ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಮಾತನಾಡುವುದು ನನ್ನ ಹಕ್ಕು. ಆದರೆ ನನಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾನು ವಿರೋಧ ಪಕ್ಷದ ನಾಯಕ, ಸದನದಲ್ಲಿ ಮಾತನಾಡುವುದು ನನ್ನ ಹಕ್ಕು. ಆದರೆ ನನಗೆ ಅವಕಾಶವಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?
ಇನ್ನು ಸದನದ ಮೊದಲ ದಿನವೇ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸಂಸದರು ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ಒತ್ತಾಯಿಸಿದ್ದಾರೆ. ವಿಪಕ್ಷಗಳು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದು ಎರಡು ಬಾರಿ ಸದನವನ್ನು ಮುಂದೂಡಲಾಗಿದೆ.
ಈ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ಪ್ರಶ್ನೆ ಏನೆಂದರೆ ರಕ್ಷಣಾ ಸಚಿವರು ಮತ್ತು ಅವರ (ಬಿಜೆಪಿ) ಜನರಿಗೆ ಮಾತನಾಡಲು ಅವಕಾಶವಿದೆ. ಅದರೆ ವಿರೋಧ ಪಕ್ಷದವರು ಏನೇ ಮಾತನಾಡಲು ಬಯಸಿದರೂ ಅವಕಾಶವಿಲ್ಲ. ವಿರೋಧ ಪಕ್ಷದ ಸಂಸದರು ಕೇವಲ ಸಂಕ್ಷಿಪ್ತ ಹೇಳಿಕೆಗಳನ್ನು ನೀಡಲು ಬಯಸಿದ್ದರು. ಆದರೆ ಅದಕ್ಕೂ ಅವಕಾಶ ನಿರಾಕರಿಸಲಾಗಿದೆ” ಎಂದರು.
ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು. “ಪ್ರಧಾನಿ ಒಂದು ಕ್ಷಣ ಬಂದು ಆಮೇಲೆ ಸದನದಿಂದ ಹೊರಗೆ ಓಡಿಹೋದರು” ಎಂದರು.
ಇನ್ನು ಪ್ರಶ್ನೋತ್ತರ ಅವಧಿಯ ನಂತರ ಸಮಸ್ಯೆಗಳ ಬಗ್ಗೆ ಮಾತನಾಡಲು ಸದಸ್ಯರಿಗೆ ಅವಕಾಶ ನೀಡಲಾಗುವುದು. ನೋಟಿಸ್ ಸಲ್ಲಿಸುವ ಯಾವುದೇ ಸದಸ್ಯರಿಗೆ ಮಾತನಾಡಲು ಸಮಯ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ.





