ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ಚುನಾವಣೆಗಳನ್ನು ನಡೆಸುವುದು ಹಿಂಸಾಚಾರಕ್ಕೆ ಪರವಾನಗಿಯಾಗುವುದಿಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಹೈಕೋರ್ಟ್ ಆದೇಶದಲ್ಲಿ ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲ. ರಾಜ್ಯದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಬಹುದು ಎಂದು ಹೇಳಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? ದೈಹಿಕ ಸಂಪರ್ಕ ನಿರಾಕರಣೆ ಹಿಂದು ವಿವಾಹ ಕಾಯ್ದೆಯಡಿ ಅಪರಾಧ, ಐಪಿಸಿಯಡಿ ದೌರ್ಜನ್ಯವಲ್ಲ: ಹೈಕೋರ್ಟ್
“ರಾಜ್ಯವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸುತ್ತಿರುವುದರಿಂದ, ಇಡೀ ಪಶ್ಚಿಮ ಬಂಗಾಳಕ್ಕೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ಅಂತಿಮವಾಗಿ ಹೈಕೋರ್ಟಿನ ಆದೇಶದದಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಹೈಕೋರ್ಟ್ ನೀಡಿರುವ ತೀರ್ಪು ಯಾವುದೇ ಹಸ್ತಕ್ಷೇಪ ಉಂಟುಮಾಡುವುದಿಲ್ಲ”ಎಂದು ಪೀಠವು ತಿಳಿಸಿದೆ.
“ನಾವು ಮತದಾನಕ್ಕೆ ತೆರಳುವ ಮೊದಲು, ಪ್ರಚಾರ ಕೈಗೊಳ್ಳುವ ಅವಧಿ ಹೆಚ್ಚಿರುತ್ತದೆ ಎಂಬ ಅರಿವು ನಮಗಿದೆ. ಅಗತ್ಯವಿರುವ ಪಡೆಗಳಿಗಾಗಿ ನಾವು ರಾಜ್ಯವನ್ನು ವಿನಂತಿಸಬೇಕು. ಕಂಪನಿಗಳನ್ನು ನಿಯೋಜಿಸಲು ಕೂಡ ನಾವು ಕೇಳಿದ್ದೇವೆ” ಎಂದು ರಾಜ್ಯ ಚುನಾವಣಾ ಆಯುಕ್ತರು ನ್ಯಾಯಾಲಯಕ್ಕೆ ತಿಳಿಸಿದರು.
ಇದೇ ವೇಳೆ, ನ್ಯಾಯಸಮ್ಮತ ಚುನಾವಣೆ ನಡೆಸುವುದು ತಮ್ಮ ಆದ್ಯ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ಸಾಕಷ್ಟು ಭದ್ರತೆಯನ್ನು ಒದಗಿಸುವುದಾಗಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪರ ವಕೀಲರು ಕೂಡ ಹೇಳಿದರು.





