ದಕ್ಷಿಣ ರಾಜ್ಯದ ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನ ಕಳ್ಳತನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ ಕೇರಳ ಘಟಕವು ಶುಕ್ರವಾರ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ ಮನೆ ಮುಂದೆ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಹಿಸಿದ್ದು, “ಸೋನಿಯಾ ಗಾಂಧಿ ಮತ್ತು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ನಡುವಿನ ಮಾತುಕತೆ ನಡೆದಿದೆ ಎಂಬ ಆರೋಪಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ದೇವಸ್ವಂ ಅಧಿಕಾರಿ ಅಮಾನತು
“ದೇವಸ್ಥಾನದಿಂದ ಚಿನ್ನ ಕಳ್ಳತನವಾಗಿದೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಿಷ್ಪರಿಣಾಮಕಾರಿಯಾಗಿದೆ” ಎಂದು ಆರೋಪಿಸಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು.
“ಕಾಂಗ್ರೆಸ್ ಹೈಕಮಾಂಡ್ ಅಯ್ಯಪ್ಪ ದೇವರ ಚಿನ್ನ ಕದ್ದವರೊಂದಿಗೆ ನೇರ ಸಂಪರ್ಕ ಹೊಂದಿದೆ. ಸೋನಿಯಾ ಗಾಂಧಿ ಮತ್ತು ಅವರ ಕುಟುಂಬವು ಕೋಟ್ಯಂತರ ಅಯ್ಯಪ್ಪ ಭಕ್ತರ ಮುಂದೆ ಇದಕ್ಕೆ ಉತ್ತರಿಸಬೇಕು” ಎಂದು ಠಾಕೂರ್ ಹೇಳಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ, ಸೋನಿಯಾ ಗಾಂಧಿ ಹೆಸರು ಯಾಕೆ?
ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು, ದ್ವಾರಪಾಲಕ ಮೂರ್ತಿಗಳು ಮತ್ತು ಧ್ವಜಸ್ತಂಭಕ್ಕೆ ಹಚ್ಚಲಾಗಿದ್ದ ಚಿನ್ನವನ್ನು ಕಳವು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಗರ್ಭಗುಡಿಯ ಚಿನ್ನದ ಲೇಪಿತ ತಾಮ್ರದ ಫಲಕಗಳನ್ನು ತೆಗೆಯಲಾಗಿತ್ತು ಮತ್ತು ಅವುಗಳನ್ನು ಮರಳಿ ತಂದಾಗ ಅಸಲಿ ಚಿನ್ನ ನಾಪತ್ತೆಯಾಗಿರುವುದು ವಿಶೇಷ ತನಿಖಾ ತಂಡದ (SIT) ಗಮನಕ್ಕೆ ಬಂದಿದೆ.
ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋಟಿ ಮತ್ತು ಕದ್ದ ಚಿನ್ನವನ್ನು ಖರೀದಿಸಿದ ಆರೋಪ ಹೊತ್ತಿರುವ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರು ಸೋನಿಯಾ ಗಾಂಧಿಯವರ ದೆಹಲಿಯ ನಿವಾಸದಲ್ಲಿ ಅವರನ್ನು ಭೇಟಿಯಾಗಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದನ್ನು ಓದಿದ್ದೀರಾ? ಶಬರಿಮಲೆ ಚಿನ್ನದ ಅವ್ಯವಹಾರ ಪ್ರಕರಣ: ಕೇರಳ, ಕರ್ನಾಟಕ, ತಮಿಳುನಾಡು ಸೇರಿ 21 ಕಡೆ ಇ.ಡಿ ದಾಳಿ
ಕೇರಳದಲ್ಲಿ ಶೀಘ್ರವೇ ಚುನಾವಣೆ ನಡೆಯಲಿರುವ ಕಾರಣ ಸದ್ಯ ರಾಜಕೀಯ ಚರ್ಚೆಯೂ ಅಧಿಕವಾಗಿದೆ. ಕೇರಳದ ಎಡರಂಗ ಸರ್ಕಾರವು (LDF) ಈ ಫೋಟೋಗಳನ್ನು ಬಳಸಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಜೆಪಿ ಪ್ರತಿಭಟನೆ ನಡೆಸಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಫೋಟೋಗಳನ್ನು ಉಲ್ಲೇಖಿಸಿ, “ಅತ್ಯಂತ ಭದ್ರತೆ ಇರುವ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಸಾಮಾನ್ಯರಿಗೂ ಮತ್ತು ಅನೇಕ ರಾಜಕಾರಣಿಗಳಿಗೂ ಅವಕಾಶ ಸಿಗುವುದಿಲ್ಲ. ಅಂತಹದರಲ್ಲಿ ಈ ಆರೋಪಿಗಳಿಗೆ ಭೇಟಿ ಮಾಡುವ ಅವಕಾಶ ಹೇಗೆ ಸಿಕ್ಕಿತು” ಎಂದು ಪ್ರಶ್ನಿಸಿದ್ದಾರೆ.
ಇವೆಲ್ಲವುದರ ನಡುವೆ ಕಾಂಗ್ರೆಸ್ ನಾಯಕರು ಈ ಆರೋಪಗಳನ್ನು ಅಲ್ಲಗಳೆದಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಹಳೆಯ ಫೋಟೋಗಳನ್ನು ಬಳಸಲಾಗುತ್ತಿದೆ ಎಂದು ವಾದಿಸಿದ್ದಾರೆ.





