ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ನಡುವೆಯೇ ನಿಶಾಂತ್ ಭಾನುವಾರ ಸಂಜೆ ಸಾರ್ವಜನಿಕ ಸಭೆಯೊಂದರಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಭಾನುವಾರ ಸಂಜೆ ನಿಗದಿಯಾಗಿರುವ ‘ನಿಶಾಂತ್ ಸಂವಾದ’ ಘೋಷಣೆಯ ಪೋಸ್ಟರ್ಗಳು ಜೆಡಿ(ಯು) ಕಚೇರಿಯ ಸುತ್ತಮುತ್ತ ಕಂಡುಬಂದಿದೆ.
ಜೆಡಿ(ಯು) ಮುಖ್ಯಸ್ಥರ 40 ವರ್ಷದ ಏಕೈಕ ಪುತ್ರ ಈ ಹಿಂದಿನಿಂದಲೂ ರಾಜಕೀಯ ಪ್ರವೇಶದ ಪ್ರಶ್ನೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿಯೂ ನಿಶಾಂತ್ ರಾಜಕೀಯ ಸೇರುವ ಬಗ್ಗೆ ವದಂತಿಗಳು ಹರಡಿದ್ದವು ಈ ಬಗ್ಗೆ ಪಟನಾ ಮಾರುಕಟ್ಟೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ನಿಶಾಂತ್ ಪ್ರಶ್ನೆಯನ್ನು ನಿರ್ಲಕ್ಷಿಸಿದ್ದರು.
ಇದನ್ನು ಓದಿದ್ದೀರಾ? ಅಪರಾಧಗಳನ್ನು ನಿಯಂತ್ರಿಸಲಾಗದಿದ್ದರೆ, ನಿತೀಶ್ ಪುತ್ರ ನಿಶಾಂತ್ಗೆ ಜವಾಬ್ದಾರಿ ಹಸ್ತಾಂತರಿಸಲಿ: ಮಾಜಿ ಸಿಎಂ ರಾಬ್ರಿ ದೇವಿ
“ನಾನು ಆಧ್ಯಾತ್ಮಿಕತೆಯತ್ತ ಸಾಗುತ್ತಿದ್ದೇನೆ. ಹರೇ ರಾಮ ಹರೇ ಕೃಷ್ಣ ಭಜನೆಯನ್ನು ಕೇಳಲು ಸ್ಪೀಕರ್ ಖರೀದಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಪ್ರತಿದಿನ ಬೆಳಿಗ್ಗೆ ನನ್ನ ಫೋನ್ನಲ್ಲಿ ಈ ಭಜನೆಯನ್ನು ಕೇಳುತ್ತೇನೆ. ಹೊಸ ಸಾಧನದೊಂದಿಗೆ, ನಾನು ಭಜನೆಯನ್ನು ಇನ್ನಷ್ಟು ಸುಲಭವಾಗಿ ಕೇಳಲು ಈ ಸ್ಪೀಕರ್ ನನಗೆ ಸಹಾಯ ಮಾಡುತ್ತದೆ” ಎಂದು ಹೇಳಿದ್ದರು.
ಜೆಡಿಯು ಕಚೇರಿ ಬಳಿಯಿರುವ ಪೋಸ್ಟರ್ನಲ್ಲಿ, “ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಾರಂಭಿಸಿದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ” ಎಂದು ಬರೆಯಲಾಗಿದೆ.
ಇನ್ನು ಆರ್ಜೆಡಿಯ ತೇಜಸ್ವಿ ಯಾದವ್ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಂತಹ ರಾಜ್ಯದ ಯುವ ನಾಯಕರು ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ನಿಶಾಂತ್ ರಾಜಕೀಯ ಪ್ರವೇಶದ ಬಗ್ಗೆ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳಬೇಕು, ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಶುರುವಾಗಿದೆ.





