ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರಗಳನ್ನು ಹಿಂಪಡೆಯಲು ಮತ್ತು ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿದೆ. ಆದರೂ ಮಹಾಘಟಬಂಧನಲ್ಲಿ ಸೀಟು ಹಂಚಿಕೆ ಕಿತ್ತಾಟ ಮುಗಿದಿಲ್ಲ. ಈ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ವ್ಯಂಗವಾಡುತ್ತಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ ನಾಮಪತ್ರವನ್ನು ಹಿಂಪಡೆಯಲು ಇಂದು ಕೊನೆಯ ದಿನಾಂಕವಾಗಿದೆ. ಈಗಾಗಲೇ ವಿವಿಧ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸಲ್ಲಿಸಿದ 2496 ನಾಮಪತ್ರಗಳಲ್ಲಿ 487 ನಾಮಪತ್ರಗಳು ತಿರಸ್ಕೃತಗೊಂಡಿವೆ. 2,009 ನಾಮಪತ್ರಗಳು ಮಾನ್ಯವಾಗಿವೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಕಾರಣ ಸಂಜೆಯ ಬಳಿಕ ಅಭ್ಯರ್ಥಿಗಳ ಅಂತಿಮ ಸಂಖ್ಯೆ ಖಚಿತವಾಗಿ ತಿಳಿಯಲಿದೆ.
ಇದನ್ನು ಓದಿದ್ದೀರಾ? ಧನಕರ್ ರಾಜೀನಾಮೆ ಹಿಂದಿದೆಯೇ ಅಧಿಕಾರದಾಹಿ BJPಯ ಬಿಹಾರ ಚುನಾವಣಾ ಲೆಕ್ಕಾಚಾರ?
ಈ ನಡುವೆ ಎರಡನೇ ಹಂತಕ್ಕೆ 20 ಜಿಲ್ಲೆಗಳಾದ್ಯಂತ 122 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿದೆ. ನಿನ್ನೆಯವರೆಗೆ ಒಟ್ಟು 1,066 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲಾಗುತ್ತಿದೆ. ಅಕ್ಟೋಬರ್ 23ರವರೆಗೆ ಎರಡನೇ ಹಂತದ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳನ್ನು ಅಭ್ಯರ್ಥಿಗಳು ಹಿಂಪಡೆಯಲು ಅವಕಾಶವಿದೆ.
ಬಿಹಾರದ ಎಲ್ಲಾ 243 ವಿಧಾನಸಭಾ ಸ್ಥಾನಗಳಲ್ಲಿ 121 ಕ್ಷೇತ್ರಗಳಿಗೆ ನವೆಂಬರ್ 6 ಮೊದಲ ಹಂತದಲ್ಲಿ ಮತ್ತು 122 ಕ್ಷೇತ್ರಗಳಿಗೆ ನವೆಂಬರ್ 11ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆ ಗಡುವು ಮುಗಿದ ನಂತರ, ರಾಷ್ಟ್ರೀಯ ಜನತಾ ದಳ (ಆರ್ಜೆಡಿ), ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ.
ಕೆಲ ಕ್ಷೇತ್ರದಲ್ಲಿ ಮಹಾಮೈತ್ರಿಕೂಟದ ಅಭ್ಯರ್ಥಿಗಳು ಪರಸ್ಪರ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ ಎಂದು ಹೇಳಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಆರ್ಜೆಡಿ ನಾಯಕ ಮತ್ತು ಮಹಾಮೈತ್ರಿಕೂಟದ ಚುನಾವಣಾ ಸಮನ್ವಯ ಸಮಿತಿಯ ಅಧ್ಯಕ್ಷ ತೇಜಸ್ವಿ ಪ್ರಸಾದ್ ಯಾದವ್ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಇನ್ನೊಂದೆಡೆ ಎನ್ಡಿಎ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಚಿರಾಗ್ರ ‘ಎಲ್ಜೆಪಿ’ – ಪ್ರಶಾಂತ್ ಕಿಶೋರ್ರ ‘ಜನ ಸುರಾಜ್’ ಮೈತ್ರಿ?
ಒಂದೇ ಕ್ಷೇತ್ರದಲ್ಲಿ ಮೈತ್ರಿಕೂಟದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿರುವುದನ್ನು ಪೂರ್ಣಿಯಾದ ಸ್ವತಂತ್ರ ಸಂಸದ ಪಪ್ಪು ಯಾದವ್ ಟೀಕಿಸಿದ್ದಾರೆ. ಹಾಗೆಯೇ ಟಿಕೆಟ್ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಅವರದ್ದು ಎನ್ನಲಾದ ವೈರಲ್ ಆಡಿಯೋ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
“ಒಟ್ಟು 12 ಕ್ಷೇತ್ರಗಳಲ್ಲಿ ಇಬ್ಬಿಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಮೈತ್ರಿ ಸಾಧ್ಯವೇ? ಕಾಂಗ್ರೆಸ್ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕು. ಟಿಕೆಟ್ ಹಂಚಿಕೆಯೇ ಸಂಪೂರ್ಣವಾಗಿ ತಪ್ಪಾಗಿದೆ. ಎಲ್ಲೆಲ್ಲಾ ಇಬ್ಬಿಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೋ ಅಲ್ಲೆಲ್ಲಾ ನಾಮಪತ್ರ ಹಿಂಪಡೆಯಬೇಕು ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಮೈತ್ರಿ ದುರ್ಬಲವಾಗಿದೆ. ಇಂದು ಮುಂಜಾನೆವರೆಗೂ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇದು ತಪ್ಪು. ಕಾಂಗ್ರೆಸ್ ಮಾತ್ರ ಮೈತ್ರಿ ನಾಟಕವಾಡುತ್ತಿದೆ. ಕಾಂಗ್ರೆಸ್ ಹಿಂದುಳಿದ ವರ್ಗಗಳು, ಎಸ್ಸಿ-ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನ ಮಾಡಿದೆ” ಎಂದು ಹೇಳಿದ್ದಾರೆ.
ಈವರೆಗೆ ಕಾಂಗ್ರೆಸ್ ಒಟ್ಟಾಗಿ 60 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆರ್ಜೆಡಿ 143 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಇದರಲ್ಲಿ 24 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಮತ್ತು ಆರ್ಜೆಡಿ ಟಿಕೆಟ್ಗಳನ್ನು ಮಾರಾಟಕ್ಕಿಟ್ಟಿವೆ ಎಂದು ಟಿಕೆಟ್ ಸಿಗದ ಆಕಾಂಕ್ಷಿಗಳು ಆರೋಪಿಸುತ್ತಿದ್ದಾರೆ. ಈ ನಡುವೆ ಮೊದಲ ಹಂತದ ಕ್ಷೇತ್ರಗಳ ಪೈಕಿ 10 ಕಡೆ ಪರಸ್ಪರ ಸ್ಪರ್ಧೆಗಿಳಿದಿವೆ. ಎರಡನೇ ಹಂತದಲ್ಲಿ ಇನ್ನಷ್ಟೂ ಹೆಚ್ಚಾಗುವ ಸಾಧ್ಯತೆಯಿದೆ.





