ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸದ್ಯ ರಾಷ್ಟ್ರಪತಿ ಆಡಳಿತವಿದ್ದು, ಮತ್ತೆ ಸರ್ಕಾರ ರಚನೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಈ ನಡುವೆ ಮಣಿಪುರದ 20ಕ್ಕೂ ಅಧಿಕ ಬಿಜೆಪಿ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. “ಎಲ್ಲಾ ಎನ್ಡಿಎ ಶಾಸಕರನ್ನು ಕರೆಯಲಾಗಿದೆ. ಜನಪ್ರಿಯ ಸರ್ಕಾರ ರಚನೆಯಾಗುತ್ತದೆ ಎಂದು ನಾವು ಆಶಿಸುತ್ತೇವೆ” ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮಾತನಾಡಿ, “ಎನ್ಡಿಎ ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಲಾಗುತ್ತಿರುವುದರಿಂದ, ನಾನು ಸರ್ಕಾರ ರಚನೆಯ ನಿರೀಕ್ಷೆಯಲ್ಲಿದ್ದೇನೆ. ಇದಕ್ಕೂ ಮೊದಲು, ಎಲ್ಲಾ ಬಿಜೆಪಿ ಶಾಸಕರ ಸಭೆ ನಡೆದಿತ್ತು. ರಾಷ್ಟ್ರಪತಿ ಆಳ್ವಿಕೆಯ ಅವಧಿ ಫೆಬ್ರವರಿ 12 ರಂದು ಕೊನೆಗೊಳ್ಳಲಿದೆ. ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಆಶಿಸೋಣ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮಕಾಡೆ ಮಲಗಿದ ಬಿಜೆಪಿ
“ಸರ್ಕಾರ ನಿರಂತರ ಪ್ರಕ್ರಿಯೆ. ಮಣಿಪುರದಲ್ಲಿ ಬದಲಾವಣೆಯನ್ನು ತರಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಸದ್ಯ ಸಾಕಷ್ಟು ಬದಲಾವಣೆಗಳಾಗಿವೆ” ಎಂದೂ ತಿಳಿಸಿದ್ದಾರೆ.
ಇನ್ನು ಲಾಮ್ಸಾಂಗ್ ಕ್ಷೇತ್ರದ ಶಾಸಕ ಎಸ್. ರಾಜೇನ್ ಸಿಂಗ್ ಮಾತನಾಡಿ, “ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಆದರೂ ಕೇಂದ್ರ ನಾಯಕತ್ವವು ರಾಜ್ಯದ ಪರಿಸ್ಥಿತಿಯನ್ನು ಗಮನಿಸಿದ ನಂತರ ಸಿಎಂ ಆಯ್ಕೆ ಮಾಡಲಿದೆ. ಸಭೆ ಸೋಮವಾರ ಸಂಜೆ ನಡೆಯುವ ಸಾಧ್ಯತೆಯಿದೆ” ಎಂದಿದ್ದಾರೆ.
ಇನ್ನು ಶಾಸಕ ಎಚ್. ಡಿಂಗೊ, “ಸಭೆ ಸೋಮವಾರ ಸಂಜೆ. ಆದರೆ ಸಭೆಯ ಕಾರ್ಯಸೂಚಿಯನ್ನು ಘೋಷಿಸಲಾಗಿಲ್ಲ. ಇಂದೇ ದೆಹಲಿಗೆ ತಲುಪಲು ನಮಗೆ ಹೇಳಲಾಗಿತ್ತು” ಎಂದು ಹೇಳಿದ್ದಾರೆ. ಆದರೆ ಖುರೈ ಕ್ಷೇತ್ರದ ಶಾಸಕ ಎಲ್. ಸುಸಿಂದ್ರೊ ದೆಹಲಿ ಸಭೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿಕೊಂಡಿದ್ದಾರೆ.
2023ರ ಮೇ ತಿಂಗಳಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆದಿದ್ದು, 260ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಎನ್ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಳೆದ ವರ್ಷ ಫೆಬ್ರವರಿ 13ರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವಿದೆ.
ವಿಧಾನಸಭೆಯ ಅಧಿಕಾರಾವಧಿ 2027ರವರೆಗೆ ಇದ್ದು, ಇನ್ನೂ ಸರ್ಕಾರ ರಚಿಸುವ ಸಮಯವಿದೆ. 60 ಸದಸ್ಯರ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ 37 ಶಾಸಕರನ್ನು ಹೊಂದಿದೆ. ಮಣಿಪುರದಲ್ಲಿ ಎನ್ಡಿಎ ಭಾಗವಾಗಿರುವ ಎನ್ಪಿಪಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಕ್ರಮವಾಗಿ ಆರು ಮತ್ತು ಐದು ಶಾಸಕರನ್ನು ಹೊಂದಿವೆ.





