ಮೂರು ತಿಂಗಳ ನಂತರ ಸೋಲು ಕಂಡ ಬಳಿಕ ಮೊದಲ ಬಾರಿಗೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಮೌನ ಮುರಿದಿದ್ದು, 2025ರ ನವೆಂಬರ್ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ್ ಅನ್ನು ಸೋಲಿಸಲು ಎನ್ಡಿಎ 40,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ತೇಜಸ್ವಿ, “ಚುನಾವಣೆಗೆ ಮುನ್ನ ಎನ್ಡಿಎ ಸರ್ಕಾರವು 40,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಲೂ 1.4 ಕೋಟಿ ಮಹಿಳೆಯರಿಗೆ ತಲಾ 10,000 ರೂ.ಗಳನ್ನು ನೀಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ‘ಬಿಜೆಪಿ ಏಜೆಂಟ್’ : ತೇಜಸ್ವಿ ಯಾದವ್
“ಪ್ರಜಾಪ್ರಭುತ್ವದಲ್ಲಿ ಜನರು ಸೋತಿದ್ದಾರೆ. ನೀವು ಪ್ರಜಾಪ್ರಭುತ್ವವನ್ನು ಭಯ ಮತ್ತು ಬೆದರಿಕೆಯ ಆಡಳಿತವನ್ನಾಗಿಸಿದ್ದೀರಿ” ಎಂದು ಬಿಜೆಪಿ ಆಡಳಿತವನ್ನು ಟೀಕಿಸಿದರು.
ಸುಪ್ರೀಂ ಮೆಟ್ಟಿಲೇರಿದ ಪ್ರಶಾಂತ್ ಕಿಶೋರ್
ಈ ನಡುವೆ ಚುನಾವಣಾ ತಂತ್ರಜ್ಞ, ರಾಜಕಾರಣಿ ಜನ್ ಸುರಾಜ್ನ ಸ್ಥಾಪಕ ಪ್ರಶಾಂತ್ ಕಿಶೋರ್ ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹೊಸದಾಗಿ ಚುನಾವಣೆ ನಡೆಸುವಂತೆ ಕೋರಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಇಂದು (ಫೆಬ್ರವರಿ 6) ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ನಡೆಸಲಿದೆ.
ಬಿಹಾರ ಚುನಾವಣೆಯಲ್ಲಿ ಎನ್ಡಿಎ 202 ಸ್ಥಾನಗಳನ್ನು ಗೆದ್ದರೆ, ಆರ್ಜೆಡಿ ನೇತೃತ್ವದ ಮಹಾಘಟಬಂಧನ್ 243 ಸದಸ್ಯ ಬಲದ ಸದನದಲ್ಲಿ ಕೇವಲ 35 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಪ್ರಶಾಂತ್ ಕಿಶೋರ್ನ ರಾಜಕೀಯ ಸಂಘಟನೆಯಾದ ಜನ್ ಸುರಾಜ್ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಎಲ್ಲೂ ಗೆದ್ದಿಲ್ಲ. ಚುನಾವಣಾ ಆಯೋಗ ತರಾತುರಿಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸಿದ ಬಳಿಕ ಚುನಾವಣೆ ನಡೆದು ಬಂದಿರುವ ಫಲಿತಾಂಶವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಗೆಯೇ ಬಿಹಾರ ಸರ್ಕಾರವು ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯ ಹೆಸರಿನಲ್ಲಿ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ತಲಾ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದೂ ಜನ್ ಸುರಾಜ್ ಪಕ್ಷ ದೂರಿದೆ. ಈ ಯೋಜನೆಯನ್ನು ಚುನಾವಣೆಯಲ್ಲಿ ಮತ ಪಡೆಯಲೆಂದೇ ಚುನಾವಣೆಗೂ ಮುನ್ನ ಜಾರಿಗೊಳಿಸಲಾಗಿದೆ. ಆದ್ದರಿಂದ, ಚುನಾವಣೆಗಳನ್ನು ರದ್ದುಗೊಳಿಸಿ ಹೊಸದಾಗಿ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯಲ್ಲಿ ಹೇಳಲಾಗಿದೆ.





