ಸಿದ್ದರಾಮಯ್ಯ ಅವರಿಂದ ಅಧಿಕಾರ ಕಸಿದುಕೊಂಡು ಮುಖ್ಯಮಂತ್ರಿಯಾಗಲು, ಅಧಿಕಾರ ವಹಿಸಿಕೊಳ್ಳಲು ನನಗೆ ಧಾವಂತವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಆದಾಗ್ಯೂ, ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಇತ್ಯರ್ಥಪಡಿಸುತ್ತದೆ ಎಂಬ ನಿರೀಕ್ಷೆ ಅವರಲ್ಲಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ದೆಹಲಿಯನ್ನು ತಮ್ಮ ದೇವಾಲಯವೆಂದು ಬಣ್ಣಿಸಿದ್ದಾರೆ. “ಹೈಕಮಾಂಡ್ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. ನಾವು ಇಲ್ಲಿ ಆಡಳಿತ ನಡೆಸಬಹುದು. ಆದರೆ, ದೆಹಲಿ (ಹೈಕಮಾಂಡ್) ಇಲ್ಲದೆ, ಏನೂ ಘಟಿಸುವುದಿಲ್ಲ” ಎಂದು ಹೇಳಿದ್ದಾರೆ.
“ನನಗೆ ಆತುರವಿಲ್ಲ… ಯಾವುದಕ್ಕೂ ನಾನು ಆತುರಪಡುತ್ತಿಲ್ಲ. ನನ್ನ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಕರೆ ಮಾಡಿದಾಗಲೆಲ್ಲ ನಾವು ದೆಹಲಿಗೆ ಹೋಗುತ್ತೇವೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಒಕ್ಕಲಿಗ ಮಠಗಳ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮಿ ಮತ್ತು ನಂಜಾವಧೂತ ಸ್ವಾಮಿ ಹಾಗೂ ಒಕ್ಕಲಿಗರ ಸಂಘಗಳು ಹೇಳುತ್ತಿವೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಬೆಂಬಲಿಸಿದ್ದಾರೆ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಈ ಮಠಾಧೀಶರು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ.
“ನನಗೆ ಯಾವುದೇ ಸಮುದಾಯದ ದೃಷ್ಟಿಕೋನ ಬೇಡ. ನನ್ನ ಸಮುದಾಯ ಕಾಂಗ್ರೆಸ್” ಎಂದಿರುವ ಶಿವಕುಮಾರ್, ತಾವು ಒಕ್ಕಲಿಗ ನಾಯಕನಾಗಿ ಮಾತ್ರವೇ ಸೀಮಿತಗೊಳಿಸಿಕೊಳ್ಳಲು ನಿರಾಕರಿಸಿದ್ದಾರೆ. “ಖಂಡಿತ, ನಾನು ಒಂದು ಸಮುದಾಯಕ್ಕೆ ಸೇರಿದವನು. ಅವರು ನನ್ನನ್ನು ಇಷ್ಟಪಡುತ್ತಾರೆ. ಆದಾಗ್ಯೂ, ನಾನು ಸಮಾಜದ ಎಲ್ಲ ವರ್ಗಗಳನ್ನು ಪ್ರೀತಿಸುತ್ತೇನೆ. ಹಿಂದುಳಿದ ವರ್ಗಗಳು, ಎಸ್ಸಿ/ಎಸ್ಟಿಗಳು ಮತ್ತು ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರನ್ನೂ ಒಳಗೊಂಡ ಹಿಂದುಳಿದ ವರ್ಗಗಳನ್ನು ನಾನು ಒಳಗೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ರಾಜ್ಯದ ಸಂಸದರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತೇನೆ. ನನಗೆ ದೆಹಲಿಯಲ್ಲಿ ಬಹಳಷ್ಟು ಕೆಲಸಗಳಿವೆ. ನಾನು ಸಂಸದರನ್ನು ಭೇಟಿ ಮಾಡಬೇಕಾಗಿದೆ. ಅವರು ನಮ್ಮ ಕೆಲವು ಯೋಜನೆಗಳನ್ನು ಮುಂದುವರಿಸಬೇಕಿದೆ” ಎಂದು ಹೇಳಿದ್ದಾರೆ.




