- ಬರಗಾಲ ಆವರಿಸಿದ್ದು, ಸ್ಪಂದಿಸಬೇಕು ಎಂಬ ಉದ್ದೇಶವೇ ಕೇಂದ್ರದಿಂದ ಕಾಣುತ್ತಿಲ್ಲ
- ಕೇಂದ್ರದಿಂದ ಹಣ ತರುವ ದಮ್ಮು ತಾಕತ್ತು ಈ ಬಿಜೆಪಿ ನಾಯಕರಿಗೆ ಇದೆಯಾ?
ಕೇಂದ್ರ ಸರಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲವಾಗಿದೆ. ರಾಜ್ಯದಲ್ಲಿ ಬರಗಾಲ ಆವರಿಸಿದೆ. ರಾಜ್ಯಕ್ಕೆ ಸ್ಪಂದಿಸಬೇಕು ಎಂಬ ಉದ್ದೇಶವೇ ಕೇಂದ್ರದಿಂದ ಕಾಣುತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕೇಂದ್ರ ಸರಕಾರದಿಂದ ಹಣ ತರುವ ದಮ್ಮು ತಾಕತ್ತು ಈ ಬಿಜೆಪಿ ನಾಯಕರಿಗೆ ಇದೆಯಾ? ಬರಗಾಲ ನಿರ್ವಹಣೆ ಮಾಡುವುದಕ್ಕೆ ಸರಕಾರ ಕ್ರಮ ವಹಿಸಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ” ಎಂದರು.
“ಒಂದು ತಿಂಗಳ ನಂತರ ತೊಂದರೆ ಬರಬಹುದು. ಬಹಳ ಆಹಾಕಾರ ಆಗೋದು ನೀರಿಗೆ. ಮೇವಿಗೆ ಯಾವುದೇ ತೊಂದರೆ ಇಲ್ಲ. ಸೊರಬ ಪಟ್ಟಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗುತ್ತಿದೆ. ಜಿಲ್ಲೆಯ 238 ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಹುದು ಎಂದು ಗುರುತಿಸಲಾಗಿದೆ” ಎಂದು ಹೇಳಿದರು.
ಮಲೆನಾಡಿನಲ್ಲಿ ಕಾಡಾನೆ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, “ಅವುಗಳ ಜಾಗಕ್ಕೆ ನಾವು ಬಂದು ಬಿಟ್ಟಿದ್ದೀವಿ. ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆನೆ ಬರದಂತೆ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಜಾತಿ ಜನಗಣತಿ ಆಗಬೇಕು ಎಂಬುದು ನಮ್ಮ ಪಕ್ಷದ ನಿಲುವು. ಜಾತಿ ಜನಗಣತಿ ಆದಷ್ಟು ಬೇಗ ಬಿಡುಗಡೆ ಆಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು
“ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ರೈತರಿಗೆ ನೀಡುವ ವಿದ್ಯುತ್ ಪೂರೈಕೆ ಸಮಯದಲ್ಲಿ ವ್ಯತ್ಯಾಸ ಆಗಬಹುದು. ಖಜಾನೆಯಲ್ಲಿ ದುಡ್ಡಿಲ್ಲ, ರಾಜ್ಯದಲ್ಲಿ ವಿದ್ಯುತ್ ಇಲ್ಲ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದರು. ಅಂತಹ ಸಮಸ್ಯೆ ಇಲ್ಲ. ಖಜಾನೆಯಲ್ಲಿ ದುಡ್ಡಿದೆ. ವಿದ್ಯುತ್ ಸಹ ಇದೆ” ಎಂದು ಸ್ಪಷ್ಟಪಡಿಸಿದರು.
“ಬಿಜೆಪಿಯವರು ಬರಿ ಸರಕಾರ ಬೀಳಿಸುವ ಯೋಚನೆಯಲ್ಲೇ ಇದ್ದಾರೆ. ಅವರಿಗೆ 6-7 ತಿಂಗಳು ಆದರೂ ಅವರ ಯೋಗ್ಯತೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿರಲಿಲ್ಲ. ಪಂಚ ರಾಜ್ಯ ಚುನಾವಣೆ ಫಲಿತಾಂಶ ಬರಲಿ ಅಡ್ರೆಸ್ ಇಲ್ಲದಾಗೆ ಹೋಗುತ್ತಾರೆ. ಅವರ ಯೋಗ್ಯತೆಗೆ ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಆಗಲಿಲ್ಲ” ಎಂದು ಲೇವಡಿ ಮಾಡಿದರು.
ಸರಕಾರ ತಾನಾಗಿಯೇ ಬಿದ್ದು ಹೋಗುತ್ತದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿ, “ಸರಕಾರ ಬೀಳಿಸೋದೆ ಅವರ ಕೆಲಸನಾ? ಅಶೋಕ್ ಅವರು ಡಿಸಿಎಂ ಆಗಿದ್ದವರು. ಅವರಿಗೂ ಸರಕಾರ ನಡೆಸಿ ಅನುಭವ ಇದೆ. ಆಡಳಿತ ಪಕ್ಷಕ್ಕೆ ಸಲಹೆ ಸಹಕಾರ ಕೊಡಬೇಕು. ಅದು ಬಿಟ್ಟು ಸರಕಾರ ಬೀಳಿಸೋದೆ ಅವರ ಕೆಲಸವಲ್ಲ. ಮನಸ್ಸಿಗೆ ಬಂದಾಗೆ ಮಾತನಾಡುವುದು ಸರಿಯಲ್ಲ” ಎಂದರು.
“ರಾಗಿಗುಡ್ಡ ವಿಚಾರದಲ್ಲಿ ಬಿಜೆಪಿಯವರು ಶಾಂತಿ ಕದಡುವ ಪ್ರಯತ್ನ ಮಾಡಿದ್ದರು. ಅದು ಸಾಧ್ಯವಾಗಲಿಲ್ಲ. ಶಿವಮೊಗ್ಗದ ಜನರು ಅವರ ಮುಖಕ್ಕೆ ಹೊಡೆದ್ರು. ನಮ್ಮ ಸರಕಾರ ಬಂದ ಮೇಲೆ ರಾಜ್ಯದ ಎಲ್ಲ ಕಡೆ ಶಾಂತಿ ನೆಲೆಸಿದೆ” ಎಂದರು.
“ಶಾಲೆಗಳ ಮಾನಿಟರಿಂಗ್ ಜಿಪಂ ಕೈಯಲ್ಲಿದೆ. ಪಿಯುಸಿ ಕಾಲೇಜುಗಳ ಮಾನಿಟರಿಂಗ್ ಜಿಪಂಗೆ ಕೊಡ್ತಿದ್ದೇವೆ. ಈ ಬಗ್ಗೆ ಉಪನ್ಯಾಸಕರಿಗೆ ಯಾವುದೇ ಆತಂಕ ಬೇಡ. ಕೇವಲ ಮಾನಿಟರಿಂಗ್ ಅಷ್ಟೇ ಜಿ.ಪಂ. ವ್ಯಾಪ್ತಿಗೆ ವಹಿಸುತ್ತಿದ್ದೇವೆ” ಎಂದು ಹೇಳಿದರು.





