ಪಶ್ಚಿಮ ಬಂಗಾಳದಲ್ಲಿ ಈವರೆಗೆ ಸುಮಾರು 14 ಲಕ್ಷ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಫಾರ್ಮ್ಗಳು ಸಂಗ್ರಹಿಸಲು ಅರ್ಹವಲ್ಲದ ಫಾರ್ಮ್ಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.
ಮತದಾರರು ಪತ್ತೆಯಾಗದಿರುವುದರಿಂದ, ನಕಲಿ ಉಲ್ಲೇಖ ಆಗಿರುವುದರಿಂದ, ಮೃತಪಟ್ಟಿರುವುದರಿಂದ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದರಿಂದ ಈ ಫಾರ್ಮ್ಗಳನ್ನು ‘ಸಂಗ್ರಹಿಸಲು ಅರ್ಹವಲ್ಲದ’ ಫಾರ್ಮ್ಗಳೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? SIR | ಕೆಲಸದ ಒತ್ತಡದಿಂದಾಗಿ 6 ರಾಜ್ಯಗಳಲ್ಲಿ 15 ಬಿಎಲ್ಒಗಳ ಸಾವು: ವಿಪಕ್ಷಗಳ ಆಕ್ರೋಶ
“ಮಂಗಳವಾರ ಮಧ್ಯಾಹ್ನದ ವೇಳೆಗೆ, ಸಂಗ್ರಹಿಸಲು ಅರ್ಹವಲ್ಲದ ಫಾರ್ಮ್ಗಳ ಸಂಖ್ಯೆ 13.92 ಲಕ್ಷ ಆಗಿದೆ. ಈ ಸಂಖ್ಯೆ ಪ್ರತಿದಿನವೂ ಏರುತ್ತಲೇ ಹೋಗುವ ಸಾಧ್ಯತೆಯಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಸೋಮವಾರ ಸಂಜೆ 10.33 ಸಂಗ್ರಹಿಸಲು ಅರ್ಹವಲ್ಲದ ಫಾರ್ಮ್ಗಳ ಸಂಖ್ಯೆಯನ್ನು ಗುರುತಿಸಲಾಗಿತ್ತು.
ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಫಾರ್ಮ್ಗಳನ್ನು ವಿತರಿಸುವಲ್ಲಿ ಮತ್ತು ಅಗತ್ಯ ವಿವರಗಳನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಗಾಗಿ 80,600ಕ್ಕೂ ಹೆಚ್ಚು ಬಿಎಲ್ಒಗಳು, ಸುಮಾರು 8,000 ಮೇಲ್ವಿಚಾರಕರು, 3,000 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು 294 ಚುನಾವಣಾ ನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಹಾರದಲ್ಲಿ ಚುನಾವಣೆಗೂ ಮುನ್ನ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ 64 ಲಕ್ಷಕ್ಕೂ ಅಧಿಕ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ ಬಹುತೇಕರು ಅರ್ಹರು. ಆದರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ. ಚುನಾವಣೆಗೂ ಮುನ್ನ ತರಾತುರಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದೂ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ವಿವಾದಾತ್ಮಕ ಎಸ್ಐಆರ್ ನಂತರ ಬಿಹಾರದ ಅಂತಿಮ ಮತದಾರರ ಪಟ್ಟಿ ಪ್ರಕಟ
ಈ ವಿರೋಧಗಳ ನಡುವೆಯೂ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು ಈ ಪೈಕಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಮುಂದಿನ ವರ್ಷದಲ್ಲೇ ಚುನಾವಣೆ ನಡೆಯಲಿದೆ.
ಇಷ್ಟು ಮಾತ್ರವಲ್ಲದೆ ಈ ಪ್ರಕ್ರಿಯೆಯ ಒತ್ತಡದಿಂದಾಗಿ ಈಗಾಗಲೇ 15ರಷ್ಟು ಬಿಎಲ್ಒಗಳು ಸಾವನ್ನಪ್ಪಿದ್ದಾರೆ. ಕೆಲವರು ಒತ್ತಡದಿಂದಾಗಿ ಹೃದಯಾಘಾತಕ್ಕೆ ಒಳಗಾಗಿದ್ದು, ಇನ್ನು ಕೆಲವರು ಒತ್ತಡ ಹೆಚ್ಚಾಗಿದೆ ಎಂದು ದೂರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶ, ಗುಜರಾತ್ನ ನಾಲ್ವರು, ಪಶ್ಚಿಮ ಬಂಗಾಳದ ಮೂವರು, ರಾಜಸ್ಥಾನದಲ್ಲಿ ಇಬ್ಬರು ಮತ್ತು ಕೇರಳ, ತಮಿಳುನಾಡಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.





