ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ನೆಲೆಗಳ ಮೇಲೆ ಭಾರತ ಸರ್ಕಾರವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕ್-ಭಾರತ ಸಂಘರ್ಷವು ಕೊನೆಗೊಂಡ ನಂತರದಲ್ಲಿ, ಭಾರತವು ಭಯೋತ್ಪಾದನೆ ವಿರುದ್ಧ ತನ್ನ ನಿಲುವನ್ನು ಮಿತ್ರರಾಷ್ಟ್ರಗಳಿಗೆ ಮನವರಿಕೆ ಮಾಡಲು 7 ನಿಯೋಗಗಳನ್ನು ವಿದೇಶಗಳಿಗೆ ಕಳಿಸಿತು. ಮೇ 23ರಂದು ಆರಂಭವಾದ ನಿಯೋಗಗಳ ವಿದೇಶಿ ಪ್ರಯಾಣಕ್ಕೆ 13.11 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಇಂಗ್ಲಿಷ್ ಸುದ್ದಿ ಸಂಸ್ಥೆ ‘ದಿ ಕ್ವಿಂಟ್’ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿ (ಆರ್ಟಿಐ)ಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯ (ಎಂಇಎ), ಸಂಸದರ 7 ನಿಯೋಗಗಳ ಪ್ರಯಾಣಕ್ಕಾಗಿ 13,11,16,647 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ದೃಢಪಡಿಸಿದೆ. ಆದಾಗ್ಯೂ, ನಿಯೋಗದಲ್ಲಿ ಸಂಸದರ ತಲಾ ವೆಚ್ಚದ ವಿವರ ಅಥವಾ ಪ್ರತ್ಯೇಕ ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಲು ಎಂಇಎ ನಿರಾಕರಿಸಿದೆ.
ಆರ್ಟಿಐನಲ್ಲಿ ಕೇಳಲಾಗಿದ್ದ ಪ್ರಶ್ನೆಗಳೇನು? ಮತ್ತು ಎಂಇಎ ಉತ್ತರಗಳೇನು?
ಪ್ರತಿ ಸಂಸದರ ವೆಚ್ಚ, ನಿಯೋಗವಾರು ವೆಚ್ಚದ ವಿವರಗಳು (ಪ್ರಯಾಣ, ವಾಸ್ತವ್ಯ, ಇತರ ವೆಚ್ಚಗಳು), ನಿಯೋಗಗಳ ಖರ್ಚು ಮಾದರಿಗಳು ಹಾಗೂ ನಿಯೋಗದ ಪ್ರವಾಸದಿಂದಾದ ರಾಜತಾಂತ್ರಿಕ ಲಾಭಗಳು ಸೇರಿದಂತೆ ಒಟ್ಟು 15 ಪ್ರಶ್ನೆಗಳನ್ನು ‘ದಿ ಕ್ವಿಂಟ್’ ಕೇಳಿತ್ತು.
ಆದಾಗ್ಯೂ, ಎಂಇಎ ಪ್ರತಿ ಸಂಸದರ ವೆಚ್ಚವನ್ನು ಒದಗಿಸಲು ಅಥವಾ ವೆಚ್ಚದ ವಿವರಗಳನ್ನು ನೀಡಲು ನಿರಾಕರಿಸಿದೆ. ಪ್ರತಿ ನಿಯೋಗಕ್ಕೆ ವ್ಯಯಿಸಲಾದ ಒಟ್ಟು ಅಂಕಿಅಂಶವನ್ನು ಮಾತ್ರವೇ ನೀಡಿದೆ.
- ರವಿಶಂಕರ್ ಪ್ರಸಾದ್ ನಿಯೋಗ (ಯುರೋಪ್): 3.44 ಕೋಟಿ ರೂ.
- ಬೈಜಯಂತ್ ಪಾಂಡ ನಿಯೋಗ (ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ): 1.35 ಕೋಟಿ ರೂ.
- ಶಶಿ ತರೂರ್ ನಿಯೋಗ (ಅಮೆರಿಕ): 2.08 ಕೋಟಿ ರೂ.
- ಕನಿಮೋಳಿ ಕರುಣಾನಿಧಿ ನಿಯೋಗ (ಯುರೋಪ್): 1.90 ಕೋಟಿ ರೂ.
- ಶ್ರೀಕಾಂತ್ ಏಕನಾಥ್ ಶಿಂಧೆ ನಿಯೋಗ (ಆಫ್ರಿಕಾ): 1.53 ಕೋಟಿ ರೂ.
- ಸಂಜಯ್ ಕುಮಾರ್ ಝಾ ನಿಯೋಗ (ಪೂರ್ವ ಏಷ್ಯಾ): 1.48 ಕೋಟಿ ರೂ.
