮ ಚುನಾವಣಾ ನಾಮಪತ್ರದಲ್ಲಿ ದುಬಾರಿ ವಾಚ್ ವಿಚಾರವನ್ನು ಉಲ್ಲೇಖಿಸಿಲ್ಲ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಉತ್ತರಿಸಿರುವ ಡಿ.ಕೆ ಶಿವಕುಮಾರ್, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನನ್ನ ಅಫಿಡವಿಟ್ ಬಗ್ಗೆ ನನಗೆ ಗೊತ್ತಿದೆ. ಅವರಿಗೆ ಏನು ಗೊತ್ತು? ಗಡಿಯಾರಗಳಿಗೆ ಹಣ ಪಾವತಿಸಿದ್ದು ನಾನೇ. ನಾನು ಎಲ್ಲ ವಿವರಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸಿದ್ದೇನೆ. ನಾನು ರೋಲೆಕ್ಸ್ ಗಡಿಯಾರದ ಖರೀದಿಯನ್ನೂ ಬಹಿರಂಗಪಡಿಸಿದ್ದೇನೆ. ನಾರಾಯಣಸ್ವಾಮಿಯಿಂದ ನನಗೆ ಕಲಿಯಲು ಏನೂ ಇಲ್ಲ” ಎಂದಿದ್ದಾರೆ.
ನಾರಾಯಣಸ್ವಾಮಿ ಅವರ ಗಡಿಯಾರ ಕದ್ದಿದ್ದಾರೆ ಎಂಬ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, “ಹೌದು, ನಾನು ಅವರ ಮನೆಯಿಂದ ಕದ್ದಿದ್ದೇನೆ!” ಎಂದು ವ್ಯಂಗ್ಯವಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಗಾಂಧಿ ಮತ್ತು ನಾರಾಯಣ ಗುರುಗಳ ಭೇಟಿಗೆ ಮೂಲವಾಗಿತ್ತು ʼವೈಕಂ ಹೋರಾಟʼ
ಮಹಿಳಾ ಉದ್ಯೋಗಿಗಳ ಸಮಾವೇಶದ ಕುರಿತು ವಿವರಿಸಿದ ಶಿವಕುಮಾರ್, “ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥರಾಗಿದ್ದಾರೆ. ಅವರು ಪುರುಷರಿಗಿಂತ ಹೆಚ್ಚು ಶಿಸ್ತುಬದ್ಧರಾಗಿದ್ದಾರೆ. ನಮ್ಮ ಸರ್ಕಾರ ಮಹಿಳಾ ಉದ್ಯೋಗಿಗಳ ಸಂಘಟನಾ ಕಾರ್ಯವನ್ನು ಬೆಂಬಲಿಸುತ್ತದೆ” ಎಂದಿದ್ದಾರೆ.




