ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ತಮಿಳುನಾಡು ಕೃಷಿ ಸಚಿವ ಎಂಆರ್ಕೆ ಪನ್ನೀರ್ಸೆಲ್ವಂ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. “ಉತ್ತರ ಭಾರತೀಯರಿಗೆ ಹಿಂದಿ ಮಾತ್ರ ಬರುತ್ತದೆ. ಪಾನಿಪುರಿ ಮಾರಲು ಇಲ್ಲಿಗೆ ಬರ್ತಾರೆ” ಎಂದು ಹೇಳಿದ್ದಾರೆ.
“ಹಿಂದಿ ಮಾತ್ರ ಕಲಿತಿರುವ ಉತ್ತರದವರು ದಕ್ಷಿಣ ರಾಜ್ಯದಲ್ಲಿ ಸೀಮಿತ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ ತಮಿಳು ಮತ್ತು ಇಂಗ್ಲಿಷ್ ಅನ್ನು ಕೇಂದ್ರೀಕರಿಸುವ ರಾಜ್ಯದ ಎರಡು-ಭಾಷಾ ನೀತಿಯಿಂದ ತಮಿಳರು ಪ್ರಯೋಜನ ಪಡೆಯುತ್ತಾರೆ. ಯುಎಸ್ ಅಥವಾ ಲಂಡನ್ನಲ್ಲಿ ಉದ್ಯೋಗ ಪಡೆಯುತ್ತಾರೆ” ಎಂದರು.
ಇದನ್ನು ಓದಿದ್ದೀರಾ? ಉತ್ತರ ಭಾರತ-ದಕ್ಷಿಣ ಭಾರತ: ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು
“ಉತ್ತರದಿಂದ ಬಂದವರು ತಮಿಳುನಾಡಿಗೆ ಮೇಜುಗಳನ್ನು ಸ್ವಚ್ಛಗೊಳಿಸಲು ಬರುತ್ತಿದ್ದಾರೆ. ಅವರು ಹಿಂದಿಯನ್ನು ಮಾತ್ರ ಕಲಿತಿರುವುದರಿಂದ ಅವರು ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಲು ಇಲ್ಲಿಗೆ ಬರುತ್ತಿದ್ದಾರೆ. ಆದರೆ ನಮ್ಮ ಮಕ್ಕಳು ವಿದೇಶಕ್ಕೆ ಹೋಗಿದ್ದಾರೆ. ನಾವು ಎರಡು-ಭಾಷಾ ನೀತಿಯನ್ನು ಅನುಸರಿಸುತ್ತೇವೆ. ಇಂಗ್ಲಿಷ್ ಅನ್ನು ಚೆನ್ನಾಗಿ ಕಲಿಯುತ್ತೇವೆ. ಆದ್ದರಿಂದ ನಮ್ಮ ಮಕ್ಕಳು ವಿದೇಶಕ್ಕೆ ಹೋಗುತ್ತಿದ್ದಾರೆ. ಯುಎಸ್ಎ, ಲಂಡನ್ನಲ್ಲಿ ಕೋಟಿಗಟ್ಟಲೆ ಗಳಿಸುವ ಅವಕಾಶಗಳನ್ನು ಪಡೆಯುತ್ತಿದ್ದಾರೆ” ಎಂದು ಹೇಳಿದರು.
ಇನ್ನು ಸಚಿವರ ಹೇಳಿಕೆ ಬೆನ್ನಲ್ಲೇ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಶೀಘ್ರವೇ ಪ್ರತಿಕ್ರಿಯಿಸಿದೆ. “ಪ್ರತಿಯೊಂದು ಕಾನೂನು ಕೆಲಸದಲ್ಲೂ ಘನತೆ ಇರುತ್ತದೆ. ನಾವು ಅದನ್ನು ವಿರೋಧಿಸುವುದಿಲ್ಲ. ಹಿಂದಿ ಮಾತನಾಡುವವರು ಅಥವಾ ಅವರು ಮಾಡುವ ಕೆಲಸದ ಬಗ್ಗೆ ತಮಿಳುನಾಡು ವಿರೋಧ ಹೊಂದಿಲ್ಲ” ಎಂದು ವಕ್ತಾರ ಡಾ. ಸೈಯದ್ ಹಫಿಸುಲ್ಲಾ ಒತ್ತಿ ಹೇಳಿದ್ದಾರೆ. ಹಾಗೆಯೇ ಕೇಂದ್ರದ ತ್ರಿಭಾಷಾ ನೀತಿಯನ್ನು ಟೀಕಿಸುತ್ತಾ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
“ದ್ವಿಭಾಷಾ ನೀತಿಯು ತಮಿಳುನಾಡು ಮತ್ತು ಅದರ ಜನರಿಗೆ ಸಹಾಯ ಮಾಡಿದೆ. ಇಂಗ್ಲಿಷ್ ಜನರಿಗೆ ಅಭಿವೃದ್ಧಿ ಮತ್ತು ಜಾಗತಿಕ ಅವಕಾಶಗಳನ್ನು ನೀಡಿದೆ. ಇಂಗ್ಲಿಷ್ಗೆ ಈ ಆದ್ಯತೆಯಿಲ್ಲದೆ, ಹಿಂದಿ ಮಾತನಾಡುವ ರಾಜ್ಯಗಳ ಜನರು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲ್ಲ” ಎಂದೂ ಅಭಿಪ್ರಾಯಿಸಿದ್ದಾರೆ.





