ಬಿಜೆಪಿ-ಆರ್ಎಸ್ಎಸ್ ಅಜೆಂಡಾ ಪ್ರಕಾರ ಸಂವಿಧಾನವನ್ನು ತಿದ್ದುಪಡಿ ಮಾಡಿದರೆ ಸಂಸದೀಯ ಪ್ರಜಾಪ್ರಭುತ್ವ, ಫೆಡರಲಿಸಂ, ಅಲ್ಪಸಂಖ್ಯಾತರ ಹಕ್ಕುಗಳು ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಸೋಮವಾರ ಹೇಳಿದ್ದಾರೆ.
ಸಂವಿಧಾನವನ್ನು ತಿದ್ದುಪಡಿ ಮಾಡಲು ತಮ್ಮ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ವಿರುದ್ಧ ಚಿದಂಬರಂ ಕಿಡಿಕಾರಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿರುವ ಚಿದಂಬರಂ, “ಸಂವಿಧಾನವನ್ನು ತಿದ್ದುಪಡಿ ಮಾಡುವ ಬಿಜೆಪಿಯ ಉದ್ದೇಶವು ಎಂದಿಗೂ ರಹಸ್ಯವಾಗಿರಲಿಲ್ಲ. ಹತ್ತಾರು ಬಿಜೆಪಿ ನಾಯಕರು ಖಾಸಗಿ ಸಂಭಾಷಣೆಗಳಲ್ಲಿ ಭಾರತವು ಹಿಂದು ರಾಷ್ಟ್ರವಾಗಬೇಕು, ಹಿಂದಿ ಭಾರತದ ಏಕೈಕ ಅಧಿಕೃತ ಭಾಷೆಯಾಗಬೇಕು. ಕೇಂದ್ರ ಸರ್ಕಾರ ಬಲಿಷ್ಠವಾಗಿರಬೇಕು ಮತ್ತು ರಾಜ್ಯ ಸರ್ಕಾರಗಳ ಮೇಲೆ ಮೇಲುಗೈ ಸಾಧಿಸಬೇಕೆಂದು ಹೇಳುತ್ತಲೇ ಇರುತ್ತಾರೆ” ಎಂದು ಹೇಳಿದ್ದಾರೆ.
“ಕೆಲವೊಮ್ಮೆ, ಹೆಗಡೆ ಅಂತವರ ಮಾತುಗಳ ವಿಚಾರದಲ್ಲಿ ಬಿಜೆಪಿಗರು ಮೌನವಾಗಿರುತ್ತಾರೆ. ಇದು ಅವರ ಹಳಯ ತಂತ್ರ” ಎಂದು ಹೇಳಿದ್ದಾರೆ.
“ಆರ್ಎಸ್ಎಸ್/ಬಿಜೆಪಿ ಕಾರ್ಯಕರ್ತರು ಹೇಳುವ ಸಂವಿಧಾನವನ್ನು ತಿದ್ದುಪಡಿ ಮಾಡುವ ಹೇಳಿಕೆಗಳನ್ನು ಬಿಜೆಪಿ ಪೋಷಿಸುತ್ತದೆ. ಬಿಜೆಪಿಗರು ಸಂವಿಧಾನ ತಿದ್ದುಪಡಿಗೆ ಉತ್ಸುಕರಾಗಿದ್ದಾರೆ” ಎಂದು ಚಿದಂಬರಂ ಹೇಳಿದರು.
ಹೆಗಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅವರ ಹೇಳಿಕೆ ವೈಯಕ್ತಿಕ ಅಭಿಪ್ರಯಾ ಎಂದಿದೆ. “ಸಂವಿಧಾನದ ಕುರಿತು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಆ ಹೇಳಿಕೆ ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ಬಿಜೆಪಿ ಪುನರುಚ್ಚರಿಸುತ್ತದೆ. ಹಗಡೆ ಅವರಿಂದ ಹೇಳಿಕೆ ಬಗ್ಗೆ ವಿವರಣೆ ಕೇಳುತ್ತದೆ” ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.