- ಸುಪ್ರಿಯಾ ಸುಳೆ ನಿಯೋಗ (ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ): 1.31 ಕೋಟಿ ರೂ.
ರವಿಶಂಕರ್ ಪ್ರಸಾದ್ ನೇತೃತ್ವದ ನಿಯೋಗವೊಂದಕ್ಕೆ ಒಟ್ಟು ಖರ್ಚಿನಲ್ಲಿ ಸುಮಾರು 30%ರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. ಈ ನಿಯೋಗವು ಫ್ರಾನ್ಸ್, ಇಟಲಿ, ಡೆನ್ಮಾರ್ಕ್, ಯುಕೆ, ಬೆಲ್ಜಿಯಂ, ಜರ್ಮನಿ ಹಾಗೂ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಿಗೆ ಪ್ರಯಾಣಿಸಿತ್ತು.
ಈ ಲೇಖನ ಓದಿದ್ದೀರಾ?: ಪಾಕಿಸ್ತಾನಕ್ಕೆ ಸಾಲ ನೀಡಲು ಅಂತಾರಾಷ್ಟ್ರೀಯ ವಿತ್ತ ನಿಧಿ ಹೇರಿದ 11 ಷರತ್ತುಗಳೇನು?
ರಾಜತಾಂತ್ರಿಕ ಪ್ರವಾಸ vs ರಾಜತಾಂತ್ರಿಕ ಲಾಭಗಳು
ಯಾವ ರಾಷ್ಟ್ರಗಳಿಗೆ ನಿಯೋಗಗಳು ಭೇಟಿ ನೀಡಿದ್ದವು ಮತ್ತು ಆ ನಿಯೋಗಗಳ ಒಟ್ಟು ಖರ್ಚಿನ ಪ್ರಮಾಣದ ಹೊರತಾಗಿ, ಪ್ರವಾಸದಿಂದಾದ ರಾಜತಾಂತ್ರಿಕ ಲಾಭ/ಫಲಿತಾಂಶಗಳ ಕುರಿತು ಸಚಿವಾಲಯವು ಉತ್ತರ ನೀಡಿಲ್ಲ. ಆಪರೇಷನ್ ಸಿಂಧೂರ್ ನಂತರ ನಿಯೋಗಗಳು ತಮ್ಮ ಘೋಷಿತ ಉದ್ದೇಶವನ್ನು ಸಾಧಿಸಿವೆಯೇ ಎಂಬ ಬಗ್ಗೆ ಸಚಿವಾಲಯ ಯಾವುದೇ ಮೌಲ್ಯಮಾಪನ ನೀಡಿಲ್ಲ.
ಆದಾಗ್ಯೂ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳು ಕೆಲವು ಅಂಶಗಳತ್ತ ಗಮನ ಸೆಳೆಯುತ್ತವೆ;
- ಭೇಟಿ ನೀಡಿದ ದೇಶಗಳು ಭಾರತದ ನಿಲುವನ್ನು ಸಮ್ಮತಿಸುವ ಯಾವುದೇ ಜಂಟಿ ಹೇಳಿಕೆ ನೀಡಿಲ್ಲ.
- ಹಲವಾರು ದೇಶಗಳು ತಮ್ಮ ಹಿಂದಿನ ತಟಸ್ಥ ನಿಲುವನ್ನೇ ಕಾಯ್ದುಕೊಂಡವು. ಸಂಯಮ ಮತ್ತು ಮಾತುಕತೆಗೆ ಕರೆ ನೀಡುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದವು.
- ನಿಯೋಗಗಳ ಭೇಟಿಯು ಹೆಚ್ಚಾಗಿ ಸೌಜನ್ಯ ಸಭೆಗಳು, ಫೋಟೋ ತೆಗೆದುಕೊಳ್ಳುವುದು ಹಾಗೂ ಮುಚ್ಚಿದ ಬಾಗಿಲಿನ ಸಭೆಗಳಿಗೆ ಸೀಮಿತವಾಗಿ ಉಳಿದಿದೆ.
- ಗಮನಾರ್ಹವಾಗಿ, ಸಾಂಪ್ರದಾಯಿಕವಾಗಿ ಭಾರತದ ಮಿತ್ರ ರಾಷ್ಟ್ರಗಳು ಕೂಡ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪಷ್ಟ ರಾಜತಾಂತ್ರಿಕ ಬೆಂಬಲವನ್ನು ವ್ಯಕ್ತಪಡಿಸಲಿಲ್ಲ.




