ಪಕ್ಷದ ವೇದಿಕೆಯಲ್ಲೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಬ್ರಹ್ಮ ಬಂದರೂ ನಾನು ನಾಮಪತ್ರ ವಾಪಸ್ ತೆಗೆದುಕೊಳ್ಳವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪುನರುಚ್ಚರಿಸಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ” ಎಂದರು.
“ಶಿವಮೊಗ್ಗ ಲೋಕಸಭೆ ಕ್ಷೇತ್ರ ಗೆಲ್ಲುತ್ತೇನೆ. ಗೆದ್ದು ನಾನು ಮೋದಿಗೆ ಬೆಂಬಲ ನೀಡುತ್ತೇನೆ ಎಂದರು.
ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಸಿಕ್ಕಿದೆ. ಅದರಿಂದ ಪಕ್ಷ ಹೊರ ತರಬೇಕಿದೆ. ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿ ಆಕ್ರೋಶವಿದೆ. ನನ್ನ ಬಗ್ಗೆ ಕ್ಷೇತ್ರದ ಜನರಿಗೆ ಪ್ರೀತಿಯಿದೆ. ನನಗೆ ಆದ ಅನ್ಯಾಯವನ್ನು ಖಂಡಿಸಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮುಖಂಡರು ಬೆಂಬಲ ನೀಡುತ್ತಿದ್ದಾರೆ” ಎಂದು ಹೇಳಿದರು.
“ಯಡಿಯೂರಪ್ಪನವರು ಹಿಂದುತ್ವ ಹೋರಾಟದ ನಾಯಕರನ್ನು ಪಕ್ಕಕ್ಕೆ ಸರಿಸಿದ್ದಾರೆ. ಮನೆಯಲ್ಲಿ ಒಬ್ಬರು ಕೇಂದ್ರ ಚುನಾವಣಾ ಸಮಿತಿ ಸದಸ್ಯರು , ಒಬ್ಬ ಎಂಪಿ ಹಾಗೂ ಮತ್ತೊಬ್ಬ ಎಂಎಲ್ಎ . ಜೊತೆಗೆ, ಆರು ತಿಂಗಳು ಹಠ ಹಿಡಿದು ಮಗನನ್ನು ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಮಾಡಿದರು. ರಾಜ್ಯದಲ್ಲಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ ಹಾಗೂ ಸದಾನಂದ ಗೌಡ ಎಲ್ಲರಿಗೂ ಅಪಮಾನ ಮಾಡಿದ್ದಾರೆ. ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್ ಕ್ರಿಕೆಟ್ನಲ್ಲಿ ಅಪ್ಪ-ಮಗನ ಆಟ
“ರಾಜ್ಯ ಬಿಜೆಪಿಯಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ. ಬಿ.ಎಸ್ ಯಡಿಯೂರಪ್ಪ ನನ್ನ ಮಗನಿಗೆ ಹಾವೇರಿ ಟಿಕೆಟ್ ಕೊಡಿಸುತ್ತೇನೆ ಪ್ರವಾಸ ಮಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಟಿಕೆಟ್ ಘೋಷಣೆಗೂ ಮುನ್ನ ರಾಘವೇಂದ್ರ ಅವರು ಕಾಂತೇಶ್ ಅವರಿಗೆ ಫೋನ್ ಮಾಡಿ ದೇವರಾಣೆಗೂ ನಿನಗೆ ಟಿಕೆಟ್ ಸಿಗುತ್ತೆ ಎಂದಿದ್ದರು. ಯಡಿಯೂರಪ್ಪ ನನ್ನ ಮೊಬೈಲ್ ಗೆ ಕರೆ ಮಾಡಿ, ದೆಹಲಿಗೆ ಹೋಗೋಣ ಬಾ ಎಂದರು” ಎಂದರು.
“ಕೇಂದ್ರ ಚುನಾವಣಾ ಸಮಾಚಾರ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಹೇಳಿದ್ದರು. ಈಗ ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ನೇರವಾಗಿ ತೊಡೆ ತಟ್ಟಿದ್ದೇನೆ. ಬಿಎಸ್ವೈ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ. ಶೋಭಾ ಕರದ್ಲಾಂಜೆಗೆ ಹಠ ಮಾಡಿ ಬಿಎಸ್ವೈ ಟಿಕೆಟ್ ಕೊಡಿಸಿದ್ದಾರೆ. ನನಗೆ ಮೋಸ ಮಾಡಿದ್ದಾರೆ. ಈಗ ನನ್ನ ಸ್ಪರ್ಧೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಹರಿಹಾಯ್ದರು.
“ನನ್ನ ಜೊತೆ ನಡ್ಡಾ ಮಾತುಕತೆ ಮಾಡಿದ್ದಾರೆ, ಮನವೊಲಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ಪ್ರಚುರ ಪಡಿಸಲಾಗುತ್ತಿದೆ. ನನಗೆ ನಡ್ಡಾ ಕಾಲ್ ಮಾಡಿಲ್ಲ. ನಾನು ಸ್ಪರ್ಧೆ ಮಾಡುವುದು ಖಚಿತ. ಪಕ್ಷ ನನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ” ಎಂದು ಸವಾಲು ಹಾಕಿದರು.
“ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ನಂತರ ಅವರೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಪಕ್ಷ ನನ್ನ ತಾಯಿ ಇದ್ದಂಗೆ. ತಾಯಿ ಮತ್ತು ಮಗನನ್ನು ದೂರ ಮಾಡಲು ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ರಾಘವೇಂದ್ರ ಅವರನ್ನು ಸೋಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ತಿರುಗೇಟು ನೀಡುತ್ತೇನೆ” ಎಂದರು.





