ಮಹಾರಾಷ್ಟ್ರದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ ‘ಲಡ್ಕಿ ಬಹಿನ್’ ಯೋಜನೆಯಡಿ ಸುಮಾರು 14,000ಕ್ಕೂ ಅಧಿಕ ಪುರುಷರು ಹಣವನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ವಂಚನೆಯಿಂದ ದಾಖಲೆ ಬದಲಾಯಿಸಿಕೊಂಡು ಯೋಜನೆಯ ಫಲಾನುಭವಿಗಳಾದ ಪುರುಷರು ಈವರೆಗೆ ಒಟ್ಟಾಗಿ 21.44 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ವಾರ್ಷಿಕವಾಗಿ ರೂ. 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ 21ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕವಾಗಿ 1,500 ರೂಪಾಯಿ ನೀಡುವ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿದೆ.
ಇದನ್ನು ಓದಿದ್ದೀರಾ? ‘ಗ್ಯಾರಂಟಿ ಯೋಜನೆ’ಗಳು ಚುನಾವಣಾ ಸಮಯದಲ್ಲಷ್ಟೇ ಗ್ಯಾರಂಟಿ!
ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಡಬ್ಲ್ಯೂಸಿಡಿ) ನಡೆಸಿದ ಲೆಕ್ಕಪರಿಶೋಧನೆ ವೇಳೆ ಆನ್ಲೈನ್ ನೋಂದಣಿ ವ್ಯವಸ್ಥೆಯನ್ನು ತಪ್ಪಾಗಿ ಬಳಸಿಕೊಂಡು 14,298 ಪುರುಷರು ತಮ್ಮನ್ನು ಮಹಿಳಾ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಹತ್ತು ತಿಂಗಳಿನಿಂದ ಹಣ ಪಡೆದಿದ್ದಾರೆ ಎಂಬುದು ಬಹಿರಂಗವಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್, “ಲಡ್ಕಿ ಬಹಿನ್ ಯೋಜನೆಯನ್ನು ಬಡ ಮಹಿಳೆಯರಿಗೆ ಸಹಾಯ ಮಾಡಲು ಪ್ರಾರಂಭಿಸಲಾಗಿದೆ. ಪುರುಷರು ಅದರ ಫಲಾನುಭವಿಗಳಾಗಿರಬಾರದು. ಅವರಿಗೆ ನೀಡಲಾದ ಹಣವನ್ನು ನಾವು ಮರುಪಡೆಯುತ್ತೇವೆ. ಅವರು ಸಹಕರಿಸದಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇನ್ನು ಫಲಾನುಭವಿಗಳ ಪಟ್ಟಿಯಲ್ಲಿ ಪುರುಷರು ಇರುವುದು ಒಂದು ಸಮಸ್ಯೆಯಾದರೆ, ಇನ್ನೊಂದೆಡೆ ಭಾರೀ ಪ್ರಮಾಣದ ಅನರ್ಹ ದಾಖಲಾತಿಗಳಿಂದಾಗಿ ಈ ಯೋಜನೆಯು ತನ್ನ ಮೊದಲ ವರ್ಷದಲ್ಲಿ 1,640 ಕೋಟಿ ರೂ.ಗಳ ನಷ್ಟವನ್ನುಂಟುಮಾಡಿದೆ ಎಂದು ಅಂದಾಜಿಸಲಾಗಿದೆ.
ಮನೆಯ ಓರ್ವ ಮಹಿಳೆಗೆ ಮಾತ್ರ ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಆದರೆ ಒಂದೇ ಕುಟುಂಬದಿಂದ ಮೂವರು ಸದಸ್ಯರಾಗಿರುವುದೂ ಇದೆ. ಈ ರೀತಿ 7.97 ಲಕ್ಷಕ್ಕೂ ಹೆಚ್ಚು ಮಹಿಳೆಯರು ಯೋಜನೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದಾಗಿ 1,196 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಚುನಾವಣಾ ಕಾರ್ಯಯೋಜನೆ ಚರ್ಚೆಗೆ ಮಹಾರಾಷ್ಟ್ರದ ಅಘಾಡಿ ಮೈತ್ರಿ ಕೂಟ ಸಭೆ
ಮತ್ತೊಂದೆಡೆ ಅರ್ಹತೆಗಾಗಿ ವಯಸ್ಸಿನ ಮಿತಿಯನ್ನು 65 ವರ್ಷಕ್ಕೆ ನಿಗದಿಪಡಿಸಿದ್ದರೂ ಸಹ, 65 ವರ್ಷಕ್ಕಿಂತ ಮೇಲ್ಪಟ್ಟ 2.87 ಲಕ್ಷ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ಸುಮಾರು 431.7 ಕೋಟಿ ರೂಪಾಯಿ ನಷ್ಟವಾಗಿದೆ. ಇದಲ್ಲದೆ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವ ಮನೆಗಳ 1.62 ಲಕ್ಷ ಮಹಿಳೆಯರು ಸಹ ಫಲಾನುಭವಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಂಶೋಧನೆಗಳು ಟೀಕೆಗಳನ್ನು ಹುಟ್ಟುಹಾಕಿವೆ ಮತ್ತು ವ್ಯಾಪಕ ತನಿಖೆಗೆ ಬೇಡಿಕೆ ಕೆಳಿಬಂದಿದೆ. “ಈ ಪುರುಷರು ಫಾರ್ಮ್ಗಳನ್ನು ಹೇಗೆ ಭರ್ತಿ ಮಾಡಿದರು? ಅವರಿಗೆ ಯಾರು ಸಹಾಯ ಮಾಡಿದರು? ನೋಂದಣಿಗಾಗಿ ಯಾವ ಕಂಪನಿ ಜೊತೆ ಒಪ್ಪಂದ ಮಾಡಲಾಗಿದೆ? ಇದರ ಹಿಂದೆ ದೊಡ್ಡ ಪಿತೂರಿ ಇದೆ. ಕಂಪನಿಯ ಬಗ್ಗೆ ತನಿಖೆ ನಡೆಸಬೇಕು ಮತ್ತು ಈ ವಿಷಯವನ್ನು ಎಸ್ಐಟಿ ಅಥವಾ ಇಡಿ ತನಿಖೆ ನಡೆಸಬೇಕು” ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದರು.





