ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸುದ್ದಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮಾಧ್ಯಮಗಳು ನಾಯಕತ್ವ ಬದಲಾವಣೆ ಬಗ್ಗೆ ನಿರಂತರ ಸುದ್ದಿ ಮಾಡುತ್ತಿವೆ. ವರದಿ, ಗೊಂದಲ, ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ‘ಮುಖ್ಯಮಂತ್ರಿ ಆಗಲು ಆತುರವಿಲ್ಲ’ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಲವು ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚುತ್ತಿವೆ. ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ‘ನಾನು ಮುಖ್ಯಮಂತ್ರಿಯಾಗುವ ಸಮಯ ಬಂದಿದೆ’ ಎಂಬುದಾಗಿ ಯಾವತ್ತೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಇಷ್ಟಬಂದಂತೆ ತಿರುಚಿ ಪ್ರಸಾರ ಮಾಡಿದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದಿದ್ದಾರೆ.
“ನಾನು ಸಾರ್ವಜನಿಕ ಕುಂದುಕೊರತೆ ಆಲಿಸಲು ಲಾಲ್ಬಾಗ್ಗೆ ತರಳಿದ್ದಾಗ, ವ್ಯಕ್ತಿಯೊಬ್ಬರು ನನ್ನನ್ನು ಮುಖ್ಯಮಂತ್ರಿಯಾಗಿ ನೋಡುವ ಬಯಕ ವ್ಯಕ್ತಪಡಿಸಿದ್ದರು. ‘”ಸರ್, ನೀವು ಪಕ್ಷದ ಏಳಿಗೆಗಾಗಿ 40 ವರ್ಷಗಳಿಂದ ಶ್ರಮಿಸಿದ್ದೀರಿ. ನೀವು ಮುಖ್ಯಮಂತ್ರಿಯಾಗುವ ಸಮಯ ಹತ್ತಿರ ಬಂದಿದೆಯೇ’ ಎಂದವರು ಪ್ರಶ್ನಿಸಿದರು. ಆದರೆ, ಆ ಸಂವಾದವನ್ನು ವರದಿ ಮಾಡಿದ ಮಾಧ್ಯಮಗಳು ಸಂದರ್ಭವನ್ನು ತಿರುಚಿವೆ” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
“ನಾನು ಮುಖ್ಯಮಂತ್ರಿ ಆಗುವ ಸಮಯ ಬಂದಿದೆ ಎಂಬ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಅದು ಕೇವಲ ನಾಗರಿಕ ವ್ಯಕ್ತಪಡಿಸಿದ ಬಯಕೆ. ಸುದ್ದಿಯನ್ನು ತಿರುಚಬೇಡಿ ಮತ್ತು ವಿವಾದವನ್ನು ಸೃಷ್ಟಿಸಬೇಡಿ” ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
“ಮುಖ್ಯಮಂತ್ರಿಯಾಗಲು ನಾನು ಆತುರಪಡುತ್ತಿಲ್ಲ. ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡಲು, ರಾಜಕೀಯ ಮಾಡಲು ಅಲ್ಲ. ನಾನು ಹಗಲಿರುಳು ಜನರ ಸೇವೆ ಮಾಡಲು ಶ್ರಮಿಸುತ್ತಿದ್ದೇನೆ. ನೀವು ಈ ರೀತಿ ಸುದ್ದಿಯನ್ನು ತಿರುಚಲು ಹೋದರೆ, ನಾನು ನಿಮಗೆ ಸಹಕರಿಸುವುದಿಲ್ಲ. ಪತ್ರಿಕಾಗೋಷ್ಠಿಗಳು ಮತ್ತು ಇತರ ಕಾರ್ಯಕ್ರಮಗಳಿಗೆ ನಾನು ನಿಮ್ಮನ್ನು ಆಹ್ವಾನಿಸುವುದಿಲ್ಲ” ಎಂದು ಎಚ್ಚರಿಸಿದ್ದಾರೆ.




