ದೇಶಭಕ್ತಿಯನ್ನು ಯಾವುದೇ ಒಂದು ಧರ್ಮದೊಂದಿಗೆ ಗುರುತಿಸಲು ಸಾಧ್ಯವಿದೆ. ಹಾಗೆ ಗುರುತಿಸುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದದ್ದು. ಇದರಿಂದ, ಸಾಮಾಜಿಕ ವಿಭಜನೆ ಉಂಟಾಗುತ್ತದೆ. ಭಾರತೀಯ ಮುಸ್ಲಿಮರು ಭಾರತವನ್ನು ಪ್ರೀತಿಸುತ್ತಾರೆ ಮತ್ತು ಜಿನ್ನಾರನ್ನು ವಿರೋಧಿಸುತ್ತಾರೆ ಎಂದು ಸಂಸದ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಲೋಕಸಭೆಯಲ್ಲಿ ನಡೆಯುತ್ತಿರುವ ‘ವಂದೇ ಮಾತರಂ’ ಕುರಿತಾದ ಚರ್ಚೆಯ ವೇಳೆ ಅವರು ಮಾತನಾಡಿದರು. “ಸಂವಿಧಾನದ ಪೀಠಿಕೆಯಲ್ಲಿ ಬರೆಯಲಾಗಿರುವ ಚಿಂತನೆ, ಅಭಿವ್ಯಕ್ತಿ, ನಂಬಿಕೆ ಹಾಗೂ ಆರಾಧನೆಯ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಈ ಹಕ್ಕಗಳು ಯಾವುದೇ ಧಾರ್ಮಿಕ ಗುರುತು ಅಥವಾ ಚಿಹ್ನೆಗಳೊಂದಿಗೆ ಸಂಯೋಜನೆ ಆಗಿಲ್ಲ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಗೋವಾ ನೈಟ್ಕ್ಲಬ್ ದುರಂತ | ಸ್ಥಳದಿಂದ ಪರಾರಿಯಾದ ‘ಲೂಥ್ರಾ ಬ್ರದರ್ಸ್’ ಯಾರು ಗೊತ್ತೇ?
“ಸಂವಿಧಾನವು ‘ಭಾರತದ ಪ್ರಜೆಗಳಾದ ನಾವು’ ಎನ್ನುವ ಮೂಲಕ ಆರಂಭವಾಗುತ್ತದೆ. ಅಲ್ಲಿ, ಯಾವುದೇ ಧರ್ಮ, ದೇವರ ಹೆಸರಿಲ್ಲ. ಅಂತಹ ಹೆಸರುಗಳಿಂದ ಆರಂಭವಾಗುವುದೂ ಇಲ್ಲ. ಸಂವಿಧಾನ ಸಭೆಯಲ್ಲಿಯೇ ವಂದೇ ಮಾತರಂ ಕುರಿತು ಚರ್ಚೆ ನಡೆಸಿ, ಅಗತ್ಯ ತಿದ್ದುಪಡಿಗಳನ್ನು ಪರಿಗಣಿಸಲಾಗಿದೆ” ಎಂದು ವಿವರಿಸಿದ್ದಾರೆ.
“ದೇಶವು ಯಾವುದೇ ಒಂದು ಧರ್ಮದ ಆಸ್ತಿಯಲ್ಲ. ಭಾರತೀಯ ಮುಸ್ಲಿಮರು ಜಿನ್ನಾ ಅವರ ಕಟ್ಟಾ ವಿರೋಧಿಗಳು, ಅದಕ್ಕಾಗಿಯೇ, ಇಲ್ಲಿನ ಮುಸ್ಲಿಮರು ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದರು. ಇಲ್ಲೇ ಬದುಕಿದರು” ಎಂದು ಓವೈಸಿ ಹೇಳಿದ್ದಾರೆ.




