ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆ ಪ್ರಕ್ರಿಯೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಗೆಲುವು ಸಾಧಿಸಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ವೇಳೆ ಪ್ರಾಣೇಶ್ v/s ಗಾಯತ್ರಿ ಪ್ರಕರಣ ಮತ್ತೆ ಮುನ್ನೆಲೆಗೆ ಬರುತ್ತಿದೆ. ಗಾಯತ್ರಿ ಶಾಂತೇಗೌಡ ಅವರ ಮರು ಮತ ಎಣಿಕೆ ಫಲಿತಾಂಶವು ಇನ್ನೂ ಮುಚ್ಚಿದ ಲಕೋಟೆಯಲ್ಲೇ ಇದೆ.
ಮಾಲೂರಿನಲ್ಲಿ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅವರು ಬಿಜೆಪಿಯ ಪ್ರತಿಸ್ಪರ್ಧಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಹೆಚ್ಚಿನ ಮತಗಳನ್ನು ಪಡೆದಿರುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದ್ದು ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ.
ಇದನ್ನು ಓದಿದ್ದೀರಾ? ಪ್ರಾಣೇಶ್ v/s ಗಾಯತ್ರಿ ಪ್ರಕರಣ | ಮರುಎಣಿಕೆ ನಡೆದು 7 ತಿಂಗಳು! ಲಕೋಟೆಯಲ್ಲೇ ಇದೆ ಫಲಿತಾಂಶ
2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ 50, 955 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮಂಜುನಾಥ ಗೌಡ 50, 707 ಮತ ಗಳಿಸಿದ್ದರು. ಅಂದರೆ ಕೇವಲ 248 ಮತಗಳಿಂದ ನಂಜೇಗೌಡ ಗೆಲುವು ಪಡೆದಿದ್ದರು. ಆದರೆ ಮಂಜುನಾಥ ಗೌಡ ನ್ಯಾಯಾಲಯದಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು. ಮತಗಳ ಮರುಎಣಿಕೆಗೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಕೂಡಾ ಮತಗಳ ಮರು ಎಣಿಕೆ ಮತ್ತು ಫಲಿತಾಂಶಗಳನ್ನು ಹೊಸದಾಗಿ ಘೋಷಿಸಲು ಹೈಕೋರ್ಟ್ ಆದೇಶಿಸಿತು.
ಅದಾದ ಬಳಿಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂಜೇಗೌಡ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಮೇಲ್ಮನವಿಯನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ಮರು ಮತ ಎಣಿಕೆಯ ಫಲಿತಾಂಶವನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಪಡೆದಿತ್ತು. ನಿನ್ನೆ ಕಕ್ಷಿದಾರರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆ ತೆರೆದು ಮರು ಎಣಿಕೆ ಮಾಡಿದ ಬಳಿಕವೂ ನಂಜೇಗೌಡ ಅವರೇ ಗೆದ್ದಿದ್ದಾರೆ ಎಂದು ಕೋರ್ಟ್ ಹೇಳಿದೆ. ಈ ನಡುವೆ ಮರು ಮತ ಎಣಿಕೆ ನಡೆದು ಹತ್ತು ತಿಂಗಳ ಮೇಲಾದರೂ ಪ್ರಾಣೇಶ್ v/s ಗಾಯತ್ರಿ ಪ್ರಕರಣದ ಫಲಿತಾಂಶ ಪ್ರಕಟವಾಗದಿರುವುದು ಚರ್ಚೆಗೆ ಒಳಗಾಗುತ್ತಿದೆ.
2021ರ ಡಿಸೆಂಬರ್ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದರು. ಮರು ಮತ ಎಣಿಕೆ ಕೋರಿ ಗಾಯತ್ರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ ಮತಗಳನ್ನು ಪರಿಗಣಿಸಬಾರದಿತ್ತು ಎಂದು ಗಾಯತ್ರಿ ಹೇಳಿದ್ದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ನ ಕೆ ವೈ ನಂಜೇಗೌಡ ಶಾಸಕ ಸ್ಥಾನ ಅಸಿಂಧು, ಮತಗಳ ಮರು ಎಣಿಕೆಗೆ ಹೈಕೋರ್ಟ್ ಸೂಚನೆ
ಹೈಕೋರ್ಟ್ ಆದೇಶದಂತೆ 2025ರ ಫೆಬ್ರವರಿಯಲ್ಲಿ ಮತ ಮರು ಎಣಿಕೆ ನಡೆದಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ಈವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಚುನಾವಣಾ ಆಯೋಗ ಮೊಹರು ಮಾಡಿದ ಲಕೋಟೆಯಲ್ಲಿ ಫಲಿತಾಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ವಿಚಾರಣೆ ಮುಂದುವರೆದಿದೆ.
ಈ ಬಗ್ಗೆ ಈ ಹಿಂದೆ ಈ ದಿನ ಡಾಟ್ ಕಾಂಗೆ ಪ್ರತಿಕ್ರಿಯೆ ನೀಡಿದ ಗಾಯತ್ರಿ ಶಾಂತೇಗೌಡ, “ಕೋರ್ಟ್ಗಳು ಒಂದೊಂದು ಪ್ರಕರಣದಲ್ಲಿ ಒಂದೊಂದು ಬಗೆಯಾಗಿ ವರ್ತಿಸುತ್ತಿವೆ. ನಂಜೇಗೌಡ v/s ಮಂಜುನಾಥ್ ಗೌಡ ಪ್ರಕರಣದಲ್ಲಿ ಎರಡೇ ವರ್ಷದಲ್ಲಿ ಮರು ಎಣಿಕೆಗೆ ಆದೇಶ ಬಂದಿದೆ. ಅಷ್ಟೇ ಅಲ್ಲ ವಿಜೇತ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗಿದೆ” ಎಂದು ತಿಳಿಸಿದರು.





